ದಾವಣಗೆರೆ: ಮೃತ ಯೋಧ ಜಾವೀದ್ ಮನೆಗೆ ಎಚ್.ಡಿ. ಕುಮಾರಸ್ವಾಮಿ ಭೇಟಿ
![ದಾವಣಗೆರೆ: ಮೃತ ಯೋಧ ಜಾವೀದ್ ಮನೆಗೆ ಎಚ್.ಡಿ. ಕುಮಾರಸ್ವಾಮಿ ಭೇಟಿ ದಾವಣಗೆರೆ: ಮೃತ ಯೋಧ ಜಾವೀದ್ ಮನೆಗೆ ಎಚ್.ಡಿ. ಕುಮಾರಸ್ವಾಮಿ ಭೇಟಿ](/images/placeholder.jpg)
ದಾವಣಗೆರೆ, ಎ. 1: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೇ ಹೊಂದಾಣಿಕೆ ರಾಜಕೀಯದ ಪ್ರಶ್ನೆ ಇಲ್ಲ. ನಾವು ನೇರವಾಗಿಯೇ ಕಾಂಗ್ರೆಸ್ ಸೋಲಿಸುವುದು ನಿಶ್ಚಿತ. ಆದ್ದರಿಂದಲೇ ಸಿಎಂಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ಹರಿಹರದ ರಾಜಸ್ಥಾನದ ಪ್ರೋಖ್ರಾನ್ನಲ್ಲಿ ತರಬೇತಿ ವೇಳೆ ಹುತಾತ್ಮನಾಗಿದ್ದ ಜಾವೀದ್ ಮನೆಗೆ ಭೇಟಿ ಕುಟುಂಬಕ್ಕೆ ಸಂತ್ವಾನ ಹೇಳಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮೂರು ದಿನದ ಪ್ರಚಾರದಲ್ಲಿ ಇದರ ಅರಿವಾಗಿದೆ. ಇಲ್ಲಿ ಸಿಎಂ ಗೆಲವು ಕಷ್ಟ. ಚಾಮುಂಡೇಶ್ವರಿ ಕ್ಷೇತ್ರದ ಜನತೆ ಈ ಬಾರಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ. ಆದ್ದರಿಂದ ಸಿಎಂಗೆ ಸೋಲಿನ ಭೀತಿ ಕಾಡುತ್ತಿದೆ ಎಂದರು.
ಜನಾರ್ಧನ್ ರೆಡ್ಡಿಯನ್ನು ಬಿಜೆಪಿಯಿಂದ ಹೊರ ಹಾಕಿರುವುದು ಬಿಜೆಪಿಯವರ ವೈಯಕ್ತಿಕ ವಿಚಾರವಾಗಿದೆ. ಆದರೆ, ನಾವು ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆ ಇಲ್ಲ. ನಮಗೆ ಸಮಾಜಘತುಕ ಶಕ್ತಿಗಳು ಬೇಕಾಗಿಲ್ಲ. ನಮಗೆ ಸಮಾಜ ಕಟ್ಟುವ ಕೈಗಳು ಬೇಕು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸಿದ್ಧಗಂಗಾ ಶ್ರೀಗಳಿಗೆ ಇಂದಿಗೆ 111 ವರ್ಷ. ಅವರು ಇನ್ನು ಹೆಚ್ಚಿನ ಕಾಲ ಇರಬೇಕು. ಅವರ ಸೇವಾಕಾರ್ಯ ಎಲ್ಲರಿಗೂ ಮಾದರಿಯಾಗಬೇಕು. ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಮನವಿ ಮಾಡಿದರು.
ದೇಶದ ರಕ್ಷಣೆಗೆ ತನ್ನ ಪ್ರಾಣ ನೀಡಿದ ಅನೇಕ ಯೋಧರ ಕುಟುಂಬಗಳಿಗೆ ಇಲ್ಲಿವರೆಗೂ ಪರಿಹಾರ ದೊರೆತಿಲ್ಲ. ಸರ್ಕಾರ ಇನ್ನಾದರೂ ಹೆಚ್ಚೆತ್ತು ಪರಿಹಾರ ನೀಡಬೇಕು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹುತಾತ್ಮ ಯೋಧರ ಬಗ್ಗೆ ಕಾಳಜಿ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
2018ನೇ ಮೇ ತಿಂಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸುವುದು ಶತಸಿದ್ಧ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು ಬಿಎಸ್ಪಿಗೆ ಬಿಟ್ಟುಕೊಟ್ಟಿದ್ದು, ಅದರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರವನ್ನು ಬಿಎಸ್ಪಿಗೆ ಬಿಟ್ಟಿದ್ದು, ಉಳಿದೆಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರವನ್ನು ನಡೆಸಿದ ಸಂದರ್ಭ ಅವರಿಗೆ ಅಲ್ಲಿನ ಜನರು ನೀಡಿರುವ ಗೌರವವನ್ನು ನೋಡಿದರೆ ಗೊತ್ತಾಗುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕಿತ್ತೆಸೆಯುವುದು ನಿಶ್ಚಿತ, ಜೆಡಿಎಸ್ ಗೆಲ್ಲಿಸುವುದು ಶತಸಿದ್ಧ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ನವರು ಅವರ ಆಡಳಿತದಲ್ಲಿ ರಾಜ್ಯದ ಜನರಿಗೆ ತೀವ್ರ ಬೇಸರವನ್ನುಂಟು ಮಾಡಿದ್ದಾರೆ. ಹಲವಾರು ಭಾಗ್ಯಗಳ ಬೋಗಸ್ ಯೋಜನೆಗಳ ಮೂಲಕ ಖಜಾನೆಯನ್ನು ಸಿಎಂ ಸಿದ್ದರಾಮಯ್ಯ ಖಾಲಿ ಮಾಡಿದ್ದಾರೆ. ಹಲವಾರು ಭ್ರಷ್ಟಾಚಾರಗಳಿಂದ ತಪ್ಪಿಸಿಕೊಳ್ಳಲಾಗದೆ ನಮಗಿನ್ನು ಜೈಲೇ ಗತಿ ಎಂದು ನಂಬಿದ್ದ ಅಶೋಕ ಖೇಣಿಯನ್ನು ಪಕ್ಷಕೆ ಸೇರಿಸಿಕೊಂಡು ಭ್ರಷ್ಠರನ್ನು ರಕ್ಷಿಸುವವರೇ ಕಾಂಗ್ರೇಸ್ ಎಂದು ತೋರಿಸಿಕೊಟ್ಟಂತಾಗಿದೆ ಎಂದು ಅವರು ಕಿಡಿ ಕಾರಿದರು.
ಈ ಸಂದರ್ಭ ಶಾಸಕ ಎಚ್.ಎಸ್. ಶಿವಶಂಕರ್, ನಗರಸಭಾ ಸದಸ್ಯೆ ಅತ್ತಾವುಲ್ಲಾ, ಪಿ.ಎನ್ ವಿರುಪಾಕ್ಷಪ್ಪ, ನಗೀನಾ ಸುಭಾನಸಾಬ್, ಎಚ್. ಅಭಿಬುಲ್ಲಾ, ಎಂ.ಜಿ. ಪರಮೇಶ್ವರಗೌಡ, ಅಡಕಿ ಕುಮಾರ, ಇಲಿಯಾಸ ಅಹ್ಮದ್, ತಾಲೂಕು ಜೆಡಿಎಸ್ ಮುಖಂಡ ಜಿ. ನಂಜಪ್ಪ, ಆಸಿಫ್ಅಲಿ, ಎನ್. ಹರೀಶ ಮತ್ತಿತರರಿದ್ದರು.