ಮಂಜೇಶ್ವರ : ಮಾದಕ ದ್ರವ್ಯದ ವಿರುದ್ಧ ಜಾಗೃತಿಗಾಗಿ ಬೃಹತ್ ಮ್ಯಾರಥಾನ್ ಓಟ
.jpg)
ಮಂಜೇಶ್ವರ,ಎ.3 : ಮಾದಕ ದ್ರವ್ಯದ ವಿರುದ್ಧ ಸೌಹಾರ್ದತೆಯ ಕೂಟ ಎಂಬ ಘೋಷ ವಾಕ್ಯದಡಿ ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಸ್ಥಳೀಯಾಡಳಿತ ಸಂಸ್ಥೆ ಮಂಜೇಶ್ವರ ಇದರ ಜಂಟಿ ಆಶ್ರಯದಲ್ಲಿ ಮಂಜೇಶ್ವರದ ವಿವಿಧ ಕ್ಲಬ್ ಗಳ ಸಹಭಾಗಿತ್ವದಲ್ಲಿ ಬೃಹತ್ ಮ್ಯಾರಥಾನ್ ಓಟ ನಡೆಯಿತು.
ಮಂಜೇಶ್ವರ ಗ್ರಾಮ ಪಂಚಾಯತ್ ನ ತೂಮಿನಾಡು , ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜೀರ್ಪಳ್ಳ, ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜಿಬೈಲು ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಳದಿಂದ ಹೊರಟ ಮ್ಯಾರಥಾನ್ ಓಟ ಹೊಸಂಗಡಿ ಪೇಟೆಯಲ್ಲಿ ಸಮಾರೋಪಗೊಂಡಿತು. ಬಳಿಕ ನಡೆದ ಸಮಾವೇಶವನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಜಿ ಸೈಮನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾದಕ ದ್ರವ್ಯ ಬಳಕೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಮತ್ತು ಯುವ ಜನತೆಗೆ ಅರಿವು ಮೂಡಿಸಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಡಿ.ವೈ.ಎಸ್.ಪಿ ಸುಕುಮಾರನ್, ವಿವೇಕ್ ಮಾದಕ ದ್ರವ್ಯದ ಪರಿಣಾಮದ ಕುರಿತು ಮಾಹಿತಿ ನೀಡಿದರು.
ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ, ವಿವಿಧ ಗ್ರಾಮ ಪಂಚಾಯತುಗಳ ಅಧ್ಯಕ್ಷರುಗಳಾದ ಅಝೀಝ್ ಹಾಜಿ , ಮಜೀದ್ ಪಾತೂರು, ಶಂಶಾದ್ ಶುಕೂರು , ಶಾಹುಲ್ ಹಮೀದ್ , ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್ , ಮೂಸಾ ಶರೀಫ್ , ಮೆಜೀಶ್ಯನ್ ಆರ್.ಕೆ ಕವಾಯಿ , ಮಂಜೇಶ್ವರ ಠಾಣೆ ಎಸ್.ಐ ಅನೂಬ್ ಮೊದಲಾದವರು ಉಪಸ್ಥಿತರಿದ್ದರು. ಕುಂಬಳೆ ಸಿ.ಐ ಅಧ್ಯಕ್ಷತೆ ವಹಿಸಿದರು ಹಾಗೂ ಮಾದಕ ವಿರೋಧಿ ಪ್ರತಿಜ್ಞೆ ಬೋಧಿಸಿದರು. ಮ್ಯಾರಥಾನ್ ಓಟದಲ್ಲಿ ಮಹಿಳೆಯರು , ಮಕ್ಕಳು ಸೇರಿದಂತೆ ನೂರಾರು ಮಂದಿ ಪಾಳ್ಗೊಂಡಿದ್ದರು. ಕಾರ್ಯಕ್ರಮದ ಮೊದಲು ನಡೆದ ಚೆಂಡೆ ಮೇಳ ತಂಡದ ಕುಣಿತ ಎಲ್ಲರ ಗಮನ ಸೆಳೆಯಿತು.