ನಿಟ್ಟೆ: ಜೈವಿಕ ಶಿಲೀಂದ್ರ ಲ್ಯಾಬೋರೇಟರಿಯಿಂದ ವೈದ್ಯಕೀಯ ಸಂಶೋಧನೆಗೆ ಅವಕಾಶ

ಉಳ್ಳಾಲ, ಎ. 2: ದೇಶದಲ್ಲಿ ಈಗಾಗಲೇ ಮೂರು ಮಾನ್ಯತೆ ಪಡೆದ ಜೈವಿಕ ಶಿಲೀಂದ್ರ ಲ್ಯಾಬೋರೇಟರಿಗಳಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದ ಕ್ಷೇಮದಲ್ಲಿ ಪ್ರಾರಂಭಿಸಿರುವ ನಾಲ್ಕನೇಯ ಲ್ಯಾಬೋರೆಟರಿ ಉತ್ತಮ ಕಾರ್ಯ ನಿರ್ವಹಿಸಿ ಸರಿಯಾದ ಸಮಯಕ್ಕೆ ಗುಣಮಟ್ಟದ ಸಾಧನೆ ನಡೆಸಿದ್ದಲ್ಲಿ ಈ ಕೇಂದ್ರಕ್ಕೂ ಮಾನ್ಯತೆ ನೀಡಲಾಗುವುದು ಎಂದು ನವದೆಹಲಿಯ ಅಣುವೈದ್ಯಕೀಯ ಮತ್ತು ಅನ್ವಯಿಕ ವಿಜ್ಞಾನ ಸಂಸ್ಥೆ (ಐಎನ್ಎಂಎಎಸ್)ನ ನಿರ್ದೇಶಕ ಡಾ ಅಜಯ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಭಾರತೀಯ ರಕ್ಷಣಾ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಪ್ರಯೋಗಾಲಯವಾಗಿರುವ ಅಣುವೈದ್ಯಕೀಯ ಮತ್ತು ಅನ್ವಯಿಕ ವಿಜ್ಞಾನ ಸಂಸ್ಥೆ (ಐಎನ್ಎಂಎಎಸ್)ಜಂಟಿಯಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರಾರಂಭಿಸಿರುವ ‘ಜೈವಿಕ ಶಿಲೀಂದ್ರ’ ಲ್ಯಾಬೋರೇಟರಿ ಮತ್ತು ಕೆಪಾಸಿಟಿ ಬಿಲ್ಡಿಂಗ್ ಉದ್ಘಾಟಿಸಿ ಮಾತನಾಡಿದರು.
ಜೈವಿಕ ಶಿಲೀಂದ್ರ ಲ್ಯಾಬೋರೇಟರಿಯಿಂದ ವೈದ್ಯಕೀಯ ಕ್ಷೇತ್ರದ ವಿವಿಧ ವಿಭಾಗಗಳೊಂದಿಗೆ ಹೊಸ ವಿಚಾರಗಳ ಸಂಶೋಧನೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಅಣುವೈದ್ಯಕೀಯ ಮತ್ತು ಅನ್ವಯಿಕ ವಿಜ್ಞಾನ ಸಂಸ್ಥೆ ನೂತನ ಲ್ಯಾಬೋರೇಟರಿಗೆ ಬೇಕಾದ ಎಲ್ಲಾ ಸಹಕಾರಗಳನ್ನು ನೀಡಲು ಸಿದ್ಧವಿದೆ. ಮುಂದಿನ ದಿನಗಳಲ್ಲಿ ಕೇವಲ ಜೈವಿಕ ಶಿಲೀಂದ್ರ ಲ್ಯಾಬೋರೇಟರಿಗೆ ಸೀಮಿತವಾಗದೆ ಡಿಆರ್ಡಿಒದ ಒಂದು ಸೆಟಲೈಟ್ ಕೇಂದ್ರವನ್ನಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಈ ವಿಭಾಗವನ್ನು ಅಭಿವೃದ್ಧಿಪಡಿಸಲು ಸಂಸ್ಥೆ ಉತ್ಸುಕವಾಗಿದ್ದು, ಇದರಿಂದ ಇಲ್ಲಿನ ಯುವ ಸಂಶೋಧಕರಿಗೆ ಅವಕಾಶಗಳು ಲಭ್ಯವಾಗಲಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ ಶಾಂತಾರಾಮ ಶೆಟ್ಟಿ ಮಾತನಾಡಿ ಜೈವಿಕ ಶಿಲೀಂದ್ರ ಲ್ಯಾಬೋರೇಟರಿಯಿಂದ ಯುವ ಸಂಶೋಧಕರಿಗೆ ಉತ್ತಮ ಆವಕಾಶ ನೀಡುವ ಕಾರ್ಯ ನಡೆಯುತ್ತಿದ್ದು, ಇದರ ವೈದ್ಯಕೀಯ ಮತ್ತು ಸಂಶೋಧನೆಯ ಲಾಭ ಕೇವಲ ಇಲ್ಲಿನವರಿಗೆ ಮಾತ್ರವಲ್ಲದೆ, ನೆರೆ ದೇಶಗಳಿಂದ ಆಗಮಿಸುವ ರೋಗಿಗಳಿಗೆ ಮತ್ತು ಯುವ ಸಂಶೋಧಕರಿಗೆ ಸಹಕಾರಿಯಾಗಲಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಸತೀಶ್ ಭಂಡಾರಿ, ಐಎಸ್ಆರ್ಬಿ ಅಧ್ಯಕ್ಷೆ ಡಾ ಮಧುಬಾಲ, ರೇಡಿಯೇಷನ್ ವಿಭಾಗದ ಮುಖ್ಯಸ್ಥ ಡಾ ಎನ್.ಕೆ.ಚೌಧರಿ, ಕ್ಷೇಮ ಅಕಾಡೆಮಿಕ್ ವಿಭಾಗದ ವೈಸ್ ಡೀನ್ ಡಾ ಎ.ಎಂ. ಮಿರಾಜ್ಕರ್ ಉಪಸ್ಥಿತರಿದ್ದರು.
ಕ್ಷೇಮ ಡೀನ್ ಡಾ ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಕ್ಷೇಮ ಬಯೋ ಕೆಮೆಸ್ಟ್ರಿ ವಿಭಾಗದ ಪ್ರಾಧ್ಯಾಪಕಿ ಡಾ ಸುಚೇತ ಕುಮಾರಿ ಅಥಿತಿಗಳನ್ನು ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪ್ರೀತಿಕಾ ಎ. ಕಾರ್ಯಕ್ರಮ ನಿರ್ವಹಿಸಿದರು.ಕ್ಷೇಮ ವೈಸ್ ಡೀನ್ ಡಾ ಜಯಪ್ರಕಾಶ್ ಶೆಟ್ಟಿ ವಂದಿಸಿದರು.







