ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ ವಿರೋಧಿಸಿ ‘ಭಾರತ್ ಬಂದ್’
ದೇಶದ ಹಲವೆಡೆ ಭಾರೀ ಪ್ರತಿಭಟನೆ, ಬಸ್, ರೈಲು ಸಂಚಾರ ಸ್ಥಗಿತ
ಪೊಲೀಸ್ ಪೋಸ್ಟ್, ವಾಹನಗಳಿಗೆ ಬೆಂಕಿ
ಹೊಸದಿಲ್ಲಿ, ಎ.2: ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ ವಿರೋಧಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ನಿಂದ ಪಂಜಾಬ್ ನಲ್ಲಿ ಬಸ್ ಸೇವೆ ಹಾಗು ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿದೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಂಜಾಬ್ ಸರಕಾರ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿತ್ತು. ಮೀರತ್ ನಲ್ಲಿ ಪ್ರತಿಭಟನಕಾರರು ಶೋಭಾಪುರ್ ನಲ್ಲಿ ಪೊಲೀಸ್ ಪೋಸ್ಟ್ ಗೆ ಬೆಂಕಿ ಹಚ್ಚಿದ್ದಾರೆ. ಒಂದು ಬೈಕ್ ಹಾಗು ಕಾರನ್ನು ಧ್ವಂಸಗೈದಿದ್ದಾರೆ.
ಬಾರ್ಮರ್ ನಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಕಾರು ಹಾಗು ಆಸ್ತಿಗಳಿಗೆ ಹಾನಿಯಾಗಿದೆ. ಕಪುರ್ತಲಾದ ಸುಭಾನ್ ಪುರದಲ್ಲಿ ಪ್ರತಿಭಟನಕಾರರು ಜಲಂಧರ್-ಅಮೃತಸರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದಿದ್ದಾರೆ.
ಬಿಹಾರದಲ್ಲಿ ಭೀಮ್ ಆರ್ಮಿ ಹಾಗು ಇತರ ದಲಿತ ಸಂಘಟನೆಗಳ ಕಾರ್ಯಕರ್ತರು ರೈಲು ಸಂಚಾರವನ್ನು ತಡೆದಿದ್ದಾರೆ. ಪಾಟ್ನಾ, ಗಯಾ, ಜೆಹನಾಬಾದ್, ಭಗಲ್ಪುರ, ಅರಾ, ದರ್ಭಾಂಗ, ಅರಾರಿಯಾ, ನಳಂದಾ ಹಾಗು ಹಾಜಿಪುರ್ ನಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.