ಉತ್ತರಪ್ರದೇಶ ಸರಕಾರಿ ಕಾರ್ಯಕ್ರಮದಲ್ಲಿ ಭಿನ್ನಚೇತನರ ಕಡೆಗಣನೆ
ಆಹಾರ, ನೀರು ನೀಡದೆ ನಿರ್ಲಕ್ಷ್ಯ

ಇಟಾವಾ.ಎ.2: ರವಿವಾರ ಇಲ್ಲಿ ಆಯೋಜಿಸಲಾಗಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಸಂಘಟಕರು ಭಿನ್ನಚೇತನರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮೂಲಕ ಅಮಾನವೀಯತೆಯನ್ನು ಮೆರೆದಿದ್ದಾರೆ. ತ್ರಿಚಕ್ರ ಸೈಕಲ್ಗಳನ್ನು ಸ್ವೀಕರಿಸಲು ಈ ಭಿನ್ನಚೇತನರನ್ನು ಆಹ್ವಾನಿಸಲಾಗಿತ್ತು. ಆದರೆ ಸೈಕಲ್ಗಳನ್ನು ನೀಡುವುದಿರಲಿ, ಅವರನ್ನು ಸರಿಯಾಗಿ ನಡೆಸಿಯೂ ಇಲ್ಲ ಎಂದು ಆರೋಪಿಸಲಾಗಿದೆ.
ಸಂಘಟಕರು ನಮಗೆ ಆಹಾರ, ನೀರನ್ನೂ ನೀಡಲಿಲ್ಲ. ಅವರು ನಮಗೆ ಏನನ್ನೂ ತಿಳಿಸಿಲ್ಲ. ತ್ರಿಚಕ್ರ ಸೈಕಲ್ ಕೊಡುವುದಿರಲಿ, ಸರಕಾರಿ ಅಧಿಕಾರಿಗಳು ನಮ್ಮೊಂದಿಗೆ ಮಾತೂ ಆಡಲಿಲ್ಲ. ನಮಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ನಮಗೆ ತಿಳಿಸಲಾಗಿತ್ತು. ಹೀಗಾಗಿ ದೂರದೂರದ ಪ್ರದೇಶಗಳಿಂದ ಬಂದಿದ್ದೇವೆ. ಆದರೆ ನಮ್ಮನ್ನು ಕಡೆಗಣಿಸಲಾಗಿದೆ. ತ್ರಿಚಕ್ರ ಸೈಕಲ್ಗಳಿಗಾಗಿ ನಾವು ಹೆಸರುಗಳನ್ನೂ ನೋಂದಾಯಿಸಿಕೊಂಡಿದ್ದೆವು ಎಂದು ನಿರಾಶೆಯ ಮುಖ ಹೊತ್ತಿದ್ದ ಸುದೇಶ್ ಹೇಳಿದರು.
ಆದಿತ್ಯನಾಥ್ ಸರಕಾರವು ನನ್ನಂತಹ ಹಲವರಿಗೆ ನಿರಾಶೆಯನ್ನುಂಟು ಮಾಡಿದೆ. ಅದು ನಮ್ಮಂಥವರ ಬವಣೆಗಳನ್ನು ಹೆಚ್ಚಿಸಲೆಂದೇ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು ಎಂದರು.





