ಸುಳ್ಳು ಸುದ್ದಿಗೆ ಕುಖ್ಯಾತ 'ಪೋಸ್ಟ್ ಕಾರ್ಡ್ ನ್ಯೂಸ್'ನ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಬಂಧನ

ಬೆಂಗಳೂರು, ಮಾ.29: ಸದಾ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದರಲ್ಲೇ ಕುಖ್ಯಾತಿ ಗಳಿಸಿರುವ ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ಸೈಟ್ ನ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ 153ಎ, 295ಎ ಹಾಗು 120 ಬಿ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.
ಜೈನ ಮುನಿ ಶ್ರೀಉಪಾಧ್ಯಾಯ ಮಾಯಾಂಕ್ ಸಾಗರ್ ಜಿ ಮಹಾರಾಜ್ ಎಂಬವರು ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಆದರೆ ಮಹೇಶ್ ವಿಕ್ರಂ ಹೆಗ್ಡೆಯ ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ಸೈಟ್ "ಮುಸ್ಲಿಮ್ ಯುವಕರು ಜೈನ ಮುನಿಯ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಸುಳ್ಳು ಸುದ್ದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಗಫ್ಫಾರ್ ಬೇಗ್ ಎಂಬವರು ಅವರು ವೆಬ್ಸೈಟ್ನ ಮಾಲಕ ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹೇಶ್ ವಿಕ್ರಂ ಹೆಗಡೆಯನ್ನು ಬಂಧಿಸಿದ್ದಾರೆ.
ಜೈನ ಮುನಿ ಶ್ರೀಉಪಾಧ್ಯಾಯ ಮಾಯಾಂಕ್ ಅವರು ಶ್ರವಣಬೆಳಗೊಳದ ಗೊಮ್ಮಟೇಶ್ವರ ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ತಮ್ಮ ಸತ್ಸಂಗ್ ಪರಿವಾರದೊಂದಿಗೆ ಮಾ.11ರ ಸಂಜೆ ನಂಜನಗೂಡಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ದ್ವಿಚಕ್ರ ವಾಹನ ಇವರಿಗೆ ಢಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅವರು ಗಾಯಗೊಂಡಿದ್ದರು.
ಮಹೇಶ್ ವಿಕ್ರಂ ಹೆಗಡೆಯನ್ನು ಬಂಧಿಸಿರುವ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ “ಇಂದು ಬೆಳಗ್ಗೆ ಹೇಡಿ ಕಾಂಗ್ರೆಸ್ ಸರಕಾರ ಸಿಸಿಬಿಯನ್ನು ಬಳಸಿಕೊಂಡು ಐಟಿ ಕಾಯ್ದೆಯಡಿ ಮಹೇಶ್ ವಿಕ್ರಮ್ ಹೆಗ್ಡೆಯನ್ನು ಬಂಧಿಸಿದೆ" ಎಂದಿದ್ದಾರೆ.
ಮಹೇಶ್ ವಿಕ್ರಂ ಹೆಗ್ಡೆ ಪೋಸ್ಟ್ ಕಾರ್ಡ್ ನ್ಯೂಸ್ ನ ಸ್ಥಾಪಕನಾಗಿದ್ದು, ಈ ವೆಬ್ ಸೈಟ್ ಸಮುದಾಯಗಳ ನಡುವೆ ದ್ವೇಷ ಬಿತ್ತಲು ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದರಲ್ಲೇ ಕುಖ್ಯಾತಿ ಗಳಿಸಿದೆ. ಅವಹೇಳನಕಾರಿ ಪೋಸ್ಟ್ ಒಂದಕ್ಕೆ ಸಂಬಂಧಿಸಿ 2017ರ ನವೆಂಬರ್ ನಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ನ ಅಡ್ಮಿನ್ ಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ವಿಪರ್ಯಾಸವೆಂದರೆ ಟ್ವಿಟರ್ ನಲ್ಲಿ ಈತನನ್ನು ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದಾರೆ.
Today morning Coward Congress Govt (Karnataka) arrested @mvmeet Mahesh Vikram Hegde under unconnected IT act 66, that too by using CCB! Shame on you @INCKarnataka. pic.twitter.com/SZGUJKsfzi
— Pratap Simha (@mepratap) March 29, 2018







