ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಛೇರಿ ಉದ್ಘಾಟನೆ

ಬೆಳ್ತಂಗಡಿ,ಎ.3 : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಡೀ ದೇಶದಲ್ಲಿ ಇತಿಹಾಸ ಎಂಬಂತೆ ಚುನಾವಣಾ ಪ್ರಣಾಳಿಕೆಗಳನ್ನು ಇಡೇರಿಸಿ ಬಡವರ, ಕೃಷಿಕರ, ವಿದ್ಯಾರ್ಥಿಗಳ, ಮಹಿಳೆಯರ ಮತ್ತು ಎಲ್ಲಾ ಸಮುದಾಯಗಳ ನೋವನ್ನು, ಬಡತನವನ್ನು ದೂರಮಾಡಿದ್ದಲ್ಲದೆ ತಾಲೂಕಿನಲ್ಲಿಯೂ ದಾಖಲೆಗಳ ಕಾಮಗಾರಿ ನಡೆದಿದ್ದು, ಇದುವೇ ತಾಲೂಕಿನಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ಮಂಗಳವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ಮುಖ್ಯಮಂತ್ರಿಗಳಿಗೆ ಅನ್ನದಾತ ಎಂಬ ಬಿರುದನ್ನು ರಾಜ್ಯದ ಜನ ನೀಡಿದ್ದಾರೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಜೀವನ ನಡೆಸುವಂತೆ ಮಾಡಿದ್ದಾರೆ. ರೈತರ ಸಾಲಮನ್ನ, ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್, ಉಚಿತ ಅಕ್ಕಿ ವಿತರಣೆ, ಇನ್ನಿತರ ಹತ್ತುಹಲವು ಕಾರ್ಯಕ್ರಮಗನ್ನು ಜನರಿಗೆ ನೀಡಿದ್ದಾರೆ. 94ಸಿ, 94ಸಿಸಿ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ಜಾರಿಗೊಳಿಸಿದ್ದರಿಂದ ಸಾವಿರಾರು ಕುಟುಂಬಗಳಿಗೆ ನಿವೇಶನ ಮತ್ತು ಮನೆ ನಿರ್ಮಿಸಲು ಸಹಾಯಕವಾಗಿದೆ. ಮಹಿಳೆಯರಿಗೆ ಸ್ವಉದ್ಯೋಗಕ್ಕೆ 3ಲಕ್ಷ ರೂ. ತನಕ ಬಡ್ಡಿ ರಹಿತ ಸಾಲ ನೀಡಿರುವುದು ದೊಡ್ಡ ಕೊಡುಗೆಯಾಗಿದೆ. ತಾಲೂಕಿನಲ್ಲಿ 21ಸಾವಿರಕ್ಕೂ ಅಧಿಕ 94ಸಿ ಹಾಗೂ 35ಸಾವಿರಕ್ಕೂ ಅಧಿಕ ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಸಿದ್ದು ಯಾವುದೇ ಪಕ್ಷಭೆದವಿಲ್ಲದೆ ಈ ಕಾರ್ಯ ಮಾಡಿದ್ದೇನೆ. ಒಂದು ಸಾವಿರ ಕೋಟಿಗೂ ಅಧಿಕ ಅನುದಾನ ತಾಲೂಕಿಗೆ ಮಂಜೂರುಗೊಂಡಿದ್ದು ಪ್ರತೀ ಹಳ್ಳಿ ಹಳ್ಳಿಗಳ ರಸ್ತೆ, ಸೇತುವೆ, ಕಟ್ಟಡಗಳು ನಿರ್ಮಾಣಗೊಂಡಿದೆ ಎಂದು ವಿವರಿಸಿದರು.
ಇಂತಹ ಅಭಿವೃದ್ದಿಯನ್ನು ನೋಡಲಾರದೆ ಬಿಜೆಪಿಯವರು ಆರೋಪಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಆದರೆ ತಾಲೂಕಿನ ಜನರಿಗೆ ನಾನು ಮಾಡಿರುವ ಅಭಿವೃದ್ದಿ ಕಾರ್ಯ ಏನು ಎಂದು ತಿಳಿದಿದೆ. ಮುಖ್ಯಮಂತ್ರಿಗಳು ಒಳ್ಳೆಯ ಕಾರ್ಯದ ಮೂಲಕ ಜನರ ಬಳಗೆ ಹೋದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಪ್ಪು ಕೆಲಸ ಮಾಡಿ ಜೈಲಿನತ್ತ ಹೋಗಿದ್ದಾರೆ ಎಂದರು.
ಜಿ.ಪಂ ಸದಸ್ಯ ಶಾಹುಲ್ ಹಮೀದ್ ಮಾತನಾಡಿ ತಾಲೂಕಿನಲ್ಲಿ ಶಾಸಕ ಕೆ. ವಸಂತ ಬಂಗೇರ ರವರು ಮಾಡಿದ ಅಭಿವೃದ್ದಿ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಭ್ರಷ್ಟಾಚಾರ ರಹಿತ ತಾಲೂಕಿನಲ್ಲಿ ಎಲ್ಲಾ ಸಮುದಾಯದೊಂದಿಗೆ ಸಮಾನ ಭಾವನೆಯಿಂದ ನಡೆದುಕೊಂಡದ್ದರಿಂದ ತಾಲೂಕಿನಲ್ಲಿ ಎಂದೂ ಕೋಮು ಸಂಘರ್ಷ ನಡೆದಿಲ್ಲ. ಮುಂದೆಯೂ ಇಂತಹ ಶಾಸಕರು ತಾಲೂಕಿಗೆ ಅಗತ್ಯವಿದ್ದು ಕೋಮು ಸಂಘರ್ಷ ಸೃಷ್ಠಿಸಲು ಪ್ರಯತ್ನಿಸುವ ಯಾವುದೇ ಪಕ್ಷಗಳಿಗೆ ಅಧಿಕಾರ ನೀಡಬೇಡಿ ಎಂದರು.
ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಇ. ಸುಂದರ ಗೌಡ, ಜಿಲ್ಲಾ ಉಸ್ತುವಾರಿ ವಿಜಯಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ಮಾತನಾಡಿದರು. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಶ್ರೀನಿವಾಸ ವಿ.ಕಿಣಿ ಅಧ್ಯಕ್ಷತೆ ವಹಿಸಿದ್ದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯರಾದ ಕೆ. ರಾಮಚಂದ್ರ ಗೌಡ, ಪಿತಾಂಬರ ಹೇರಾಜೆ, ಜಿ.ಪಂ ಸದಸ್ಯರಾದ ಪಿ. ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಇಂಟಕ್ ಅಧ್ಯಕ್ಷ ಸುಭಾಶ್ಚಂದ್ರ ರೈ, ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಪಂಚಾಯತ್ ರಾಜ್ ಸಂಘಟನಾ ಘಟಕದ ಅಧ್ಯಕ್ಷ ಜಯವಿಕ್ರಮ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಯೂಬ್, ಎಸ್ಸಿ ಘಟಕದ ಅಧ್ಯಕ್ಷ ಶ್ರೀಧರ್ ಕಳೆಂಜ, ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ, ಜಿಲ್ಲಾ ಉಸ್ತುವಾರ ಸೈಮಾನ್, ಎಪಿಎಂಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ ಉಪಸ್ಥಿತರಿದ್ದರು. ರಾಜಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







