'ತುಳು ನಾಟಕ ಪರ್ಬ: ಕೆ.ಎನ್.ಟೇಲರ್ ತುಳು ರಂಗಭೂಮಿಯ ಪ್ರಾತ ಸ್ಮರಣೀಯರು'
ಮಂಗಳೂರು, ಮಾ.30: ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ವರನಟ ರಾಜ್ಕುಮಾರ್ರಂತೆ ತುಳು ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕೆ.ಎನ್. ಟೇಲರ್ ಪ್ರಾತ ಸ್ಮರಣೀಯರಾಗಿದ್ದಾರೆ ಎಂದು ತುಳು ರಂಗ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ಹೇಳಿದರು.
ತುಳು ಸಾಹಿತ್ಯ ಅಕಾಡಮಿ ಮತ್ತು ಮನಪಾ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ತುಳು ನಾಟಕ ಪರ್ಬ 5ನೆ ದಿನದ ಕಾರ್ಯಕ್ರಮದಲ್ಲಿ ತುಳುರಂಗ ಭೂಮಿಯ ದಿಗ್ಗಜ ಕೆ. ಎನ್. ಟೇಲರ್ರ ಸಂಸ್ಮರಣೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಾರ್ಕಳದ ಕಡಂದಲೆಯ ನಾರಾಯಣ ಮಂಗಳೂರಿಗೆ ಬಂದು ತನ್ನ ನಿಕಟಬಂಧುಗಳ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ವೃತ್ತಿ ಕಲಿತು ಕೆ. ಎನ್. ಟೈಲರ್ ಎಂದು ಗುರುತಿಸಿಕೊಂಡರು. ನಾಟಕದ ಮೇಲಿನ ಅಭಿಮಾನದಿಂದ ತನ್ನ ವೃತ್ತಿಯಲ್ಲಿ ನಷ್ಟ ಹೊಂದಿ ಮುಂಬಯಿಗೆ ಹೋಗಿ ಬಳಿಕ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಯಶಸ್ಸು ಕಂಡರು. ಉರಿಗೆ ಬಂದು ಟೈಲರ್ ವೃತ್ತಿಯನ್ನು ಮುಂದುವರಿಸಿದರು. ನಾಟಕ ಕ್ಷೇತ್ರಕ್ಕೆ ಪೂರಕ ವಾತಾವರಣ ಇಲ್ಲದಂತಹ ಸಂದರ್ಭದಲ್ಲೂ ಲಭ್ಯ ತಂತ್ರಜ್ಞಾನ ಬಳಸಿ ರಂಗ ಚಟುವಟಿಕೆಗೆ ಆಧುನಿಕ ಸ್ಪರ್ಶ ನೀಡಿದವರು ಕೆ.ಎನ್. ಟೇಲರ್ ಎಂದು ನವನೀತ ಶೆಟ್ಟಿ ನುಡಿದರು. 70ರ ದಶಕದಲ್ಲಿ ಪ್ರಥಮ ತುಳು ಸಿನೆಮಾ ಮಾಡಿದರು. ಆದರೆ ಬಿಡುಗಡೆಯಾದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನಗಳಿಸಿದೆ. 80ರ ದಶಕದಲ್ಲಿ ಬಿಡುಗಡೆಯಾದ ಹೆಚ್ಚಿನ ಸಿನೆಮಾಗಳು ಕೆ.ಎನ್. ಟೆಲರ್ ಅವರದ್ದು. ತನ್ನೆಲ್ಲಾ ನಾಟಕ ಹಾಗೂ ಸಿನೆಮಾಗಳಲ್ಲಿ ನಾಯಕ ನಟನಾಗಿಯೇ ಗುರುತಿಸಿಕೊಂಡದ್ದು ಟೇಲರ್ ಅವರ ಹೆಗ್ಗಳಿಕೆ ಎಂದು ನವನೀತ್ ಹೇಳಿದರು.
ಟೇಲರ್ರ ಒಡನಾಡಿ ಸೀತಾರಾಮ ಶೆಟ್ಟಿ ಪುಷ್ಪಾರ್ಚನೆ ಮಾಡಿದರು. ಮಮತಾ ಸುರೇಶ್ ಹಾಗೂ ಕುಟುಂಬ ಸದಸ್ಯರು, ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ, ಡಾ. ವೈ. ಎನ್ ಶೆಟ್ಟಿ, ಚಂದ್ರಶೇಖರ ಗಟ್ಟಿ, ಸುಧಾನಾಗೇಶ್, ಡಾ. ವಾಸುದೇವ ಬೆಳ್ಳೆ, ತಾರನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು.
ಸಂಸ್ಮರಣೆಯ ಬಳಿಕ ಕೆ. ಎನ್. ಟೇಲರ್ರ ಕೃತಿ ‘ತಮ್ಮಲೆ ಅರ್ವತ್ತನ ಕೋಲ’ ನಾಟಕವನ್ನು ರಮೇಶ್ ಆಚಾರ್ಯ ಪೆರ್ಡೂರು ನಿರ್ದೇಶನದಲ್ಲಿ ಕೂಡ್ದಿ ಕಲಾವಿದೆರ್ ರಂಗದ ಮೇಲೆ ಪ್ರದರ್ಶಿಸಿದರು. *ಕೆ.ಬಿ ಭಂಡಾರಿ ನೆಂಪು: ತುಳು ನಾಟಕ ಪರ್ಬದ 6ನೆ ದಿನದ ಕಾರ್ಯಕ್ರಮದಲ್ಲಿ ಕೆ.ಬಿ ಭಂಡಾರಿ ಅವರ ನೆಂಪು ಕಾರ್ಯಕ್ರಮ ಜರಗಿತು. ಹಿರಿಯ ಚಲನಚಿತ್ರ ನಟಿ ಸರೋಜಿನಿ ಶೆಟ್ಟಿ ನುಡಿನಮನ ಸಲ್ಲಿಸಿದರು.
ರಂಗಕಲಾವಿದ ನಿರಂಜನ್ ಸಾಲ್ಯಾನ್ ಪುಷ್ಪಾರ್ಜನೆ ನಡೆಸಿದರು. ಕೆ.ಬಿ. ಭಂಡಾರಿಯ ಕುಟುಂಬದ ಪ್ರತಿನಿಧಿಯಾಗಿ ಕಿಶನ್ಚಂದ್ ಮಾಡ, ಅಕಾಡಮಿ ಅಧ್ಯಕ್ಷ ಎ. ಸಿ. ಭಂಡಾರಿ, ಮನಪಾ ಸದಸ್ಯ ಎಂ. ಅಬ್ದುಲ್ ಅಜೀಜ್, ದೀಪಕ್ ಪೂಜಾರಿ ಭಾಗವಹಿಸಿದ್ದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ, ತಾರನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು.







