ಚಿಕ್ಕಮಗಳೂರು: ಜಿಪಂ ಸಿಇಒ ನೇತೃತ್ವದ ಅಧಿಕಾರಿಗಳ ತಂಡದಿಂದ ಮತದಾನ ಜಾಗೃತಿ
ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಪ್ರಾತ್ಯಕ್ಷಿಕೆ -
![ಚಿಕ್ಕಮಗಳೂರು: ಜಿಪಂ ಸಿಇಒ ನೇತೃತ್ವದ ಅಧಿಕಾರಿಗಳ ತಂಡದಿಂದ ಮತದಾನ ಜಾಗೃತಿ ಚಿಕ್ಕಮಗಳೂರು: ಜಿಪಂ ಸಿಇಒ ನೇತೃತ್ವದ ಅಧಿಕಾರಿಗಳ ತಂಡದಿಂದ ಮತದಾನ ಜಾಗೃತಿ](https://www.varthabharati.in/sites/default/files/images/articles/2018/04/4/ceo satyabhama 2.jpg)
ಚಿಕ್ಕಮಗಳೂರು ಎ.4: ಜಿಲ್ಲೆಯ ಹಳ್ಳಿಹಳ್ಳಿಗಳಲ್ಲೂ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಸದ್ದುಗದ್ದಲದೊಂದಿಗೆ ಮತಯಾಚನೆಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ತಂಡ ಕುಗ್ರಾಮಗಳಿಗೆ ಭೇಟಿ ನೀಡಿ ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸದ್ದಿಲ್ಲದೇ ಜಾಗೃತಿ ಆಂದೋಲನ ಹಮ್ಮಿಕೊಂಡಿದ್ದಾರೆ.
ಚುನಾವಣೆ ಬಂತೆಂದರೆ ರಾಜಕಾರಣಿಗಳು ಹಳ್ಳಿಹಳ್ಳಿಗಳಿಗೆ, ಮನೆ ಮನೆಗಳಿಗೆ ತೆರಳಿ ಮತ ಯಾಚಿಸುವುದು ಸಾಮಾನ್ಯ ಸಂಗತಿ. ಆದರೆ ಅಧಿಕಾರಿಗಳ ದಂಡು ಬೆಟ್ಟಗುಡ್ಡಗಳನ್ನೇರಿ ಹಳ್ಳಿಹಳ್ಳಿಗೆ ತೆರಳಿ ಮತದಾನ ಮಾಡುವಂತೆ ಪ್ರೇರೇಪಿಸುವ ಕೆಲಸ ಅಪರೂಪ. ಆದರೆ ಮೂಡಿಗೆರೆ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬುಧವಾರ ಜಿಪಂ ಸಿಇಒ ಸತ್ಯಭಾಮ ನೇತೃತ್ವದ ಅಧಿಕಾರಿಗಳ ತಂಡ ಮತದಾನದ ಮಹತ್ವದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟ ಅಪರೂಪದ ಪ್ರಸಂಗ ಕಂಡು ಬಂತು.
ಪ್ರತೀ ಚುನಾವಣೆಗಳ ಸಂದರ್ಭದಲ್ಲೂ ಜಿಲ್ಲೆಯ ಮೂಡಿಗೆರೆ, ಶೃಂಗೇರಿ ತಾಲೂಕುಗಳ ನಕ್ಸಲ್ ಪೀಡಿತ ಗುಡ್ಡಗಾಡು ಪ್ರದೇಶಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ.ಸತ್ಯಭಾಮ ನೇತೃತ್ವದ ಅಧಿಕಾರಿಗಳ ತಂಡ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ನಕ್ಸಲ್ ಪೀಡಿತ ಪ್ರದೇಶಗಳಾದ ತಲಗೋಡು, ಮಣ್ಣಿನಪಾಲ್, ಎಚ್.ಬಲಿಗೆ, ಕಳಗೊಡು ಮತ್ತು ಎಸ್.ಕೆ.ಮೇಗಲ್ ಗ್ರಾಮಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದರು. ಬೆಳಗಿನಿಂದ ಸಂಜೆಯವರೆಗೆ ಅಧಿಕಾರಿಗಳೊಂದಿಗೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿದ ಸತ್ಯಭಾಮ, ಮತದಾನದ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿ, ಮತ ಚಲಾಯಿಸುವ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ಸ್ಥಳೀಯ ಆದಿವಾಸಿ ಗಿರಿಜನರಿಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಅವರು, ಮತದಾನ ನಿಮ್ಮೆಲರ ಹಕ್ಕು, ಜವಾಬ್ದಾರಿ ಮತ್ತು ಧರ್ಮವಾಗಿದೆ. ಮತದಾನದ ಬಗ್ಗೆ ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬೇಡಿ. ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದ ಅವರು, ನಿಮ್ಮಿಷ್ಟ ಬಂದವರಿಗೆ ಮತದಾನ ಮಾಡಿ. ಇಷ್ಟವಿಲ್ಲದಿದ್ದರೂ ತಪ್ಪದೇ ಮತದಾನ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಎ14ರವರೆಗೆ ಅವಕಾಶವಿದ್ದು, ಅಷ್ಟರೊಳಗೆ ನಿಮ್ಮ ಹೆಸರುಗಳನ್ನು ನೋಂದಾಯಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು, ಗುಡ್ಡಪ್ರದೇಶಗಳಲ್ಲಿನ ಮನೆಗಳು ಮತದಾನ ಮಾಡಲು ಈಗಿರುವ ಮತಗಟ್ಟೆಗಳಿಂದ ದೂರದಲ್ಲಿವೆ. ಆದ್ದರಿಂದ ಮತದಾನಕ್ಕೆ ಬರಲು ಕಷ್ಟವಾಗುತ್ತಿದೆ. ವೃದ್ಧರು ಮತ್ತು ಮಕ್ಕಳನ್ನು ಮತಗಟ್ಟೆಗೆ ಹೊತ್ತು ತರುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಕೆಲ ಮತಗಟ್ಟೆಗಳನ್ನು ಬದಲಾಯಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವೀಪ್ ಸಮಿತಿಯ ಅಧ್ಯಕ್ಷೆ ಸತ್ಯಭಾಮ, ವೃದ್ಧರು ಮತ್ತು ಕೈಲಾಗದವರಿಗೆ ಮತದಾನ ಮಾಡಲು ವಾಹನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ನೇತೃತ್ವದ ಅಧಿಕಾರಿಗಳ ಜಾಗೃತಿ ಕಾರ್ಯಕ್ರಮಕ್ಕೆ ಬಹುತೇಕ ಗ್ರಾಮಗಳಲ್ಲಿ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮನವಿಗಳ ಮಹಾಪೂರ: ಇದೇ ವೇಳೆ ಬಹುತೇಕ ಗ್ರಾಮಸ್ಥರು ತಮ್ಮ ಪ್ರದೇಶಗಳಿಗೆ ರಸ್ತೆ, ಬಸ್ ಸಂಚಾರ, ವಿದ್ಯುತ್, ದೂರವಾಣಿ ಸಂಪರ್ಕ, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದರು. ಎಚ್.ಬಲಿಗೆ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲೀನಾ ಅವರು, ತಮ್ಮ ಇಡೀ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ ಇದ್ದು, ಆತನಿಗೋಸ್ಕರ ಪ್ರತಿದಿನ ಕಳಸದಿಂದ ತಾವು ನಡೆದು ಬರುತ್ತಿರುವುದಾಗಿ ಅಳಲು ತೋಡಿಕೊಂಡರು. ಈ ಸಮಸ್ಯೆಯನ್ನು ಯಾವುದಾದರೂ ಪರಿಹರಿಸುವಂತೆ ಸಿಇಒ ಸತ್ಯಭಾಮ ಅವರಿಗೆ ಮನವಿ ಮಾಡಿದರು. ಕೆಲ ಗ್ರಾಮಸ್ಥರು ತಮ್ಮ ಪ್ರದೇಶಗಳಲ್ಲಿ ಹೋಮ್ಸ್ಟೇಗಳಿದ್ದು ಅಲ್ಲಿಗೆ ಬರುವ ಪ್ರವಾಸಿಗರು ಕುಡಿದ ಬಾಟಲಿಗಳನ್ನು ರಸ್ತೆಯಲ್ಲೇ ಒಡೆದು ಹಾಕುತ್ತಿದ್ದಾರೆ. ಇದರಿಂದಾಗಿ ಪರಿಸರ ಹಾಳಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ ಸಿಇಒ ಸತ್ಯಭಾಮ, ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.