ವಿಧಾನ ಪರಿಷತ್ ಸದಸ್ಯನ ಹೆಸರಲ್ಲಿ ವಂಚನೆ: ವ್ಯಕ್ತಿಯ ಬಂಧನ

ಬೆಂಗಳೂರು, ಎ.3: ವಿಧಾನ ಪರಿಷತ್ ಸದಸ್ಯನೆಂದು ಹೇಳಿಕೊಂಡು ಸರಕಾರಿ ಕೆಲಸ, ನಿವೇಶನ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿ, ನಗರದ ಹಲವೆಡೆ ನಡೆದಿದ್ದ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ.
ಬಂಧಿತನನ್ನು ಸಹಕಾರ ನಗರದ ನಿವಾಸಿ ಎಲ್.ಸೋಮಣ್ಣ(39) ಎಂದು ಗುರುತಿಸಲಾಗಿದೆ. ಮೈಸೂರು ಮೂಲದ ಆರೋಪಿಯು ತಾನು ಎಂಎಲ್ಸಿ ಸೋಮಣ್ಣ ಎಂದು ಪರಿಚಯ ಮಾಡಿಕೊಂಡು ವಂಚನೆ ನಡೆಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ತಾನು ಮೊಣಕಾಲ್ಮೂರು, ಚೆಲ್ಲಕೆರೆ, ಮೈಸೂರು ಭಾಗದ ವಿವಿಧ ಕ್ಷೇತ್ರಗಳ ಎಂಎಲ್ಎ ಅಭ್ಯರ್ಥಿ ಎಂದು ಹೇಳಿಕೊಂಡು ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದು ಅದಕ್ಕೆ ಚಿನ್ನದ ತಾಳಿ, ಬಿಸ್ಕೆಟ್ಗಳ ಅವಶ್ಯಕತೆ ಇದೆ ಎಂದು ಚಿನ್ನಾಭರಣ ವ್ಯಾಪಾರಿಗಳಿಗೆ ಆರ್ಡರ್ ಮಾಡಿ ವಂಚಿಸುತ್ತಿದ್ದ.
ಇದಲ್ಲದೆ ಸಾರ್ವಜನಿಕರಿಗೆ ಸರಕಾರಿ ಕೆಲಸ, ನಿವೇಶನ, ಬ್ಯಾಂಕ್ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟಿ ಗಟ್ಟಲೆ ಮೋಸ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಆರೋಪಿಯ ವಿರುದ್ಧ ವೈಯಾಲಿಕಾವಲ್, ಕೊಡಿಗೆಹಳ್ಳಿ, ಮೈಸೂರಿನ ನಜರ್ಬಾದ್ ಸೇರಿ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.





