ಇಸ್ರೋ ಸಂವಹನ ಉಪಗ್ರಹ ಯಶಸ್ವಿ ಉಡಾವಣೆ
ಹೊಸದಿಲ್ಲಿ, ಮಾ.29: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಎಸ್ಎಟಿ-6ಎಯನ್ನು ಗುರುವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕಕ್ಷೆಗೆ ಯಶಸ್ವಿಯಾಗಿ ಸೇರಿಸುವುದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮಹತ್ಸಾಧನೆ ಮಾಡಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ದೇಶೀಯ ನಿರ್ಮಿತ ಕ್ರಯೊಜೆನಿಕ್ ಸ್ಟೇಜ್ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ಸಂವಹನ ಉಪಗ್ರಹವನ್ನು ಸಂಜೆ 4:56ಕ್ಕೆ ‘ಜಿಯೊಸಿಂಕ್ರನಸ್’ ಉಪಗ್ರಹ ಉಡ್ಡಯನ ವಾಹನ (ಜಿಎಸ್ಎಲ್ವಿ-ಎಫ್08)ದ ಮೂಲಕ ಉಡ್ಡಯನ ಮಾಡಲಾಗಿದ್ದು 17.46 ನಿಮಿಷಗಳ ಬಳಿಕ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಉದ್ದೇಶಿತ ಗುರಿಯನ್ನು ಸಾಧಿಸಿದ ಬಳಿಕ ಇಸ್ರೋ ವಿಜ್ಞಾನಿಗಳು ಪರಸ್ಪರರನ್ನು ಆಲಿಂಗಿಸಿಕೊಂಡು ಸಂತಸ ಹಂಚಿಕೊಂಡರು. ದೇಶೀಯ ನಿರ್ಮಿತ ಕ್ರಯೊಜೆನಿಕ್ ಇಂಜಿನ್ ಮೂಲಕ ನಡೆಸಲಾಗಿರುವ ಆರನೇ ಯಶಸ್ವೀ ಉಡಾವಣೆ ಇದಾಗಿದೆ. ಜಿಎಸ್ಎಟಿ-6ಎ ಉಪಗ್ರಹವನ್ನು ಅತ್ಯಂತ ಕರಾರುವಕ್ಕಾಗಿ ನಿರ್ದಿಷ್ಟ ಕಕ್ಷೆಯಲ್ಲಿ ಸೇರಿಸಲಾಗಿದೆ . ಈ ಹಿಂದೆ ಉಡಾವಣೆಗೊಂಡಿರುವ ಜಿಎಸ್ಎಟಿ-6 ಉಪಗ್ರಹಕ್ಕೆ ಪೂರಕವಾಗಿ ಜಿಎಸ್ಟಿಎ-6ಎ ಉಪಗ್ರಹ ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕ ಸಂವಹನ ವ್ಯವಸ್ಥೆಗೆ ಈ ಉಪಗ್ರಹ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
10 ವರ್ಷ ಜೀವಿತಾವಧಿಯ ಸುಮಾರು 200 ಕಿ.ಗ್ರಾಂ ಭಾರದ ಉಪಗ್ರಹವು ಎಸ್-ಬ್ಯಾಂಡ್ನ 5 ಸ್ಪಾಟ್ ತರಂಗಾಂತರ ಹಾಗೂ ಸಿ-ಬ್ಯಾಂಡ್ನ ಒಂದು ಸ್ಪಾಟ್ ತರಂಗಾಂತರದ ಮೊಬೈಲ್ ಸಂವಹನ ಅಪ್ಲಿಕೇಶನ್ ವ್ಯವಸ್ಥೆ ಒದಗಿಸಲಿದೆ. ಭವಿಷ್ಯದಲ್ಲಿ ಉಪಗ್ರಹ ಆಧರಿತ ಮೊಬೈಲ್ ಸಂವಹನ ಪ್ರಕ್ರಿಯೆ ಹಾಗೂ ಅಪ್ಲಿಕೇಶನ್ಗೆ ಬೆಂಬಲ ನೀಡುವ ಪ್ರಮುಖ ಉದ್ದೇಶದಿಂದ ಈ ಉಪಗ್ರಹವನ್ನು ಉಡಾಯಿಸಲಾಗಿದೆ ಎಂದು ಶಿವನ್ ತಿಳಿಸಿದ್ದಾರೆ. ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಉಪಗ್ರಹ ಉಡಾವಣಾ ಸೇವೆಗಳನ್ನು ರಫ್ತು ಮಾಡುವ ಮೂಲಕ ಭಾರತ ಗಳಿಸುವ ವಿದೇಶಿ ವಿನಿಮಯದಲ್ಲಿ ಇತ್ತೀಚಿನ ವರ್ಷದಲ್ಲಿ ಗಣನೀಯ ಪ್ರಮಾಣದ ವೃದ್ಧಿಯಾಗಿದೆ. 2014-15ರಲ್ಲಿ 149 ಕೋಟಿ ರೂ. ವಿದೇಶಿ ವಿನಿಮಯ ಗಳಿಸಿದ್ದರೆ 2016-17ರಲ್ಲಿ 394 ಕೋಟಿ ರೂ. ಗಳಿಸಿದೆ