ಕಾರ್ಕಳ: ಮುನಿಯಾಲ್ ಉದಯ ಶೆಟ್ಟಿ ಪರ ಕಾಂಗ್ರೆಸ್ ಕಾರ್ಯಕರ್ತರ ಬ್ಯಾಟಿಂಗ್
ಉಡುಪಿ, ಎ.4: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನದ ದಿನವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದರೂ, ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಗೊಜಲು ಇನ್ನೂ ಮುಂದುವರಿದಿರುವುದರಿಂದ ಪಕ್ಷದ ತಳಮಟ್ಟದ ಕಾರ್ಯಕರ್ತರು ಗೊಂದಲದಲ್ಲಿದ್ದು, ಇದರಿಂದ ಪಕ್ಷದ ಪ್ರಚಾರದ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗುಂಪೊಂದು ಕಳವಳ ವ್ಯಕ್ತಪಡಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಯ ಆಯ್ಕೆಯಲ್ಲಿ ಇರುವ ಗೊಂದಲದಿಂದ ಆತಂಕಕ್ಕೊಳಗಾಗಿರುವುದಾಗಿ ಹೇಳುವ ಈ ಕಾರ್ಯಕರ್ತರು ಪಕ್ಷ ತಕ್ಷಣವೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿ, ಚುನಾವಣೆಗೆ ಸಿದ್ಧತೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾರ್ಕಳದ ಡೇನಿಯಲ್ ರೇಂಜರ್ ಅವರು, ಕಾರ್ಕಳದ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕತ್ವದ ಕೊರತೆ ಕಾಣಿಸಿಕೊಂಡಾಗ, ಪಕ್ಷದ ಸಂಘಟನೆಗೆ ಒತ್ತು ನೀಡಿ ಕ್ಷೇತ್ರದಾದ್ಯಂತ ಕಾರ್ಯಕರ್ತರನ್ನು ಸೇರಿ ತಳಮಟ್ಟದಿಂದ ಪಕ್ಷ ಕಟ್ಟುವ ಕೆಲಸ ಮಾಡಿದ ಉದಯ ಶೆಟ್ಟಿ ಮುನಿಯಾಲ್ ಅವರಿಗೆ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಕಾರ್ಯಕರ್ತರ ಪರವಾಗಿ ಮನವಿ ಮಾಡಿದರು.
ಈ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ಕ್ಷೇತ್ರ ಉಸ್ತುವಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿದ್ದು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದ ನಂತರವೂ ಅಭ್ಯರ್ಥಿ ಘೋಷಣೆ ಆಗದಿರುವುದು ತಮಗೆಲ್ಲಾ ಬೇಸರನ್ನುಂಟು ಮಾಡಿದೆ ಎಂದರು.
ಚುನಾವಣೆಗೆ ಕೆಲವೇ ಕೆಲವು ದಿನಗಳಿದ್ದರೂ, ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಚುನಾವಣೆಗೆ ತಯಾರಿಯನ್ನೇ ಪ್ರಾರಂಭಿಸಿಲ್ಲ. ಕ್ಷೇತ್ರದ ಉಸ್ತುವಾರಿಗಳಾದ ಜಿ.ಎ.ಬಾವಾ ಹಾಗೂ ಭರತ್ ಮುಂಡೋಡಿ ಅವರು ಮೊಯ್ಲಿ ಹಾಗೂ ಪುತ್ರನ ನಿರ್ಗಮನದ ಬಳಿಕ ಕ್ಷೇತ್ರದಿಂದಲೇ ಕಣ್ಮರೆಯಾಗಿದ್ದು, ಚುನಾವಣಾ ಪ್ರಚಾರದ ಯಾವುದೇ ಕೆಲಸ ಪ್ರಾರಂಭಗೊಂಡಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕಾರ್ಯಕರ್ತರೇ ಇಲ್ಲದ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ ಎಂದು ಭೀತಿ ವ್ಯಕ್ತಪಡಿಸಿದರು.
ಕ್ಷೇತ್ರದ ಕಾರ್ಯಕರ್ತರೀಗ ಅತಂತ್ರ ಸ್ಥಿತಿಯಲ್ಲಿದ್ದು, ಕೇವಲ ಮೊಯ್ಲಿಯವರ ನಿರ್ದೇಶನದ ಮೇರೆಗೆ ಅವರಿಗೆ ತಕ್ಕಂತೆ ವರ್ತಿಸುತಿದ್ದ ಉಸ್ತುವಾರಿಗಳು, ಕ್ಷೇತ್ರದ ಉತ್ಸಾಹಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಕಾರ್ಯ ನಿರ್ವಹಿಸುತಿದ್ದು, ಈ ಬಗ್ಗೆ ಹೈಕಮಾಂಡ್ಗೆ ದೂರು ನೀಡಲಾಗಿದೆ ಎಂದರು.
ಕಾರ್ಕಳದ ಕಾರ್ಯಕರ್ತರ ಅಪೇಕ್ಷೆ ಹಾಗೂ ಒಮ್ಮತದ ನಿರ್ಧಾರದಂತೆ ಉದಯ ಶೆಟ್ಟಿ ಮುನಿಯಾಲು ಇವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಅಗ್ರಹಿಸಿರುವ ಇವರು, ಬಿಜೆಪಿಯ ಭದ್ರಕೋಟೆ ಎನಿಸಿದ ಕಾರ್ಕಳದಲ್ಲಿ ನಿರ್ನಾಮದ ಸ್ಥಿತಿಯಲ್ಲಿದ್ದ ಕಾಂಗ್ರೆಸ್ಗೆ ಜೀವತುಂಬಿ ಕಳೆದೆರಡು ವರ್ಷಗಳಿಂದ ತಳಮಟ್ಟದಿಂದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿಸುತ್ತಿರುವ ಉದಯ ಶೆಟ್ಟಿ ಅವರೇ ಸಮರ್ಥ ಅಭ್ಯರ್ಥಿ ಎಂದು ತಿಳಿಸಿದ್ದಾರೆ. ಅವರಿಗೆ ಇಡೀ ಕ್ಷೇತ್ರದ ಕಾರ್ಯಕರ್ತರ ಹಾಗೂ ಮತದಾರರ ಬೆಂಬಲವಿದ್ದು, ಖಂಡಿತ ಗೆಲ್ಲುವ ಅವಕಾಶವಿದೆ ಎಂದಿದ್ದಾರೆ.
ಕಾರ್ಕಳದಲ್ಲಿ ವೀರಪ್ಪ ಮೊಯ್ಲಿ ಅವರ ಮಾರ್ಗದರ್ಶನ, ಗೋಪಾಲ ಭಂಡಾರಿ ಅವರ ನಾಯಕತ್ವದಲ್ಲಿ ನಾವೆಲ್ಲ ಕಾರ್ಯಕರ್ತರಾಗಿ ಉತ್ಸಾಹದಿಂದ ದುಡಿಯಲು ಸಿದ್ಧವಿದ್ದು, ಕೂಡಲೇ ಅಭ್ಯರ್ಥಿಯ ಹೆಸರು ಘೋಷಿಸಬೇಕು ಎಂದು ಪಕ್ಷವನ್ನು ಕೋರಿದ್ದಾರೆ.ಒಂದು ವೇಳೆ ನಮ್ಮ ಮನವಿಯನ್ನು ಪರಿಗಣಿಸದೇ ಕಾರ್ಯಕರ್ತರ ಅಭಿಪ್ರಾಯವನ್ನು ಕಡೆಗಣಿಸಿ ಬೇರೆ ಅಭ್ಯರ್ಥಿ ಆಯ್ಕೆಯಾದಲ್ಲಿ ತಾವೆಲ್ಲ ತಟಸ್ಥ ನೀತಿಯನ್ನು ಅನುಸರಿಸುತ್ತೇವೆ ಎಂದು ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ನ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರಾದ ತಾರಾನಾಥ ಕೋಟ್ಯಾನ್, ವಲೇರಿಯನ್ ಪಾಯಸ್, ರಂಜಿತ್ ಸಿ.ಟಿ., ಶೇಖ್ ಶಬ್ಬೀರ್ ಮುಂತಾದವರು ಉಪಸ್ಥಿತರಿದ್ದರು.