ಮೈಸೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ವಿನೂತನ ಪ್ರತಿಭಟನೆ
ಮೈಸೂರು,ಮಾ.29: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧಿಸಿ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ಸದಸ್ಯರು ತಮ್ಮ ಕೈಕಾಲುಗಳನ್ನು ಹಗ್ಗದಿಂದ ಬಂಧಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರು ನ್ಯಾಯಾಲಯದ ಎದುರುಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಭಟನಾಕಾರರು, ಕಾವೇರಿ ನೀರು ನಿರ್ವಹಣಾ ಮಂಡಲಿ ರಚನೆಯಾದರೆ ಕರ್ನಾಟಕದ 90ನಗರ 20 ತಾಲೂಕು ಹಾಗೂ 2 ಲಕ್ಷ ಗ್ರಾಮಗಳು ಮತ್ತು ಬೆಂಗಳೂರಿನ ಮೂರನೇ ಎರಡರಷ್ಟು ಭಾಗದ ಜನತೆಯ ಕುಡಿಯುವ ನೀರಿನ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ. ಕಾವೇರಿಯ ಬಕೆಟ್ ನೀರಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು. ಒಂದು ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದಲ್ಲಿ ಕನ್ನಡ ನಾಡಿನ ಕರ್ನಾಟಕದ ಬೆಲೆಕಟ್ಟಲಾಗದ ಬಹುದೊಡ್ಡ ಆಸ್ತಿಗಳಾದ ಕೆ.ಆರ್.ಎಸ್, ಹೇಮಾವತಿ, ಕಬಿನಿ, ಹಾರಂಗಿ ಈ ನಾಲ್ಕೂ ಜಲಾಶಯಗಳನ್ನು ತಮಿಳುನಾಡಿಗೆ ತಾಂಬೂಲ ನೀಡಿ ನಾಡಿನ ಜನ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ. ರಾಜ್ಯಾದ್ಯಂತ ಉಗ್ರ ಹೋರಾಟದ ಪ್ರತಿಭಟನೆ ನಡೆಸುತ್ತಾರೆ ಎಂದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್ ದೂರ ಸುರೇಶ್, ಬಸವರಾಜು, ಬಾಬು, ಡಾ.ರಘುರಾಂ ವಾಜಪೇಯಿ, ಶ್ರೀಕಂಠ, ಕುಮಾರ್ ವೀರನಗೆರೆ, ಶಿವು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.