ರೈಲು ಮಾರ್ಗದ ಬಗ್ಗೆ ಕೊಡಗಿನ ಜನ ಎಚ್ಚೆತ್ತುಕೊಳ್ಳಬೇಕು: ಕೊಡಗು ವನ್ಯ ಜೀವಿ ಸಂಘ ಕರೆ

ಮಡಿಕೇರಿ, ಏ.2: ಕೊಡಗಿನ ಮೂಲಕ ಹಾದು ಹೋಗುವ ಮೈಸೂರು-ತಲಚ್ಚೇರಿ ರೈಲು ಮಾರ್ಗದ ಯೋಜನೆ ಇಲ್ಲವೆಂದು ಕೆಲವರು ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ವನ್ಯ ಜೀವಿ ಸಂಘ, ಯೋಜನೆ ಜಾರಿಗೆ ಕೇರಳ ಸರ್ಕಾರ ಕರ್ನಾಟಕದ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೊಡಗಿನ ಜನ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕರ್ನಲ್ ಸಿ.ಪಿ. ಮುತ್ತಣ್ಣ, ಕೊಡಗಿನ ಜನ ನಿರ್ಲಕ್ಷ್ಯ ವಹಿಸಿದರೆ ರೈಲು ಮಾರ್ಗ ಅನುಷ್ಟಾನಗೊಳ್ಳುವುದು ಖಚಿತವೆಂದು ಮುನ್ಸೂಚನೆ ನೀಡಿದರು. ಕಾವೇರಿ ಹುಟ್ಟುವ ಪವಿತ್ರ ಭೂಮಿ ಕೊಡಗಿನ ರಕ್ಷಣೆಗಾಗಿ ಎಲ್ಲರು ಒಗ್ಗಟ್ಟನ್ನು ಪ್ರದರ್ಶಿಸಬೇಕೇ ಹೊರತು ಕೊಳಕು ರಾಜಕಾರಣ ಮಾಡಬಾರದೆಂದು ಮನವಿ ಮಾಡಿದರು.
ಕೆಲವರು ಯೋಜನೆಯನ್ನು ಕೈಬಿಡಲಾಗಿದೆಯೆಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಂಘಕ್ಕೆ ಬಂದ ಮಾಹಿತಿ ಪ್ರಕಾರ ರೈಲು ಮಾರ್ಗ ನಿರ್ಮಾಣವಾಗಲೇಬೇಕೆಂದು ಕೇರಳ ಕರ್ನಾಟಕದ ಮೇಲೆ ಒತ್ತಡ ಹೇರುತ್ತಿರುವುದು ಕಂಡು ಬಂದಿದೆ. 2017 ಏಪ್ರಿಲ್ 17 ರಂದು ಕೇರಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ರೈಲು ಮಾರ್ಗಕ್ಕೆ ಅವಕಾಶ ಕೋರಿದ್ದಾರೆ. ಈ ಬಗ್ಗೆ ದಾಖಲೆ ಇದ್ದರು ರೈಲು ಮಾರ್ಗದ ಯೋಜನೆ ಇಲ್ಲವೆಂದು ಜನರ ಹಾದಿ ತಪ್ಪಿಸುತ್ತಿರುವುದನ್ನು ಸಂಘ ಖಂಡಿಸುವುದಾಗಿ ಕರ್ನಲ್ ಮುತ್ತಣ್ಣ ತಿಳಿಸಿದರು.
ಮೂರ್ಖರನ್ನಾಗಿ ಮಾಡಬೇಡಿ
ಬಿಜೆಪಿಯ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಕೊಡಗಿನ ಜನರನ್ನು ಮೂರ್ಖರನ್ನಾಗಿ ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಮೈಸೂರಿನಲ್ಲಿ ರೈಲು ಮಾರ್ಗದ ವಿರುದ್ಧ ಹೋರಾಟ ನಡೆಸಿದ ನಮ್ಮನ್ನು ಕಾಂಗ್ರೆಸ್ನ ‘ಬಿ’ ಟೀಂ ಎಂದು ಹೇಳುವ ಮೂಲಕ ಕ್ಷುಲ್ಲಕ ರಾಜಕಾರಣ ಪ್ರದರ್ಶಿಸಿದ್ದಾರೆ. ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಕ್ಕಾಗಿ ಪರಿಸರವಾದಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ವಿನಾಕಾರಣ ಆರೋಪ ಮಾಡಲಾಗಿದೆ. ನಮಗೆ ಪ್ರಧಾನಮಂತ್ರಿಗಳ ಬಗ್ಗೆ ಅಪಾರ ಗೌರವವಿದ್ದು, ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತದೆ ಎನ್ನುವ ಆತ್ಮವಿಶ್ವಾಸವಿದೆ. ಮನುಮುತ್ತಪ್ಪ ಹಾಗೂ ಅವರ ಸಂಗಡಿಗರು ಕೊಳಕು ರಾಜಕಾರಣ ಮಾಡುವುದನ್ನು ಮೊದಲು ಬಿಡಬೇಕು. ಮೈಸೂರಿನ ಪ್ರತಿಭಟನೆಯಲ್ಲಿ 12 ಸಾವಿರಕ್ಕು ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಮನುಮುತ್ತಪ್ಪ ಅವರಿಗೆ ಸರಿಯಾದ ಉತ್ತರವನ್ನೆ ನೀಡಿದ್ದಾರೆ. ಅವರಿಗೆ ಹಾಗೂ ಅವರ ಸಂಗಡಿಗರಿಗೆ ಇನ್ನಾದರು ದೇವರು ಒಳ್ಳೆಯ ಬುದ್ಧಿಯನ್ನು ನೀಡಲಿ ಎಂದು ಕರ್ನಲ್ ಮುತ್ತಣ್ಣ ತಿರುಗೇಟು ನೀಡಿದರು.
ಮೈಸೂರಿನಲ್ಲಿ ರ್ಯಾಲಿ ನಡೆಸುವ ಬಗ್ಗೆ 2018ನೇ ಜನವರಿ ತಿಂಗಳಿನಲ್ಲೆ ನಾವು ದಿನಾಂಕವನ್ನು ನಿಗದಿಪಡಿಸಿ, ಮೈಸೂರು ರೈಲ್ವೆ ನಿಲ್ದಾಣದ ಸಮೀಪದ ಮೈದಾನವನ್ನು ಸಮಾವೇಶಕ್ಕಾಗಿ ಗೊತ್ತು ಪಡಿಸಿದ್ದೆವು. ಆದರೆ, ಪ್ರಧಾನಿ ಅವರ ಭೇಟಿಯ ಕಾರಣದಿಂದ ಅನುಮತಿ ದೊರೆಯದೆ ರ್ಯಾಲಿಯನ್ನು ದಸರಾ ವಸ್ತುಪ್ರದರ್ಶನ ಮೈದಾನಕ್ಕೆ ವರ್ಗಾಯಿಸಿದೆವು ಎಂದು ಸ್ಪಷ್ಟಪಡಿಸಿದರು.
ಮೈಸೂರಿನ ರ್ಯಾಲಿ ಯಶಸ್ಸನ್ನು ಕಂಡಿದ್ದು, ಪರಿಸರವನ್ನು ಉಳಿಸುವ ಕಾರ್ಯ ಜನ ಬೆಂಬಲದೊಂದಿಗೆ ಇನ್ನು ಮುಂದೆಯೂ ನಡೆಯಲಿದೆ ಎಂದರು. ಫೆಬ್ರವರಿ 18ರ ಮೈಸೂರು ರ್ಯಾಲಿಯ ನಂತರ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ವೈಲ್ಡ್ ಲೈಫ್ ಫಸ್ಟ್ ಎಂಬ ಸಂಘಟನೆ ಭೇಟಿ ಮಾಡಿದೆ. ಆದರೆ, ಕೊಡಗು ವನ್ಯ ಜೀವಿ ಸಂಘ ಮತ್ತು ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆಯ ಗಮನಕ್ಕೆ ಈ ಭೇಟಿಯ ವಿಚಾರ ತಿಳಿದು ಬಂದಿಲ್ಲ. ವೈಲ್ಡ್ ಲೈಫ್ ಫಸ್ಟ್ ಸಂಘಟನೆ ನೀಡಿರುವ ಹೇಳಿಕೆ ಮತ್ತು ನಿಯೋಗ ಸಚಿವರ ಬಳಿ ತಿಳಿಸಿದ ವಿಚಾರಕ್ಕೆ ನಾವು ಜವಾಬ್ದಾರರಲ್ಲವೆಂದು ಕರ್ನಲ್ ಮುತ್ತಣ್ಣ ಸ್ಪಷ್ಟಪಡಿಸಿದರು.
ಪ್ರಮುಖರಾದ ರಾಯ್ ಬೋಪಣ್ಣ ಮಾತನಾಡಿ, ತಲಚ್ಚೇರಿ ಮತ್ತು ಮೈಸೂರು ಭಾಗದಿಂದ ರೈಲು ಮಾರ್ಗವನ್ನು ನಿರ್ಮಿಸುತ್ತಾ ಬಂದು ಕೊನೆಯ ಗಳಿಗೆಯಲ್ಲಿ ಕೊಡಗಿನ ಪ್ರದೇಶದಲ್ಲಿ ರೈಲು ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಸಾಧ್ಯತೆಗಳಿದೆ. ಇದೇ ಪ್ರಕಾರವಾಗಿ ಹೈಟೆನ್ಶನ್ ವಿದ್ಯುತ್ ಮಾರ್ಗದ ಕಾಮಗಾರಿಯೂ ನಡೆದಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜೆಫ್ರಿ ಮುತ್ತಣ್ಣ, ಟಾರ್ಲಿ ಬೆಳ್ಯಪ್ಪ ಹಾಗೂ ಕಲ್ಮಾಡಂಡ ನವೀನ್ ಬೆಳ್ಯಪ್ಪ ಉಪಸ್ಥಿತರಿದ್ದರು.







