ಮಣಿಪಾಲ: ಬಿವಿಟಿ ಬೇಸಿಗೆ ರಜಾ ಶಿಬಿರ ಉದ್ಘಾಟನೆ

ಮಣಿಪಾಲ, ಎ.2: ಪಠ್ಯ ಪುಸ್ತಕಗಳ ಓದಿನಿಂದಲೇ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯವಾಗದು. ಇದಕ್ಕಾಗಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಅಧ್ಯಯನ ಜೊತೆಗೆ ಬಿಡುವಿನ ವೇಳೆಯಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ರಜಾ ಶಿಬಿರಗಳಲ್ಲಿ ತರಗತಿಗಿಂತ ವಿಭಿನ್ನವಾದ ಕಲಿಕೆಯ ವಾತಾವರಣ ನಿರ್ಮಾಣವಾಗಬೇಕು. ಆಗ ಮಾತ್ರ ಈ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ, ಹೊಂದಾಣಿಕೆಯ ಮನೋಭಾವ ಮೂಡಿಸಿ ಸಕಾರಾತ್ಮಕ ಚಿಂತನೆ ಇತ್ಯಾದಿ ಗುಣಗಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಬೇಸಿಗೆ ರಜಾ ಶಿಬಿರವನ್ನು ಸೋಮವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೆಲವು ಶಾಲೆಗಳಲ್ಲಿ ವಿಪರೀತ ಶಿಸ್ತಿನ ವಾತಾವರಣ ಮೂಡಿಸಲಾಗುತ್ತಿದೆ. ಶಿಸ್ತಿನ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕುವುದು ಸಲ್ಲ. ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಳ್ಳಬೇಕಾದದ್ದು ನಮ್ಮ ವ್ಯವಹಾರದಲ್ಲಿ, ಮಾತಿನಲ್ಲಿ ಮತ್ತು ಜೀವನ ಶೈಲಿಯಲ್ಲಿ ಎಂದು ಡಾ.ರಾವ್ ಅಭಿಪ್ರಾಯಪಟ್ಟರು.
ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಂ. ಉಡುಪ ಮಾತನಾಡಿ ರಜಾ ಶಿಬಿರದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಅತಿಥಿಗಳನ್ನು ಸ್ವಾಗತಿಸಿದರು. ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಕಟ್ಗೇರಿ ವಂದಿಸಿದರು.
ಆರು ದಿನಗಳ ರಜಾ ಶಿಬಿರದಲ್ಲಿ ಮಹಾನ್ ವ್ಯಕ್ತಿಗಳ ಪರಿಚಯ, ಪರಿಸರ, ನಮ್ಮ ಭೂಮಿ, ಮಾಧ್ಯಮ ಕಲಿಕೆ, ಸ್ಮರಣ ಶಕ್ತಿ, ರಂಗವಲ್ಲಿ, ಆರೋಗ್ಯ ಜಾಹೀರಾತು ವಿಶ್ಲೇಷಣೆ, ಹದಿಹರೆಯದ ಸಮಸ್ಯೆಗಳು, ಕಲಿಕಾ ತೊಂದರೆ ನಿವಾರಣೆ, ಚಿತ್ರಕಲೆ, ಸಂಪನ್ಮೂಲ ಸದ್ಬಳಕೆ, ಕೃಷಿಯಲ್ಲಿ ಅವಕಾಶಗಳು, ಗಾಂಧೀಜಿಯ ಪ್ರಸ್ತುತತೆ, ರಾಷ್ಟ್ರಗೀತೆ, ನಾಡಗೀತೆ ಗಾಯನ ತರಬೇತಿ, ಸಾಹಿತ್ಯಾಸಕ್ತಿ, ಹರಿಕಥೆ, ಕರಕುಶಲತೆ, 108 ವಾಹನ ಪ್ರಾತ್ಯಕ್ಷತೆ, ಪ್ರಥಮ ಚಿಕಿತ್ಸೆ, ಯೋಗಾಭ್ಯಾಸ ಇತ್ಯಾದಿ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಗುಂಪು ಚಟುವಟಿಕೆ, ಮಣಿಪಾಲ ಪ್ಲಾನೆಟೋರಿಯಂ, ಮ್ಯೂಜಿಯಂ ಭೇಟಿ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಒಟ್ಟು 45 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ. ಈ ರಜಾ ಶಿಬಿರವನ್ನು ಬಿವಿಟಿ ಹಾಗೂ ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಜಂಟಿಯಾಗಿ ಆಯೋಜಿಸಿವೆ.