ಮಡಿಕೇರಿ: ಮತಗಟ್ಟೆಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ
![ಮಡಿಕೇರಿ: ಮತಗಟ್ಟೆಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ: ಮತಗಟ್ಟೆಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ](/images/placeholder.jpg)
ಮಡಿಕೇರಿ, ಏ.3: ಜಿಲ್ಲೆಯ ಕೆಲವು ಕುಗ್ರಾಮಗಳಲ್ಲಿ ಯಾವುದೇ ದೂರ ಸಂಪರ್ಕ ಇಲ್ಲದಿರುವುದರಿಂದ ಮತಗಟ್ಟೆ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ದೂರಸಂಪರ್ಕ ಇಲ್ಲದಿರುವ ಕುಗ್ರಾಮಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತ್ ಸಂಚಾರ ನಿಗಮದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ಕುಮಾರಹಳ್ಳಿ ಕೊತ್ತನಹಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ, ಹರಗ, ತೋಳೂರು ಶೆಟ್ಟಳ್ಳಿ. ಕೂತಿ, ನಿಲುಗುಂದ ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿ, ಕೂಡ್ಲೂರು, ನಿಲುಗಾವಲು, ದೊಡ್ಡಬಾಣವಾರ, ಹಂಡ್ಲಿ, ಯಡೂರು, ಕಿಬ್ಬೆಟ್ಟ, ಐಗೂರು, ಮಡಿಕೇರಿ ತಾಲ್ಲೂಕಿನ ಹಮ್ಮಿಯಾಲ, ಮುಟ್ಲು, ಮುಕ್ಕೋಡ್ಲು, ಕಾಲೂರು, ಕಡಮಕಲ್ಲು, ಪೆರಾಜೆ, ಮುನ್ರೋಟ್, ಊರುಬೈಲು ಚೆಂಬು, ಹೆರವನಾಡು ಹೀಗೆ ನಾನಾ ಗ್ರಾಮಗಳಿಗೆ ದೂರವಾಣಿ ಸಂಪರ್ಕ ಇರುವುದಿಲ್ಲ. ಇಂತಹ ಕಡೆಗಳಲ್ಲಿ ಸ್ಥಿರ ಅಥವಾ ಸಂಚಾರಿ ದೂರವಾಣಿ ಸಂಪರ್ಕ ಕಲ್ಪಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರುಕೆಲವು ಕಡೆಗಳಲ್ಲಿ ವೈಯರ್ಲೆಸ್ ಸೇವೆ ಕಲ್ಪಿಸಬೇಕಿದೆ ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ. ಡಿ.ಎಂ.ಸತೀಶ್ ಕುಮಾರ್ ಅವರು ಮಾತನಾಡಿ ಇರುವ ಟವರ್ ಗಳನ್ನು ಬಲ ಪಡಿಸಬೇಕು, ಇಲ್ಲದಿದ್ದಲ್ಲಿ ಹೊಸ ಟವರ್ಗಳನ್ನು ಅಳವಡಿಸಿ ಸಂಪರ್ಕ ಕಲ್ಪಿಸಲು ಮುಂದಾಗಬೇಕಿದೆ ಎಂದರು. ಬಿ.ಎಸ್.ಎನ್.ಎಲ್ ಅಧಿಕಾರಿ ಸುಬ್ಬಯ್ಯ, ಎರ್ಟೆಲ್ ಹಾಗೂ ಜಿಯೋ ಕಂಪನಿಯ ಅಧಿಕಾರಿಗಳು ಹಾಜರಿದ್ದರು.