ಕೊಪ್ಪ: ಹಳೇ ದ್ವೇಷದಿಂದ ಮನೆಗೆ ನುಗ್ಗಿ ದಾಂಧಲೆ; ತಂದೆ ಮಕ್ಕಳು ಸೇರಿ ಐವರ ಬಂಧನ
![ಕೊಪ್ಪ: ಹಳೇ ದ್ವೇಷದಿಂದ ಮನೆಗೆ ನುಗ್ಗಿ ದಾಂಧಲೆ; ತಂದೆ ಮಕ್ಕಳು ಸೇರಿ ಐವರ ಬಂಧನ ಕೊಪ್ಪ: ಹಳೇ ದ್ವೇಷದಿಂದ ಮನೆಗೆ ನುಗ್ಗಿ ದಾಂಧಲೆ; ತಂದೆ ಮಕ್ಕಳು ಸೇರಿ ಐವರ ಬಂಧನ](https://www.varthabharati.in/sites/default/files/images/articles/2018/03/30/koppa crime (7).jpg)
ಚಿಕ್ಕಮಗಳೂರು, ಮಾ.30: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಾಕ್ಕಳು ಹಾಗೂ ಸ್ನೇಹಿತರೊಂದಿಗೆ ಸೇರಿ ಮನೆಯೊಂದಕ್ಕೆ ನುಗ್ಗಿ ದಾಂಧಲೆ ಮಾಡಿದ್ದಲ್ಲದೇ ಬಾಳೆ, ಅಡಿಕೆ ತೋಟಕ್ಕೆ ಹಾನಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆಬ್ಬೆಗದ್ದೆಯಲ್ಲಿ ಶುಕ್ರವಾರ ವರದಿಯಾಗಿದೆ.
ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೆಬ್ಬೆಗದ್ದೆ ಗ್ರಾಮದ ಮಂಜುನಾಥ್ ನಾಯಕ್ ಎಂಬಾತ ಅದೇ ಗ್ರಾಮದ ಸುರೇಶ್ ನಾಯಕ್ ಎಂಬವರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಸುರೇಶ್ ನಾಯಕ್ ಹರಿಹರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಂಜುನಾಥ್ ನಾಯಕ್ ಸೇರಿದಂತೆ ಆತನ ಇಬ್ಬರು ಮಕ್ಕಳಾದ ಅಭಿಜಿತ್, ಅಭಿಷೇಕ್ ಹಾಗೂ ಸ್ನೇಹಿತರಾದ ಶ್ರೀನಿವಾಸ್, ಶ್ರೀಕಾಂತ್ ಎಂಬವರನ್ನು ಬಂಧಿಸಿದ್ದಾರೆ.
ಘಟನೆ ವಿವರ: ಕಳೆದ ನಾಲ್ಕು ವರ್ಷಗಳ ಹಿಂದೆ ಹೆಬ್ಬೆಗದ್ದೆ ಗ್ರಾಮದಲ್ಲಿ ವಾಸವಿರುವ ಮಂಜುನಾಥ್ ನಾಯಕ್ ಹಾಗೂ ಆತನ ಪತ್ನಿ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಮಂಜುನಾಥ್ ತನ್ನ ಪತ್ನಿಗೆ ಹಲ್ಲೆ ಮಾಡಲು ಮುಂದಾಗಿದ್ದ. ಆಕೆ ಅಲ್ಲಿಂದ ತಪ್ಪಿಸಿಕೊಂಡು ಹತ್ತಿರದಲ್ಲೇ ಇದ್ದ ಸುರೇಶ್ ನಾಯಕ್ನ ಮನೆಗೆ ಬಂದಿದ್ದರು. ಬಳಿಕ ಸುರೇಶ್ ಅವರ ಮೊಬೈಲ್ನಿಂದಲೇ ಆಕೆ ತನ್ನ ಹೆತ್ತವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪತ್ನಿಗೆ ಸಹಾಯ ಮಾಡಿದ್ದನೆಂಬನ ಕಾರಣಕ್ಕೆ ಮಂಜುನಾಥ್ ನಾಯಕ್ ಸುರೇಶ್ ಅವರ ಮೇಲೆ ಕುಪಿತಗೊಂಡಿದ್ದ. ಈ ವಿಷಯ ಠಾಣೆಯ ಮೆಟ್ಟಿಲೇರಿ ರಾಜಿಯೂ ಆಗಿತ್ತು ಎಂದು ತಿಳಿದು ಬಂದಿದೆ.
ಆದರೆ ಸುರೇಶನ ಮೇಲೆ ಮಂಜುನಾಥ್ ಕಳೆದ ನಾಲ್ಕು ವರ್ಷಗಳಿಂದಲೂ ಹಗೆ ಸಾಧಿಸುತ್ತಲಿದ್ದನೆಂದು ತಿಳಿದು ಬಂದಿದ್ದು, ಗುರುವಾರ ರಾತ್ರಿ ಸುರೇಶ್ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕೊಪ್ಪ ತಾಲೂಕಿನ ಕಾರೇಮನೆ ಗ್ರಾಮದಲ್ಲಿದ್ದ ತಂದೆಯ ಮನೆಗೆ ಹೋಗಿ ಅಲ್ಲೇ ಉಳಿದಿದ್ದರು. ಈ ವಿಷಯ ತಿಳಿದ ಮಂಜುನಾಥ್ ನಾಯಕ್ ತನ್ನಿಬ್ಬರು ಮಕ್ಕಳು ಹಾಗೂ ಮತ್ತಿಬ್ಬರೊಂದಿಗೆ ಸುರೇಶ್ ಮನೆಯ ಬೀಗ ಒಡೆದು ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದ ಟಿವಿ, ಪೀಠೋಪಕರಣ, ಅಡುಗೆ ಪಾತ್ರೆ, ಸಿಲಿಂಡರ್, ಬಟ್ಟೆ, ದಿನಸಿ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ನೆಲ್ಲಕ್ಕೆ ಅಪ್ಪಳಿಸಿ ಹಾಳು ಮಾಡಿದ್ದಾರೆ. ಮನೆಗೆ ಹಾಕಲಾಗಿದ್ದ ಟೈಲ್ಸ್ಗೂ ಹಾನಿ ಮಾಡಿದ್ದಾರೆನ್ನಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಸುರೇಶ್ ನಾಯಕ್ನ ಜಮೀನಿಗೆ ಬಂದು ಬೆಳೆದು ನಿಂತಿದ್ದ ಬಾಳೆ, ಅಡಿಕೆ ಗಿಡಿಗಳನ್ನು ಕಡಿದು ಹಾಕಿದ್ದಾರೆ. ಅಲ್ಲದೇ ಇತ್ತೀಚೆಗೆ ಹೊಸದಾಗಿ ಕೊರೆಸಲಾಗಿದ್ದ ಕೊಳವೆ ಬಾವಿ ಹಾಗೂ ವಿದ್ಯುತ್ ಸಂಪರ್ಕವನ್ನೂ ಕಿತ್ತು ಹಾಕಿ ಅಪಾರ ನಷ್ಟವನ್ನುಂಟು ಮಾಡಿದ್ದಾರೆಂದು ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ ಸುರೇಶ್ ನಾಯಕ್ ತನ್ನ ಮನೆಗೆ ಬಂದು ನೋಡಿದಾಗ ದಾಂಧಲೆ ವಿಚಾರ ಬೆಳಕಿಗೆ ಬಂದಿದೆ. ಕೂಡಲೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹರಿಹರಪುರ ಪೊಲೀಸರು ಘಟನೆ ಸಂಬಂಧ ಐವರು ಆರೋಪಿಗಳನ್ನೂ ಬಂಧಿಸಿದ್ದಾರೆ. ದಾಂಧಲೆಯಿಂದಾಗಿ ಸುಮಾರು 8 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಸುರೇಶ್ನಾಯಕ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆನ್ನಲಾಗಿದೆ.