ಸಾವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗದ ಲೀಲಾ
ನೇತ್ರ ದಾನ ಮಾಡಿ ಮಾದರಿಯಾದ ಮೂಕ ಮಹಿಳೆ
![ಸಾವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗದ ಲೀಲಾ ಸಾವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗದ ಲೀಲಾ](https://www.varthabharati.in/sites/default/files/images/articles/2018/03/30/eye.gif)
ಶಿವಮೊಗ್ಗ, ಮಾ.30: ಮೂಕ ಮಹಿಳೆಯೊಬ್ಬರು ಮರಣಾನಂತರ ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ನಿವಾಸಿ ಲೀಲಾ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
72 ವರ್ಷದ ಲೀಲಾ ಅವರಿಗೆ ಮಾತನಾಡಲು ಬರುತ್ತಿರಲಿಲ್ಲ. ಇವರ ಪತಿ ನಿಧನರಾಗಿ ಸುಮಾರು ಮೂರು ದಶಕಗಳೇ ಕಳೆದಿತ್ತು. ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದ ಇವರು, ಮಾ.25ರಂದು ನಿಧನರಾಗಿದ್ದಾರೆ. ಆದರೆ ಇವರು ಮರಣಾನಂತರ ಮತ್ತೊಬ್ಬರ ಬಾಳು ಬೆಳಗುವ ಮೂಲಕ ಸದಾ ನೆನಪಿನಲ್ಲುಳಿಯುವ ಕೆಲಸ ಮಾಡಿದ್ದಾರೆ.
ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಲೀಲಾ ಅವರು, ತಮ್ಮ ಮರಣಾನಂತರ ತಮ್ಮೆರೆಡು ಕಣ್ಣುಗಳನ್ನು ದೃಷ್ಟಿ ಹೀನರಿಗೆ ದಾನ ಮಾಡುವಂತೆ ಸಹೋದರ ಕೆ.ಬಿ.ಮೋಹನ್ಹಾಗೂ ತಂಗಿಯ ಮಗ, ಪರಿಸರ ಹೋರಾಟಗಾರರೂ ಆದ ಪರಿಸರ ರಮೇಶ್ ಅವರಿಗೆ ಮೊದಲೇ ತಿಳಿಸಿದ್ದರು. ಮಾ.25ರಂದು ರಾತ್ರಿ ಲೀಲಾ ನಿಧನರಾಗಿದ್ದಾರೆ. ಅವರ ಇಚ್ಚೆಯಂತೆ ತಕ್ಷಣವೇ ಕೆ.ಬಿ.ಮೋಹನ್ ಹಾಗೂ ಪರಿಸರ ರಮೇಶ್ ಅವರು ಶಂಕರ ಕಣ್ಣಿನ ಆಸ್ಪತ್ರೆಯವರಿಗೆ ನೇತ್ರದಾನದ ಬಗ್ಗೆ ಮಾಹಿತಿ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ ಕೆ.ಬಿ.ಮೋಹನ್ ಅವರ ನಿವಾಸಕ್ಕೆ ಆಗಮಿಸಿದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ನೇತ್ರದಾನದ ಪ್ರಕ್ರಿಯೆ ನೆರವೇರಿಸಿದರು.
‘ತಮ್ಮ ಚಿಕ್ಕಮ್ಮ ಲೀಲಾರವರಿಗೆ ಮಾತನಾಡಲು ಬರುತ್ತಿರಲಿಲ್ಲ. ಚಿಕ್ಕಪ್ಪ ತೀರಿಕೊಂಡು ಹಲವು ದಶಕಗಳೇ ಆಗಿದ್ದವು. ಆ ಬಳಿಕ ಲೀಲಾ ಅವರು ಫ್ಯಾಬ್ರಿಕೇಷನ್ ಕೆಲಸ ಮಾಡುವ ಸಹೋದರ ಕೆ.ಬಿ.ಮೋಹನ್ ಮನೆಯಲ್ಲಿ ನೆಲೆಸಿದ್ದರು. 72ರ ವಯೋಮಾನದಲ್ಲೂ ಅವರ ಕಣ್ಣುಗಳು ಆರೋಗ್ಯವಾಗಿದ್ದವು. ಕನ್ನಡಕ ಧರಿಸುತ್ತಿರಲಿಲ್ಲ. ತಮ್ಮ ಕಣ್ಣುಗಳು ಚೆನ್ನಾಗಿರುವುದನ್ನು ಅರಿತಿದ್ದ ಚಿಕ್ಕಮ್ಮ, ತಮ್ಮ ಮರಣಾನಂತರ ನೇತ್ರದಾನ ಮಾಡಲು ನಿರ್ಧರಿಸಿದ್ದರು. ಸಂಪೂರ್ಣ ಅಂಧರಿಗೆ ತಮ್ಮ ಕಣ್ಣುಗಳನ್ನು ಅಳವಡಿಸಬೇಕೆಂಬ ಮಹಾದಾಸೆ ಹೊಂದಿದ್ದರು. ಅವರ ಮನದಾಸೆಯಂತೆ ನೇತ್ರದಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದೇವೆ.
ದೇಶದಲ್ಲಿ ಅದೆಷ್ಟೊ ಅಂಧರಿದ್ದಾರೆ. ಇಂತಹವರ ಬಾಳಿಗೆ ಬೆಳಕಾಗುವ ಉದ್ದೇಶದಿಂದ ಪ್ರತಿಯೋರ್ವರು ತಮ್ಮ ಮರಣಾನಂತರ ನೇತ್ರದಾನ ಮಾಡುವ ನಿರ್ಧಾರ ಮಾಡಬೇಕಾಗಿದೆ. ಆ ಮೂಲಕ ಮರಣಾನಂತರವೂ ಜನಮಾನಸದಲ್ಲಿ ಉಳಿಯಬಹುದು.
-ಪರಿಸರ ಹೋರಾಟಗಾರ ಪರಿಸರ ಸಿ. ರಮೇಶ್