ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ 100 ಕೋಟಿ ವೆಚ್ಚದ ಬಿದಿರು ಸಂಸ್ಕರಣಾ ಘಟಕ: ಅಮಿತ್ ಶಾ
![ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ 100 ಕೋಟಿ ವೆಚ್ಚದ ಬಿದಿರು ಸಂಸ್ಕರಣಾ ಘಟಕ: ಅಮಿತ್ ಶಾ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ 100 ಕೋಟಿ ವೆಚ್ಚದ ಬಿದಿರು ಸಂಸ್ಕರಣಾ ಘಟಕ: ಅಮಿತ್ ಶಾ](https://www.varthabharati.in/sites/default/files/images/articles/2018/03/30/30 chn bjp photo 01.jpg)
ಚಾಮರಾಜನಗರ, ಮಾ.30: ಕರ್ನಾಟಕದಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾದರೆ ನೂರು ಕೋಟಿ ರೂಪಾಯಿ ವೆಚ್ಚದ ಬಿದಿರು ಸಂಸ್ಕರಣ ಘಟಕವನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಭರವಸೆ ನೀಡಿದರು.
ಅವರು ಚಾಮರಾಜನಗರದ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶದಲ್ಲಿ ಮಾತನಾಡುತ್ತಾ, ಸಂವಿಧಾನ ಬಂದಾಗಿನಿಂದ ಪರಿವಾರ ತಳವಾರ ಸಮುದಾಯ ಎಸ್ಟಿ ವ್ಯಾಪ್ತಿಗೆ ಬಂದಿರಲಿಲ್ಲ. ಅದನ್ನು ಮನಗಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಸ್ಟಿ ವ್ಯಾಪ್ತಿಗೆ ಸೇರಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಸರ್ಕಾರ ರಾಜ್ಯದ ಹರಿಜನ, ಗಿರಿಜನ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ. ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯ, ಮೋದಿ ತಂದ ಬಿಲ್ಲನ್ನು ಸೋನಿಯಾಗೆ ಹೇಳಿ ರಾಜ್ಯ ಸಭೆಯಲ್ಲಿ ತಡೆಹಿಡಿದರು. ನಮ್ಮ ಚಿತ್ರದುರ್ಗದ ಮದಕರಿ ನಾಯಕ ಹೈದರಾಲಿ ಜೊತೆ ಹೋರಾಡಿ ವೀರಮರಣ ಹೊಂದುತ್ತಾರೆ. ಆದರೆ ಅವರ ಜಯಂತಿ ಆಚರಿಸುವ ಬದಲು, ಹೈದರಾಲಿ ಮಗ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿದೆ. ಸಿದ್ದರಾಮಯ್ಯ ಆಡಳಿತ ಕೊನೆಯಾಗುತ್ತಿದೆ. ಯಡಿಯೂರಪ್ಪ ಸರ್ಕಾರ ಬಂದಾಗ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ವೀರಮದಕರಿಯ ಭವ್ಯ ಸ್ಮಾರಕ ನಿರ್ಮಿಸಲಾಗುವುದು. ಸಿದ್ದರಾಮಯ್ಯ ರವರಿಗೆ ಇಲ್ಲಿಂದ ಸವಾಲು ಹಾಕುತ್ತಿದ್ದೇನೆ. ಎಸ್ಸಿ-ಎಸ್ಟಿ ಮಕ್ಕಳ ಸ್ಕಾಲರ್ ಶಿಪ್ ಗೆ ಇಟ್ಟಿರೋದು ಕೇವಲ 123 ಕೋಟಿ ಮಾತ್ರ. ಆದರೆ ಅಲ್ಪಸಂಖ್ಯಾತ ಮಕ್ಕಳಿಗೆ 513 ಕೋಟಿ ಇಟ್ಟಿರುವುದು ಮೋಸ ಅಲ್ಲವೇ? ಸಿದ್ದರಾಮಯ್ಯ ಸರ್ಕಾರದಿಂದ ಕರ್ನಾಟಕ ವಿಕಾಸ ಸಾಧ್ಯವಿಲ್ಲ ಅನ್ನೋದು ಮೇ 12 ರಂದು ನೆನಪಿರಲಿ. ಎಸ್ಸಿ-ಎಸ್ಟಿ, ಓಬಿಸಿ ಉದ್ದಾರ ಯಡಿಯೂರಪ್ಪ ಸರ್ಕಾರದಿಂದ ಮಾತ್ರ ಸಾಧ್ಯ. ಎರಡೂ ಕೈ ಮೇಲೆತ್ತಿ ಹೇಳಿ ಯಡಿಯೂರಪ್ಪ ಸರ್ಕಾರ ತರ್ತಿರಾ? ಕಮಲಕ್ಕೆ ಓಟ್ ಹಾಕ್ತೀರಾ? ಮೋದಿಜಿ ಕೈ ಬಲಪಡಿಸ್ತೀರಾ ಎಂದು ಅಮಿತ್ ಶಾ ಪ್ರಶ್ನಿಸಿದರು.
ನಾವು ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲ ಕಲ್ಪಿಸುವುದರ ವಿರುದ್ಧ ಇಲ್ಲ. ಆದ್ರೆ ಎಸ್ಸಿ-ಎಸ್ಟಿ ಗೆ ಅನ್ಯಾಯ ಮಾಡಬಾರದಿತ್ತು. ಅದನ್ನ ಮುಂದೆ ನಾವು ಸರಿಪಡಿಸುತ್ತೇವೆ. ಹತ್ತು ಕೋಟಿ ಆದಿವಾಸಿ ಕುಟುಂಬಗಳಿಗೆ ಆರೋಗ್ಯ ಸೇವೆಯನ್ನು ಕೇಂದ್ರ ಸರ್ಕಾರ ನೀಡಿದೆ. ಮೋದಿ ಸರ್ಕಾರ ಎಸ್ಟಿಗಳಿಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಒಂದೊಂದು ಏಕಲವ್ಯ ಶಾಲೆ ತೆರೆಯುವ ತೀರ್ಮಾನ ಮಾಡಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಓಟಾಕಿದ್ರೆ ಅದು ಅಕ್ಷಮ್ಯ ಅನ್ನೋದು ಎಸ್ಸಿ-ಎಸ್ಟಿ ಜನರಿಗೆ ಗೊತ್ತಾಗಿದೆ. ತಳವಾರ, ಪರಿವಾರವನ್ನು ನಾವು ಎಸ್ಟಿಗೆ ಸೇರಿಸುವುದರಿಂದ ನೀವು ಯಾರೂ ಕಾಂಗ್ರೆಸ್ ಗೆ ಓಟು ಹಾಕುವುದಿಲ್ಲ ಎಂದು ಶಪಥ ಮಾಡಿ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರ ಜನಹಿತ ಮರೆತು ಲೂಟಿಯಲ್ಲಿ ತೊಡಗಿದೆ. ದಿನೇಶ್ ಗುಂಡೂರಾವ್, ನಿಮ್ಮ ಆಟ ಹೆಚ್ಚು ದಿನ ನಡೆಯೋಲ್ಲ. ಐವತ್ತು ವರ್ಷದಲ್ಲಿ ರಾಜ್ಯ ಆಳಿದ ಕಾಂಗ್ರೆಸ್ ಏನೂ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಸ್ಸಿ-ಎಸ್ಟಿ ಜನರ ಹಿತಕಾಯುವೆ. ಸಿದ್ದರಾಮಯ್ಯ ನನ್ನು ಚಾಮುಂಡೇಶ್ವರಿಯಲ್ಲೂ, ಅವರ ಮಗನನ್ನು ವರುಣಾದಲ್ಲಿ ಸೋಲಿಸಿ ಎಂದು ಮತದಾರರಿಗೆ ಕರೆ ನೀಡಿರುವುದಾಗಿ ಯಡಿಯೂರಪ್ಪ ತಿಳಿಸಿದರು.
ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್, ಮಾಜಿ ಸಚಿವರಾದ ಸಿ.ಟಿ.ರವಿ, ರಾಮದಾಸ್, ಜಿಲ್ಲಾಧ್ಯಕ್ಷ ಪ್ರೋ. ಕೆ.ಆರ್. ಮಲ್ಲಿಕಾರ್ಜುನಪ್ಪ ಸೇರಿದಂತೆ ಹಲವಾರು ಮಂದಿ ವೇದಿಕೆಯಲ್ಲಿದ್ದರು. ಸಮಾವೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.