ಕಾಸರಗೋಡು: 11ನೇ ಕನ್ನಡ ಸಾಹಿತ್ಯ ಸಮ್ಮೇಳನ
.jpg)
ಕಾಸರಗೋಡು, ಮಾ. 31: ವಿಶ್ವದ ಪ್ರತಿ ರಾಷ್ಟ್ರದಲ್ಲೂ ಅಲ್ಲಿನ ನಾಡು ಭಾಷೆಗೆ ಗೌರವವಿದೆ, ಮಾತೃಭಾಷೆಯು ಸಂಸ್ಕೃತಿಯ ಪ್ರವಾಹಕವಾಗಿದ್ದು, ಜನಸಂಸ್ಕೃತಿಯ ದ್ಯೋತಕವಾಗಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯೇ ಜನಜನಿತವಾಗಿದ್ದು, ಇಲ್ಲಿನ ನಾಡು ನುಡಿಯು ಕನ್ನಡ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಡಾ.ಉಪ್ಪಂಗಳ ರಾಮ ಭಟ್ ಹೇಳಿದರು.
ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಆರಂಭಗೊಂಡ ಎರಡು ದಿನಗಳ ಕಾಸರಗೋಡು ಜಿಲ್ಲೆಯ 11 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಜ್ಞಾನ ದೀಪ ಸದಾ ಬೆಳಗಬೇಕು,ಜಿಲ್ಲೆಯಲ್ಲಿ ಕನ್ನಡದ ಸಾಹಿತ್ಯ ಕೃಷಿ ನಿರಂತರವಾಗಿ ನಡೆಯಬೇಕು, ಕನ್ನಡ ಭಾಷೆಯ ಮೂಲಕ ಜ್ಞಾನದ ಆರಾಧನೆಯ ಸತ್ಕಾರ್ಯವು ನಿರಂತರವಾಗಿ ಮುನ್ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ವಿದ್ವಾಂಸ ಪಿ.ರಾಜಗೋಪಾಲ ಪುಣಿಂಚಿತ್ತಾಯ ವಿರಚಿತ ಅಮೇರಿಕದಲ್ಲಿ ನಾವು ಕೃತಿಯನ್ನು ಕ.ಸಾ.ಪ ಬೆಂಗಳೂರು ಘಟಕದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಾವರಣಗೊಳಿಸಿ ಮಾತನಾಡಿ ಪ್ರತಿಯೋರ್ವ ಕನ್ನಡದ ಸನ್ಮನಸುಗಳು ಕನ್ನಡ ಪುಸ್ತಕಗಳನ್ನು ಕೊಂಡು ಕೊಂಡಾಡುವ ಕೆಲಸವಾದಲ್ಲಿ ಕನ್ನಡ ಸಾಹಿತ್ಯವನ್ನು ಬೆಳೆಸುವ ಕಾರ್ಯವಾಗುತ್ತದೆ. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟ ಈಗ ಕ್ಷೀಣಿಸಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲ ಭಾಷಾ ಹಾವಳಿಯಿಂದ ಕನ್ನಡ ರಕ್ಷಿಸುವ ಕಾರ್ಯವು ಆಗಬೇಕಿದೆ ಎಂದರು. ಕರ್ನಾಟಕದಲ್ಲಿಯೂ ಕನ್ನಡ ಭಾಷಾ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳು, ಶಿಕ್ಷಕರು ಇಲ್ಲದೆ ಮುಚ್ಚುವ ಸ್ಥಿತಿಗೆ ಬಂದು ತಲುಪಿವೆ. ಇದರ ಬಗ್ಗೆ ಭಾಷಾ ಪ್ರೇಮಿಗಳು ಜಾಗರೂಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಿದೆ ಎಂದರು.
ಸಾಮಾಜಿಕ ಮುಂದಾಳು ರವೀಶ ತಂತ್ರಿ ಕುಂಟಾರು ಮಾತನಾಡಿ ಅಚ್ಚ ಕನ್ನಡದ ನೆಲವಾದ ಕಾಸರಗೋಡಿನಲ್ಲಿ ಕನ್ನಡ ಪರ ಹೋರಾಟ ಇಲ್ಲದೆ ಅಸ್ತಿತ್ವವೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಹೋರಾಟದಲ್ಲಿಯಾದರೂ ಕೇರಳೀಯರು ಮೊದಲಿಗರು, ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಯಲ್ಲೂ ಕನ್ನಡಿಗರಾದ ನಾವು ಕೆಚ್ಚೆದೆಯ ಹೋರಾಟ ನಡೆಸಿ ತಮ್ಮ ಸಾಂವಿಧಾನಿಕ ಹಕ್ಕನ್ನು ಪಡೆದುಕೊಳ್ಳಲು ಸಿದ್ಧ ಎಂದರು.
ಕನ್ನಡ ಉಳಿಸಲು ವೈಯಕ್ತಿಕ ಒತ್ತಡಗಳಿಂದ ಹೊರತಾದ ಹೋರಾಟದ ಅಗತ್ಯತೆ ಇದೆ. ಎಲ್ಲ ಬೇಧಗಳನ್ನು ಬದಿಗೆ ಸರಿಸಿ ತನ್ನತನವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಬೇಕಿದೆ ಎಂದರು. ಇಲ್ಲಿನ ಜನಪ್ರತಿನಿಧಿಗಳು ಕನ್ನಡಿಗನ ಅಂತರಾಳದ ಕೂಗನ್ನು ಅರಿತು ವಿಧಾನಸಭೆಯಲ್ಲಿ ಘರ್ಜಿಸಬೇಕಾದ ಅನಿವಾರ್ಯತೆ ಇದೆ ಎಂದರು. ಕಾಸರಗೋಡು ಸೇರಿದಂತೆ ಮಂಜೇಶ್ವರ ತಾಲೂಕುಗಳು ಕನ್ನಡದ ತವರಾಗಿದ್ದು, ಇಲ್ಲಿ ಕನ್ನಡ ಭಾಷೆಯನ್ನು ಎಲ್ಲ ರೀತಿಯಲ್ಲೂ ಬೆಳೆಸಲು ನಿರಂತರ ಪ್ರಯತ್ನ ಮುಂದುವರಿಯಬೇಕಿದೆ ಎಂದರು. ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
11 ನೇ ಕಾಸರಗೋಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ನಾ. ಮೊಗಸಾಲೆ ಕನ್ನಡದ ಶ್ರೀಮಂತ ಸಂಸ್ಕೃತಿ, ಧೀಮಂತ ಸಾಹಿತ್ಯ ಸೇರಿದ ಕನ್ನಡದ ಆಸ್ಮಿತೆಯನ್ನು ಉಳಿಸಿ, ಬೆಳೆಸಬಲ್ಲ ಸಾಹಿತಿಗಳು ಇಂದಿಲ್ಲವಾಗಿದ್ದಾರೆ. ಕರ್ನಾಟಕದ ಗ್ರಾಮೀಣ ಪ್ರದೇಶವಾದಂತಹ ಕಾಂತಾವರದ ಶಾಲೆ, ಬೆಳುವಾಯಿ ಶಾಲೆಗಳು ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಮುಚ್ಚುಗಡೆಯ ಹಂತಕ್ಕೆ ತಲುಪಿವೆ. ತಾನು ಸ್ಥಾಪಿಸಿದ ಅಲ್ಲಮ ಪೀಠದ ಗತಿಯೇನು ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಎಲ್ಲವೂ ಸ್ಮಶಾನ ಮೌನದತ್ತ ತೆರಳುತ್ತಿದೆ ಎಂದು ಭಾಸವಾಗತೊಡಗಿದೆ. ಎಲ್ಲ ಅನಿಶ್ಚಿತತೆಯ ನಡುವೆ ಕನ್ನಡದ ಕಾರ್ಯವನ್ನು ಮುನ್ನಡೆಸುವ ಪ್ರಯತ್ನ ಮುಂದೆ ಸಾಗಿದೆ ಎಂದರು.
ಉಲ್ಲಂಘನೆ ಕಾದಂಬರಿಯಲ್ಲಿ ಗಡಿ ಭಾಗದ ಹಲವು ಸಮುದಾಯಗಳ ಚಿತ್ರಣವನ್ನು ನೀಡಲಾಗಿದ್ದು, ಸಂಸ್ಕೃತಿಯ ಅನಾವರಣವಿದೆ, ಮುಖಾಂತರ ಕಾದಂಬರಿಯಲ್ಲೂ ಬ್ರಾಹ್ಮಣ ಸಂಸ್ಕೃತಿಯ ಅನಾವರಣವಾಗಿದ್ದು ಇಂಗ್ಲಿಷ್ ಭಾಷೆಗೆ ಮಣಿಪಾಲ ಪ್ರೆಸ್ ಮೂಲಕ ಭಾಷಾಂತರವಾಗಿದೆ ಎಂದರು.
ಸಾಹಿತ್ಯ ಸಮ್ಮೇಳನಗಳು ಹೇಗಿರಬೇಕು ಎನ್ನುವ ಬಗ್ಗೆ ವಿಸ್ತತವಾಗಿ ಅವಲೋಕಿಸಿದ ಅವರು ಸಾಹಿತಿ ಮತ್ತು ಸಾಮಾಜಿಕ ನೇತರರು ತಮ್ಮ ಸಂಕುಚಿತ ಮನೋಭಾವವನನ್ನು ಕೈಬಿಟ್ಟು ಮುನ್ನಡೆಯಬೇಕು ಎಂದು ಹೇಳಿದರು. ತನಗೆ ಪರಾಕಪಂಪಾಗಲು ಇಷ್ಟವಿಲ್ಲ, ಪ್ರಸ್ತುತ ಕಾಲಘಟ್ಟದಲ್ಲಿ ಸಾಹಿತಿಗಳನ್ನು ರಾಜಕಾರಣಿಗಳು ’ಎನ್ಕ್ಯಾಶ್’ (ಬಳಸಿಕೊಂಡು) ಮಾಡಿಕೊಂಡು ತಮ್ಮ ಓಟ್ ಬ್ಯಾಂಕ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಸಾಹಿತಿಗಳು ಇಂತಹ ಮಾರ್ಗದಲ್ಲಿ ಸಾಗದೆ ನೈತಿಕತೆಯ ಉದ್ಧಾರಕರಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾಷೆಯು ಯುತ್ಪತ್ತಿಯ ಪ್ರತೀಕವಾಗಿದೆ, ಜ್ಞಾನವು ಶಿಕ್ಷಣದ ಉಪವಸ್ತು, ಶಿಕ್ಷಣದ ಮೂಲಕ ಅನುಭವಕ್ಕಿಂತ ಹೆಚ್ಚಾಗಿ ಅನುಭಾವವಂತರಾಗಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವಾದಿ ಶರಣರು ವಚನಗಳ ಮೂಲಕ ತಮ್ಮ ಧಾರ್ಮಿಕ ಬದ್ಧತೆಯನ್ನು ವ್ಯಕ್ತಪಡಿಸಿದರು. ವೇದವನ್ನು ತಿರಸ್ಕರಿಸುತ್ತಿರುವ ಶರಣ ಪರಂಪರೆಯಲ್ಲಿ ಬಸವಣ್ಣ ಮತ್ತು ಅಲ್ಲಮ ವೇದೋಪಷತ್ತಿನಲ್ಲಿರುವ ಜೀವಪರ ಕಾಳಜಿಯನ್ನು ಎಂದೂ ತಿರಸ್ಕರಿಸಲಿಲ್ಲ ಎಂದರು. ಕಾಸರಗೋಡಿನ ಕನ್ನಡ ಸಾಹಿತ್ಯ ಪರಂಪರೆಯನ್ನು ಬೆಳಗಿದ ಮಹಾನ್ ಸಾಧಕರನ್ನು ಸಾರಸ್ವತ ಲೋಕಕ್ಕೆ ಪರಿಚಯಿಸುವ ಕಾರ್ಯವು ಕಾಂತಾವರ ಕನ್ನಡ ಸಂಘದಿಂದ ನಡೆದಿದೆ, ರಾಷ್ಟ್ರಕವಿ ಗೋವಿಂದ ಪೈ, ಬೇಕಲ ರಾಮನಾಯಕ, ಶಂಕರನಾರಾಯಣ ಭಟ್, ಲಕ್ಷ್ಮೀ ಕುಂಜತ್ತೂರು, ಬಲಿಪರ ಪರಿಚಯಿಸುವ ಪುಸ್ತಕಗಳು ಸಂಘದ ಮೂಲಕ ಪ್ರಕಟಗೊಂಡಿದೆ ಎಂದರು.
ಸಾಂಸ್ಕೃತಿಕ ನೀತಿ, ಬಹುತ್ವ, ಏಕತೆ, ಸಮಾನತೆ, ರಾಷ್ಟ್ರೀಯತೆಯಂತಹ ಉದಾತ್ತ ಚಿಂತನೆಗಳು ಯಾವತ್ತೂ ಸಂಕುಚಿತ ಪರಿಧಿಗೆ ಒಳಪಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕರಮದಲ್ಲಿ ಭಾಗವಹಿಸಿದ್ದ ದ.ಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ, ಕಾರಡ್ಕ ಗ್ರಾ.ಪಂ ಅಧ್ಯಕ್ಷೆ ಸ್ವಪ್ನಾ.ಜಿ, ಸದಸ್ಯೆ ಸ್ಮಿತಾ.ಪಿ ಶುಭಾಶಂಸನೆಗೈದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ ಭಟ್ ಆಶಯ ನುಡಿಗಲನ್ನಾಡಿದರು. ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ ಸ್ವಾಗತಿಸಿದರು. ನವೀನ್ಚಂದ್ರ.ಎಂ.ಎಸ್ ಧನ್ಯವಾಗೈದರು. ಗುರುಮೂರ್ತಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮುಳ್ಳೇರಿಯ ಎ.ಯು.ಪಿ ಶಾಲೆಯ ಪ್ರಬಂಧಕ ಡಾ.ವಿ.ವಿ ರಮಣ ಕನ್ನಡ ಧ್ವಜಾರೋಹಣಗೈದರು. ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ಕೆ.ರಂಗನಾಥ ಶೆಣೈ ರಾಷ್ಟ್ರ ಧ್ವಜಾರೋಹಣಗೈದರು. ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯು ಮುಳ್ಳೇರಿಯ ಹಯರ್ ಸೆಕೆಂಡರಿ ಶಾಲೆಯಿಂದ ಪೇಟೆಯ ಮಧ್ಯ ಭಾಗದಿಂದ ಸಮ್ಮೇಳನ ನಗರದವರೆಗೂ ನಡೆಯಿತು.







