ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಂಬರೀಶ್ ಹೇಳಿದ್ದೇನು?
![ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಂಬರೀಶ್ ಹೇಳಿದ್ದೇನು? ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಂಬರೀಶ್ ಹೇಳಿದ್ದೇನು?](https://www.varthabharati.in/sites/default/files/images/articles/2018/03/31/ambarish.jpg)
ಬೆಂಗಳೂರು, ಮಾ. 31: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಎಪ್ರಿಲ್ 2ರಂದು ತನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಪ್ರಕಟಿಸುವೆ ಎಂದು ನಟ ಹಾಗೂ ಶಾಸಕ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನಗೆ ರಾಜಕೀಯ ಎಲ್ಲ ಗೌರವಗಳನ್ನು ದೊರಕಿಸಿಕೊಟ್ಟಿದೆ. ಸಿನಿಮಾ ಮತ್ತು ರಾಜಕೀಯದಲ್ಲಿ ಸೋಲು-ಗೆಲುವು ಕಂಡಿದ್ದೇನೆ. ಹೀಗಾಗಿ ಎಲ್ಲವನ್ನು ಸಮಚಿತ್ತದಿಂದ ಕಾಣುವೆ ಎಂದು ಹೇಳಿದರು.
‘ನನ್ನನ್ನು ನಾಯಿ, ಕತ್ತೆ ಎಂದೆಲ್ಲ ಕರೆದರು. ನಾಯಿಯ ನಿಷ್ಠೆ, ಕತ್ತೆಯ ಶ್ರಮ ನೆನಪಿಸಿಕೊಳ್ಳಬೇಕಿದೆ. ನನಗೆ ಮೊದಲಿನಂತೆ ಈಗ ಆರೋಗ್ಯ ಇಲ್ಲ. ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗಿ ಬಂದ ಮೇಲೆ ಪುನರ್ ಜನ್ಮ ಪಡೆದಿದ್ದೇನೆ. ಬೆಂಬಲಿಗರಿಂದ ನೀವು ಮಂಡ್ಯದಿಂದ ಸ್ಪರ್ಧಿಸಲೇಬೇಕೆಂದು ಒತ್ತಡ ಹೆಚ್ಚುತ್ತಿದೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.
ರಾಜಕೀಯಕ್ಕೆ ಬಂದ ಮೇಲೆ ಸೋಲು-ಗೆಲುವುಗಳು ಸಹಜ. ಕೆಲ ಸಂದರ್ಭಗಳಲ್ಲಿ ನಮ್ಮನ್ನು ಬೈಯ್ದದ್ದು ಇದೆ. ಅದ್ಯಾವುದಕ್ಕೂ ಬೇಸರ ಮಾಡಿಕೊಳ್ಳದೆ ಎಲ್ಲವನ್ನು ಸಹಜವಾಗಿ ಪರಿಗಣಿಸುವೆ. ಪ್ರಸ್ತುತ ರಾಜಕೀಯ ಮೊದಲಿನಂತೆ ಇಲ್ಲ. ಈ ಬಗ್ಗೆ ನಿಮಗೂ ಗೊತ್ತಿದೆ ಎಂದರು.
ಅಂಬಿ ಸ್ಪರ್ಧೆ ಅನುಮಾನ: ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಟ ಅಂಬರೀಶ್ ಸ್ಪರ್ಧಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಂಡ್ಯ ಟಿಕೆಟ್ ಯಾರಿಗೆ ನೀಡಬೇಕೆಂಬ ಗೊಂದಲದಲ್ಲಿದ್ದಾರೆ.