ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿ.ಎಸ್.ಟಿ ರದ್ದು: ರಾಹುಲ್ ಗಾಂಧಿ
![ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿ.ಎಸ್.ಟಿ ರದ್ದು: ರಾಹುಲ್ ಗಾಂಧಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿ.ಎಸ್.ಟಿ ರದ್ದು: ರಾಹುಲ್ ಗಾಂಧಿ](/images/placeholder.jpg)
ತುಮಕೂರು/ರಾಮನಗರ, ಎ.4: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆ(ಜಿ ಎಸ್ ಟಿ) ಯನ್ನು ರದ್ದು ಮಾಡಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ 5 ನೆ ಹಂತದ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಜನವಿರೋಧಿ ಯೋಜನೆಗಳನ್ನು ಮಾಡುತ್ತಿದ್ದಾರೆ. ನೋಟು ಅಮಾನ್ಯೀಕರಣ ಮಾಡಿದರು. ಇದರಿಂದಾಗಿ ಸಾವಿರಾರು ಜನ ಕೆಲಸ ಕಳೆದುಕೊಂಡರು. ಅಲ್ಲದೆ, ಹಲವಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಜಿಎಸ್ಟಿ ಜಾರಿ ಮಾಡಿ ಬಡವರ ಮೇಲೆ ಗಧಾಪ್ರಹಾರ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಮಹಾನಗರ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ಅದರ ಕೀರ್ತಿ ಎಲ್ಲ ನಾಡು ಕಟ್ಟಿದ ಕೆಂಪೇಗೌಡರಿಗೆ ಸಲ್ಲುತ್ತದೆ. ಬೆಂಗಳೂರು ನಗರವಿಂದು ವಿಶ್ವಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂತಹ ನಾಡನ್ನು ಕೆಂಪೇಗೌಡ ಕಟ್ಟಿದ್ದು, ನಾನಿಂದು ಇಲ್ಲಿಗೆ ಭೇಟಿ ನೀಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ಪ್ರಪಂಚಕ್ಕೆ ಸಾಲುಮರದ ತಿಮ್ಮಕ್ಕ ಪರಿಸರದ ಕುರಿತು ಪ್ರೇಮವನ್ನು ತೋರಿಸಿಕೊಟ್ಟಿದ್ದಾರೆ. ಅವರಿಗೆ ಜನ್ಮನೀಡಿದ ನೆಲಕ್ಕೆ ಭೇಟಿ ಕೊಟ್ಟಿರೋದು ಅಪಾರವಾದ ಸಂತಸ ತಂದಿದೆ ಎಂದ ಅವರು, ಇಲ್ಲಿ 111 ವರ್ಷ ಪೂರೈಸಿದ ಶಿವಕುಮಾರ ಸ್ವಾಮೀಜಿಯವರು ಹಾಗೂ ಬಾಲಗಂಗಾದರನಾಥ ಸ್ವಾಮೀಜಿ ಜನಿಸಿರುವುದು ಎಲ್ಲರ ಅದೃಷ್ಟ. ಅವರು ಎಲ್ಲರೂ ಒಂದಾಗಿ, ಬೇಧ-ಭಾವವಿಲ್ಲದೆ ಮುನ್ನಡೆಯುವುದನ್ನು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಇವರೆಲ್ಲರನ್ನೂ ಆದರ್ಶವಾಗಿಟ್ಟುಕೊಂಡು ನಡೆಯಲಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಭ್ರಷ್ಟಚಾರದಲ್ಲಿ ಮೊದಲ ಸ್ಥಾನ ಪಡೆದವರನ್ನು ಪಕ್ಕದಲ್ಲಿ ಇಟ್ಟುಕೊಂಡು ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುತ್ತಾರೆ. ಇತ್ತೀಚೆಗೆ ಅವರ ಪಕ್ಷದ ಅಧ್ಯಕ್ಷರಾದ ಅಮಿತ್ ಶಾ ಕರ್ನಾಟಕದಲ್ಲಿ ಯಡಿಯೂರಪ್ಪನವರ ಸರಕಾರ ಅತಿ ಭ್ರಷ್ಟ ಸರಕಾರ ಎಂದು ಮೊಟ್ಟ ಮೊದಲ ಬಾರಿಗೆ ಸತ್ಯ ಹೇಳಿದ್ದಾರೆ ಎಂದ ಅವರು, ಇನ್ನಾದರೂ ಆರೋಪ ಮಾಡಿ ಕಾಲ ಕಳೆಯುವ ಬದಲಿಗೆ, ಜನರ ಸಮಸ್ಯೆಗಳನ್ನು ಆಲಿಸಲಿ ಎಂದರು.
ಇತ್ತೀಚೆಗೆ ಪ್ರಧಾನಿ ಮೋದಿಯ ಕಚೇರಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಸಾಲ ಮನ್ನಾ ಮಾಡುವ ಸಂಬಂಧ ಪ್ರಸ್ಥಾಪ ಮಾಡಿದ್ದೆ. ಅನಂತರ ಅವರು ಎಂದೂ ನನ್ನನ್ನು ಭೇಟಿ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ಮಾಡುವುದಿಲ್ಲ. ಬಂಡವಾಳಶಾಹಿ, ಕಾರ್ಪೋರೇಟ್ ಗಳ, ಉದ್ಯಮಿಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಸಾಲ ನೀಡುತ್ತಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಒಂದು ಬಾರಿ ಸಾಲ ಮನ್ನಾ ಸಂಬಂಧ ಮಾತನಾಡಿದ ತಕ್ಷಣ 8 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದಾರೆ ಎಂದ ಅವರು, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಮಲ್ಯ 9 ಸಾವಿರ ಕೋಟಿ ರೂ., ನೀರವ್ ಮೋದಿ 11 ಸಾವಿರ ಕೋಟಿ ರೂ. ಹಾಗೂ ಲಲಿತ್ ಮೋದಿ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ, ದೇಶದಿಂದಲೇ ಪರಾರಿಯಾಗಿದ್ದಾರೆ. ಇಷ್ಟಾದರೂ ಪ್ರಧಾನಿ ಇದರ ಬಗ್ಗೆ ಮಾತಾಡುತ್ತಿಲ್ಲ ಎಂದರು.
ಉಳ್ಳವರಿಗೆ ಮೀಸಲಾದ ಶಿಕ್ಷಣ: ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ ನಲ್ಲಿ ಸಾಮಾನ್ಯ ಜನರಿಗೆ ಶಿಕ್ಷಣ ಹಾಗೂ ಆರೋಗ್ಯ ಗಗನ ಕುಸುಮವಾಗಿದೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಖಾಸಗೀಕರಣದ ಕಡೆ ಸಾಗುತ್ತಿದೆ. ಗುಜರಾತ್ ನಲ್ಲಿ ಶಿಕ್ಷಣ ಪಡೆಯಲು ವಾರ್ಷಿಕ 15-20 ಲಕ್ಷ ಬೇಕಾಗುತ್ತದೆ. ಅಂದರೆ, ಶಿಕ್ಷಣ ಕೇವಲ ಉಳ್ಳವರಿಗೆ ಮಾತ್ರ ಸಿಗಬೇಕು ಎಂಬುದು ಬಿಜೆಪಿ ನೀತಿ. ಆದರೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಉಚಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಎಲ್ಲ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ ನೀಡಿದೆ. ಹಾಗೂ ಆರೋಗ್ಯದ ವಿಚಾರದಲ್ಲಿ ಗಮನಾರ್ಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೋದಿ ಗೆಳೆಯರ ಜೇಬು ತುಂಬುತ್ತಿದ್ದಾರೆ: ಕೇಂದ್ರದಲ್ಲಿ ಯುಪಿಎ ಸರಕಾರ ಆಡಳಿತವಿದ್ದಾಗ ಪೆಟ್ರೋಲ್ ಬೆಲೆ 160 ಡಾಲರ್ ಇತ್ತು. ಬೆಲೆ ಕಡಿಮೆಯಿತ್ತು. ಆದರೆ, ಮೋದಿ ಪ್ರಧಾನಿಯಾದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಬೆಲೆ ಇಳಿಕೆಯಾದರೂ ದೇಶದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗಿಲ್ಲ. ದೇಶದಲ್ಲಿ ಪ್ರಧಾನಿ ಮೋದಿ ಅವರ ಗೆಳೆಯರಿಗೆ ಪೆಟ್ರೋಲ್ ಸರಬರಾಜು ಗುತ್ತಿಗೆ ನೀಡಿದ್ದು, ಬಡವರಿಂದ ಸುಲಿಗೆ ಮಾಡಿ ಅವರ ಜೇಬು ತುಂಬಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದಲಿತರ ಮೇಲಿನ ದೌರ್ಜನ್ಯಕ್ಕಿಲ್ಲ ಕಡಿವಾಣ
'ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ನಡೆಯಿತು. ಅಂದಿನಿಂದ ಆರಂಭವಾದ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ಬಿಜೆಪಿ ಸರಕಾರ ಇದನ್ನು ನಿಯಂತ್ರಿಸಲು ಯಾವುದೇ ಕಠಿಣ ಕಾನೂನುಗಳನ್ನು ರೂಪಿಸಲಿಲ್ಲ. ಬದಲಿಗೆ, ಎಸ್ಸಿ ಎಸ್ಟಿ ಶೋಷಣೆ ನಡೆದ ಸಂದರ್ಭದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲು ಇದ್ದ ಕಾಯ್ದೆಯನ್ನು ನಿರ್ನಾಮ ಮಾಡಲು ಮುಂದಾಗಿದ್ದಾರೆ'
- ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ
ಜೆಡಿಎಸ್ ಬಿಜೆಪಿಯ ಬಿ ಟೀಮ್
ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಭಾರತೀಯ ಜನತಾ ಪಕ್ಷದ ಬಿ ಟೀಮ್ ಆಗಿ ಕೆಲಸ ಮಾಡುತ್ತಿದ್ದೆ. ಜೆಡಿಎಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ನಾವು ಬಿಜೆಪಿ ಬಿ ಟೀಮ್ ಆಗಿ ಕೆಲಸ ಮಾಡುತ್ತಿಲ್ಲವೆಂದು ಒಪ್ಪಿಕೊಳ್ಳಲಿ ಎಂದು ರಾಹುಲ್ ಸವಾಲ್ ಹಾಕಿದರು.