ಕರಗಿದ ‘ಅಣ್ಣಾ ಹೋರಾಟ’ದ ಬಣ್ಣ
ಅಣ್ಣಾ ಹಝಾರೆ ಅವರು ತಮ್ಮ ಆರು ದಿನಗಳ ಉಪವಾಸವನ್ನು ಕೊನೆಗೂ ಮುಗಿಸಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಎಳನೀರಿಗೆ ಹಝಾರೆ ತೃಪ್ತಿ ಪಟ್ಟು ತಮ್ಮ ಊರು ಸೇರಿಕೊಂಡಿದ್ದಾರೆ. ಒಂದು ಕಾಲದಲ್ಲಿ ಇದೇ ರಾಮಲೀಲಾದಲ್ಲಿ ಅಣ್ಣಾ ಹಝಾರೆ ತನ್ನ ಉಪವಾಸದ ಮೂಲಕ ಇತಿಹಾಸ ನಿರ್ಮಿಸಿದ್ದರು. ‘ಎರಡನೆ ಸ್ವಾತಂತ್ರ ಹೋರಾಟ’ ಎಂಬ ಅರ್ಥ ಬರುವಂತೆ ಮಾಧ್ಯಮಗಳು ಹಝಾರೆಯ ಉಪವಾಸದ ಕುರಿತಂತೆ ಪುಂಗಿ ಊದಿದ್ದವು. ಪ್ರತಿ ದಿನ ಮಾಧ್ಯಮಗಳ ಮುಖಪುಟದಲ್ಲಿ ಅಣ್ಣಾ ಅವರು ರಾರಾಜಿಸುತ್ತಿದ್ದರು. ಟಿವಿ ಚಾನೆಲ್ಗಳು ಒಂದೇ ಸಮನೆ ಅಣ್ಣಾ ಹೆಸರನ್ನು ಜಪಿಸುತ್ತಿದ್ದವು. ಅಂತಹ ಅಣ್ಣಾ ಈ ಬಾರಿ ಉಪವಾಸ ಕೂತಾಗ ಯಾವುದೇ ಮಾಧ್ಯಮಗಳು ಆ ದಿಕ್ಕಿಗೆ ಕಣ್ಣೆತ್ತಿಯೂ ನೋಡಲಿಲ್ಲ. ಕನಿಷ್ಠ ಹಝಾರೆಯವರ ಬೇಡಿಕೆಯೇನು ಎನ್ನುವುದನ್ನೂ ವಿಚಾರಿಸುವ ಕೆಲಸ ಮಾಡಲಿಲ್ಲ. ತನ್ನನ್ನು ತಾನು ಆಧುನಿಕ ಗಾಂಧಿಯೆಂದು ಭ್ರಮಿಸಿದ್ದ ಅಣ್ಣಾ ಹಝಾರೆಯವರೇ ಮಾಧ್ಯಮಗಳ ಪ್ರತಿಕ್ರಿಯೆಗೆ ಹತಾಶೆಗೊಂಡಿದ್ದಾರೆ. ಅಂತಿಮವಾಗಿ ಯಾರಾದರೂ ರಾಜಕೀಯ ನಾಯಕರು ಕಾಟಾಚಾರಕ್ಕಾದರೂ ಬಂದು ಎಳನೀರು ಕುಡಿಸಿದರೆ ಸಾಕು ಎಂಬಂತಹ ಸ್ಥಿತಿ ಅವರ ಪಾಲಿಗೆ ನಿರ್ಮಾಣವಾಯಿತು. ಆರೆಸ್ಸೆಸ್, ಕಾರ್ಪೊರೇಟ್ ವಲಯ ಮತ್ತು ಮೀಡಿಯಾಗಳು ಜೊತೆ ಸೇರಿ ಸೃಷ್ಟಿಸಿದ ಅಣ್ಣಾ ಹಝಾರೆ ಎಂಬ ಕೃತಕ ಗಾಂಧಿಯ ಅಸಲಿ ಶಕ್ತಿ ಏನು ಎನ್ನುವುದು ರಾಮಲೀಲಾದಲ್ಲಿ ಇದೀಗ ಬಯಲಾಗಿದೆ.
ಯುಪಿಎ ಅಧಿಕಾರದಲ್ಲಿರುವಾಗ ಅಣ್ಣಾ ಹಝಾರೆ ತಂಡ ಯಾವ ಬೇಡಿಕೆಯನ್ನು ಮುಂದಿಟ್ಟಿತ್ತೋ ಅದೇ ಬೇಡಿಕೆಯ ಮುಂದುವರಿದ ಭಾಗವಾಗಿತ್ತು ಈ ಸತ್ಯಾಗ್ರಹ. ಅಂದು ಅವರು ಜನಲೋಕಪಾಲ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಸಂಸತ್ತಿಗೆ ತಾನು ಪರ್ಯಾಯ ಎಂಬಂತೆ ಅವರು ಪ್ರತಿಭಟನೆಯ ಮೂಲಕ ಸರಕಾರವನ್ನು ಬ್ಲಾಕ್ಮೇಲ್ ಮಾಡಲು ಮುಂದಾಗಿದ್ದರು ಮತ್ತು ಮಾಧ್ಯಮಗಳೆಲ್ಲ ಅವರನ್ನು ಸುತ್ತುವರಿದಿದ್ದವು. ಆದರೆ ಇದೀಗ ಮಾತ್ರ ಅಣ್ಣಾ ಹಝಾರೆಯ ಹೋರಾಟವನ್ನು ಮಾಧ್ಯಮಗಳು ಕಂಡೂ ಕಾಣದಂತೆ ವರ್ತಿಸಿವೆ. ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ನಡೆದ ನೋಟು ನಿಷೇಧ ಈ ದೇಶದ ಅತೀ ದೊಡ್ಡ ಅವ್ಯವಹಾರವಾಗಿದೆ. ನೋಟು ನಿಷೇಧದ ವೈಫಲ್ಯದಿಂದಾಗಿ ಭಾರತದ ಆರ್ಥಿಕತೆ ನೆಲಕಚ್ಚಿದೆ. ಇದೇ ಸಂದರ್ಭದಲ್ಲಿ ಉದ್ಯಮಿಗಳು ಒಬ್ಬೊಬ್ಬರಾಗಿ ಬ್ಯಾಂಕುಗಳನ್ನು ಮುಳುಗಿಸಿ ವಿದೇಶ ಸೇರುತ್ತಿದ್ದಾರೆ. ಈ ದೇಶದ ಚೌಕಿದಾರ ಇವೆಲ್ಲವನ್ನೂ ಕಂಡೂ ಕಾಣದಂತಿದ್ದಾರೆ. ಬ್ಯಾಂಕಿನ ಕುರಿತಂತೆ ಜನಸಾಮಾನ್ಯರು ಭರವಸೆ, ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಜನರ ಹಣವನ್ನು ಬ್ಯಾಂಕುಗಳು ಬೇರೆ ಬೇರೆ ಹೆಸರಿನಲ್ಲಿ ದೋಚುತ್ತಿವೆೆ. ಎಟಿಎಂನಲ್ಲಿ ಹಣದ ಕೊರತೆ ಮತ್ತೆ ತಲೆದೋರಿದೆ. ಡಿಜಿಟಲ್ ಬ್ಯಾಂಕಿಂಗ್ ಕೈಕೊಟ್ಟಿದೆ. ಸೋರಿಕೆಗಳು ದೇಶವನ್ನು ಅಭದ್ರೆತೆಯತ್ತ ನೂಕುತ್ತಿವೆ. ರೈತರು ಮತ್ತು ಸಣ್ಣ ಉದ್ದಿಮೆದಾರರು ಸಂಪೂರ್ಣ ನೆಲಕಚ್ಚಿದ್ದಾರೆ. ಆಧಾರ್ ಕಾರ್ಡ್ ಜನರ ಪಾಲಿಗೆ ನೇಣುಕುಣಿಕೆಯಾಗಿದೆ. ಹೀಗೆ ವೈಫಲ್ಯದ ಮೇಲೆ ವೈಫಲ್ಯಗಳು ದೇಶವನ್ನು ಅತಂತ್ರದೆಡೆಗೆ ಕೊಂಡೊಯ್ಯುತ್ತಿದ್ದರೂ ಸರಕಾರದ ವಿರುದ್ಧ ಮಾತನಾಡಬೇಕು ಎಂದು ಮಾಧ್ಯಮಗಳಿಗೆ ಅನ್ನಿಸುತ್ತಿಲ್ಲ. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಅಗತ್ಯವೆಂದು ಕಂಡಿದ್ದ ಲೋಕಪಾಲ್ ಕುರಿತಂತೆಯೂ ಮಾಧ್ಯಮಗಳು ಆಸಕ್ತಿಯನ್ನು ಕಳೆದುಕೊಂಡಿವೆ. ಅಂದರೆ ಯುಪಿಎ ಸರಕಾರದ ಅವಧಿಯಲ್ಲಿ ರಾಮ್ಲೀಲಾದಲ್ಲಿ ನಡೆದಿರುವುದು ಅಸಲಿ ಪ್ರತಿಭಟನೆಯಲ್ಲ, ಆರೆಸ್ಸೆಸ್ ಪ್ರಾಯೋಜಿತ ನಾಟಕ ಎಂಬ ಕಹಿ ಸತ್ಯವನ್ನು ನಾವು ಜೀರ್ಣಿಸಿಕೊಳ್ಳಲೇ ಬೇಕಾಗಿದೆ.
ತನ್ನನ್ನು ತಾನು ಗಾಂಧೀವಾದಿ ಎಂದು ಭ್ರಮಿಸಿಕೊಂಡಿರುವ ಅಣ್ಣಾ ಹಝಾರೆಯವರಿಗೆ ಗಾಂಧೀಜಿಯ ವೌಲ್ಯಗಳ ಬಗ್ಗೆ ಬಹಳಷ್ಟು ಗೊಂದಲಗಳಿವೆ. ದೇಶದ ಅಭಿವೃದ್ಧಿಯ ಕುರಿತಂತೆಯೂ ಸ್ಪಷ್ಟತೆಯಿಲ್ಲ. ರೈತರ ಸಾಲ ಮನ್ನಾವೂ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಳಲ್ಲಿ ಅವರು ಗುರುತಿಸಿಕೊಂಡಿದ್ದರೂ, ದೇಶದ ರಾಜಕೀಯ ಪಲ್ಲಟಗಳನ್ನು ಸಮಗ್ರವಾಗಿ ಗ್ರಹಿಸಿ ಅದಕ್ಕೆ ಪೂರಕವಾಗಿ ಹೋರಾಟವನ್ನು ರೂಪಿಸುವ ಮುತ್ಸದ್ದಿತನ, ಸ್ವಂತಿಕೆ ಅವರಲ್ಲಿಲ್ಲ. ಯುಪಿಎ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಅವರು ಗುಜರಾತ್ನ ಅಭಿವೃದ್ಧಿಯನ್ನು ಬಾಯಿ ತುಂಬಾ ಹೊಗಳಿ ಟೀಕೆಗೊಳಗಾಗಿದ್ದರು. ಹಾಗೆಯೇ ಬಿಹಾರವನ್ನೂ ಹೊಗಳಿದ್ದರು. ಈ ಸಂದರ್ಭದಲ್ಲಿ, ಮೋದಿಯವರು ಅಣ್ಣಾ ಹಝಾರೆಯನ್ನು ಬೆಂಬಲಿಸಿ ವಿಶೇಷಪತ್ರವೊಂದನ್ನು ಬರೆದಿದ್ದರು ಮಾತ್ರವಲ್ಲ, ‘‘ನಾನೂ ಇಲ್ಲಿ ಉಪವಾಸ ಮಾಡುತ್ತಿದ್ದೇನೆ’’ ಎಂದು ಭಾವನಾತ್ಮಕವಾಗಿ ಅವರ ಉಪವಾಸಕ್ಕೆ ಜೊತೆಯಾಗಿದ್ದರು. ಅಂತಹ ಮೋದಿ, ಇಂದು ಹಝಾರೆಯೆಡೆಗೆ ಕಣ್ಣೆತ್ತಿಯೂ ನೋಡದೆ ಇರುವುದು ವಿಪರ್ಯಾಸವೇ ಸರಿ. ಗಾಂಧಿಯ ಅಹಿಂಸೆಯನ್ನು ಪ್ರತಿಪಾದಿಸುತ್ತಲೇ, ರಾಜಕಾರಣಿಯೊಬ್ಬರಿಗೆ ಸಾರ್ವಜನಿಕವಾಗಿ ಕೆನ್ನೆಗೆ ಬಾರಿಸಲು ಸಲಹೆ ನೀಡಿದವರು ಇದೇ ಅಣ್ಣಾ ಹಝಾರೆ. ನಿಧಾನಕ್ಕೆ ಪ್ರಜಾಸತ್ತೆಯನ್ನು ಕಾರ್ಪೊರೇಟ್ ಶಕ್ತಿಗಳು ನಿಯಂತ್ರಿಸುತ್ತಿರುವುದನ್ನು ಕಂಡುಕೊಳ್ಳುವ ರಾಜಕೀಯ ಪ್ರಬುದ್ಧತೆಯೂ ಅವರಲ್ಲಿಲ್ಲ. ಆರೆಸ್ಸೆಸ್ನ ಸ್ವದೇಶಿ ವಾದ ಮತ್ತು ಗಾಂಧೀಜಿಯ ಸ್ವದೇಶಿವಾದದ ನಡುವಿನ ಅಂತರವನ್ನು ಅರಿತುಕೊಳ್ಳುವ ಗಟ್ಟಿತನ ಇಲ್ಲ. ತುಸು ಜಾರಿದರೆ ಅವರು ಬೀಳುವುದು ಆರೆಸ್ಸೆಸ್ ತೋಡಿದ ಹೊಂಡಕ್ಕೆ. ಆದುದರಿಂದ ಅವರನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಹಿತಾಸಕ್ತಿಗಳು ಸುಲಭದಲ್ಲಿ ತಮ್ಮ ರಾಜಕೀಯ ದುರುದ್ದೇಶಗಳನ್ನು ಸಾಧಿಸಬಹುದಿತ್ತು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆರೆಸ್ಸೆಸ್ ಅಣ್ಣಾ ಹಝಾರೆಯನ್ನು ಬಳಸಿಕೊಂಡು ತನ್ನ ಕಾರ್ಯ ಸಾಧಿಸಿಕೊಳ್ಳಲು ಯಶಸ್ವಿಯಾಯಿತು. ಹಝಾರೆ ಉಪವಾಸ ಕೂತಿದ್ದಾಗ, ಅದನ್ನು ಯುಪಿಎ ಸರಕಾರ ಗಂಭೀರವಾಗಿ ತೆಗೆದುಕೊಂಡಿತ್ತು ಮತ್ತು ಅದಕ್ಕೆ ಸ್ಪಂದಿಸಿತ್ತು. ಸಂಪುಟ ಸಚಿವರೇ ಸ್ವತಃ ಹಝಾರೆಯವರನ್ನು ಭೇಟಿ ಮಾಡಿದ್ದರು. ಮನಮೋಹನ್ ಸಿಂಗ್ ಕೂಡ ಹಝಾರೆಯವರ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ ಅಂತಹ ಕನಿಷ್ಠ ಸೌಜನ್ಯವನ್ನ್ನು ಮೋದಿ ಸರಕಾರ ತೋರಿಸಲಿಲ್ಲ. ಬಹುಶಃ ಸದ್ಯದ ರಾಜಕಾರಣದಲ್ಲಿ ತನ್ನ ಸ್ಥಾನಮಾನ ಏನು ಎನ್ನುವುದು ಅವರಿಗೆ ಈಗಲಾದರೂ ಮನವರಿಕೆಯಾಗಿರಬಹುದು.
ಒಂದಂತೂ ಸತ್ಯ. ಭಾರತ ಇನ್ನೊಂದು ಹೋರಾಟಕ್ಕೆ ಸಜ್ಜಾಗದೇ ಇದ್ದರೆ, ಮಾಧ್ಯಮಗಳನ್ನು ಬಳಸಿಕೊಂಡು ಕಾರ್ಪೊರೇಟ್ ಶಕ್ತಿಗಳು ದೇಶವನ್ನು ಅತಿ ಶೀಘ್ರದಲ್ಲಿ ನುಂಗಿ ಹಾಕಲಿವೆ. ಇಂತಹ ಸಂದರ್ಭದಲ್ಲಿ ಈ ದೇಶದ ಒಟ್ಟಾರೆ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶವನ್ನು ಅರ್ಥಮಾಡಿಕೊಂಡ ಪ್ರಬುದ್ಧ ಯುವಶಕ್ತಿ ಒಂದಾಗಬೇಕಾಗಿದೆ. ಅಸಲಿ ಪರ್ಯಾಯ ಹೋರಾಟವೊಂದು ದೇಶಾದ್ಯಂತ ರೂಪುಗೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಸ್ವಾತಂತ್ರ ಪೂರ್ವದಲ್ಲಿ ಯಾವ ಮಾಧ್ಯಮಗಳು ಮತ್ತು ಕಾರ್ಪೊರೇಟ್ಗಳ ಬಲವಿಲ್ಲದೆಯೇ ಗಾಂಧೀಜಿ ರೂಪಿಸಿದಂತಹ ಚಳವಳಿಗಳು ಮತ್ತೆ ತಳಸ್ತರದಿಂದ ಮೇಲೇಳಬೇಕಾಗಿದೆ. ದೇಶ ನಿಜಕ್ಕೂ ಯಾವ ದಿಕ್ಕಿಗೆ ಸಾಗುತ್ತಿದೆ ಎನ್ನುವ ಸತ್ಯಗಳನ್ನು ಪರ್ಯಾಯ ಮಾಧ್ಯಮಗಳನ್ನು ಬಳಸಿಕೊಂಡು ಜನರಿಗೆ ತಲುಪಿಸಬೇಕಾಗಿದೆ. ಮಾಧ್ಯಮಗಳು ಸೃಷ್ಟಿಸಿರುವ ಭ್ರಮೆಗಳು ನಿಧಾನಕ್ಕೆ ಕರಗತೊಡಗಿವೆ. ಕಾರ್ಪೊರೇಟ್ ಮಂದಿಗಳ ಅಸಲಿ ಬಣ್ಣ ಬಯಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಜನರನ್ನು ಪ್ರಜಾಸತ್ತಾತ್ಮಕ ವೇದಿಕೆಯಡಿ ಒಂದಾಗಿಸಿ ಭಾರತವನ್ನು ಆಶಾದಾಯಕ ದಿಕ್ಕಿಗೆ ಮುನ್ನೆಡೆಸಲು ಶೋಷಿತ ಸಮುದಾಯಗಳಿಂದ ಅಸಲಿ ನಾಯಕತ್ವ ಗುಣಗಳಿರುವ ಯುವಕರು ಮುಂದೆ ಬರಬೇಕಾಗಿದೆ.