ಮಣಿಪಾಲ ಆರೋಗ್ಯ ಕಾರ್ಡ್-2018 ಯೋಜನೆ ಬಿಡುಗಡೆ: ಮಣಿಪಾಲ, ಮಂಗಳೂರಲ್ಲಿ 4 ಲಕ್ಷ ಕಾರ್ಡ್ ನೋಂದಣಿ ಗುರಿ

ಮಣಿಪಾಲ, ಎ.4: ಜನಸಾಮಾನ್ಯರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಉಪಕ್ರಮ ಮಣಿಪಾಲ ಆರೋಗ್ಯ ಕಾರ್ಡ್ ಮತ್ತು ದಂತ ಆರೋಗ್ಯ ಕಾರ್ಡ್ ಯೋಜನೆ-2018ನ್ನು ಕುಂದಾಪುರದ ಸಾರಿಗೆ ಉದ್ಯಮಿ ಸದಾನಂದ ಛಾತ್ರ ಅವರು ಬುಧವಾರ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಾನಂದ ಛಾತ್ರ, ಇದೀಗ 18ನೇ ವರ್ಷಕ್ಕೆ ಕಾಲಿರಿಸಿದ ಈ ಯೋಜನೆ ತನ್ನ ವಿಶಿಷ್ಟ ಕೊಡುಗೆಗಳಿಂದ ಜನ ಸಾಮಾನ್ಯರಿಗೆ ಸ್ವೀಕಾರಾರ್ಹವಾಗಿದೆ. ಈ ಯೋಜನೆಯ ಕುರಿತು ಸಮಾಜದಲ್ಲಿ ಅರಿವು ಮೂಡಿಸಬೇಕಿದ್ದು, ಸಾಮಾನ್ಯ ಜನರಿಗೂ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರಕಲು ಸಾಧ್ಯವಾಗಲಿದೆ ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯನ್ನು ಘೋಷಿಸಿದ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಣಿಪಾಲ ಆರೋಗ್ಯ ಕಾರ್ಡ್ ಜನಸಾಮಾನ್ಯರಿಗೆ ತುರ್ತುಅಗತ್ಯ ಸಂದರ್ಭಗಳಲ್ಲಿ ರಕ್ಷಣೆ ನೀಡುವ ಯೋಜನೆ ಯಾಗಿದೆ. ದೇಶದಲ್ಲಿ ವಿಮಾಯೇತರ ಹಾಗೂ ಸರಕಾರೇತರ ಯೋಜನೆಗಳಲ್ಲೇ ಅತ್ಯಂತ ಯಶಸ್ವಿ ಯೋಜನೆ ಎನಿಸಿಕೊಂಡಿದೆ ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಇದೀಗ 18ನೇ ವರ್ಷನೇ ವರ್ಷದಲ್ಲಿದ್ದು, ಕಳೆದ ವರ್ಷ 2,54,934 ಸದಸ್ಯರನ್ನು ಹೊಂದಿತ್ತು. ಈ ವರ್ಷ ನಾಲ್ಕು ಲಕ್ಷಕ್ಕೂ ಅಧಿಕ ಸದಸ್ಯರ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಡಾ.ಬಲ್ಲಾಳ್ ನುಡಿದರು.
ಕರ್ನಾಟಕದ 10 ಜಿಲ್ಲೆಗಳಲ್ಲಿ -ಉಡುಪಿ, ದ.ಕ., ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು ಸೇರಿದಂತೆ ಉತ್ತರ ಕೇರಳದ ಕಣ್ಣೂರು ಹಾಗೂ ಕಾಸರಗೋಡು ಮತ್ತು ಗೋವಾ ಯೋಜನೆ ಯ ವ್ಯಾಪ್ತಿಗೆ ಸೇರುತ್ತದೆ ಎಂದರು.
ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಸೈಂಟ್ ಮಿಲಾಗ್ರಿಸ್ ಸೌಹಾರ್ದದ ಮಾಲಕ ಜಾರ್ಜ್ ಫೆರ್ನಾಂಡೀಸ್ ಹಾಗೂ ಶಿವಮೊಗ್ಗದ ಹಿರಿಯ ಪತ್ರಕರ್ತ ಎನ್.ಮಂಜುನಾಥ್ ಇವರಿಗೆ 2018ನೇ ಸಾಲಿನ ಡಾ.ಟಿಎಂಎ ಪೈ ಆರೋಗ್ಯ ಸೇವಕ ಪ್ರಶಸ್ತಿಯನ್ನು ಮಾಹೆ ವಿವಿಯ ಕುಲಪತಿಗಳಾದ ಡಾ.ಎಚ್.ವಿನೋದ್ ಭಟ್ ಪ್ರದಾನ ಮಾಡಿದರು.
ಮಾಹೆಯ ಪ್ರೊ ವೈಸ್ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಮಣಿಪಾಲ ಕೆಎಂಸಿಯ ಡೀನ್ ಡಾ. ಪ್ರಜ್ಞಾ ರಾವ್, ಕೆಎಂಸಿಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೆಎಂಸಿ ಮಂಗಳೂರಿನ ಸಹಾಯಕ ಡೀನ್ ಡಾ.ಉನ್ನಿಕೃಷ್ಣನ್, ಕೆಎಂಸಿ ಮಂಗಳೂರಿನ ಸಿಒಒ ಡಾ.ಆನಂದ್ ವೇಣುಗೋಪಾಲ್, ಸಗೀರ್ ಸಿದ್ಧಿಕಿ ಉಪಸ್ಥಿತರಿದ್ದರು.
ಮಾಹೆಯ ಪ್ರೊ ವೈಸ್ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಮಣಿಪಾಲ ಕೆಎಂಸಿಯ ಡೀನ್ ಡಾ. ಪ್ರಜ್ಞಾ ರಾವ್, ಕೆಎಂಸಿಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೆಎಂಸಿ ಮಂಗಳೂರಿನ ಸಹಾಯಕ ಡೀನ್ ಡಾ.ಉನ್ನಿಕೃಷ್ಣನ್, ಕೆಎಂಸಿ ಮಂಗಳೂರಿನ ಸಿಒಒ ಡಾ.ಆನಂದ್ ವೇಣುಗೋಪಾಲ್, ಸಗೀರ್ ಸಿದ್ಧಿಕಿ ಉಪಸ್ಥಿತರಿದ್ದರು.
ಯೋಜನೆಯ ಮುಖ್ಯಾಂಶಗಳು
ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವ ರೋಗಿಗಳಿಗೆ ವೈದ್ಯರ ಸಮಾಲೋಚನೆಯಲ್ಲಿ ಶೇ.50ರಷ್ಟು, ಹೊರ ರೋಗಿಗಳಿಗೆ ಪ್ರಯೋಗಾಲಯದ ಶುಲ್ಕದಲ್ಲಿ ಶೇ.30 ರಿಯಾಯಿತಿ ಇದ್ದು ಹೆಚ್ಚು ಪ್ರಯೋಜನಕಾರಿಯಾಗಿದೆ. ಒಳರೋಗಿಗಳ ಬಿಲ್ಲಿಂಗ್ನಲ್ಲಿ ನೇರ ಶೇ. 25, ಫಾರ್ಮಸಿಯಿಂದ ಎಷ್ಟೇ ಬಾರಿ ಔಷಧ ಖರೀದಿಸಿದರೂ ಶೇ. 10ರವರೆಗೆ ರಿಯಾಯಿತಿ ಲಭ್ಯವಿದೆ.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಮಂಗಳೂರು, ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ, ಮತ್ತು ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿ ಸೇವೆಗಳು ಲಭ್ಯವಿದೆ. ಈ ಎಲ್ಲಾ ಆಸ್ಪತ್ರೆಗಳಲ್ಲಿ ಯೋಜನೆಯ ಅರ್ಜಿ ನಮೂನೆ ಲಭ್ಯವಿರುತ್ತವೆ ಎಂದು ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದರು.