ನಾಗಮಂಗಲ: ಅಣ್ಣನ ಮೇಲಿನ ಹಲ್ಲೆ ಆರೋಪದ ದೂರು ಸ್ವೀಕರಿಸಲಿಲ್ಲವೆಂದು ಠಾಣೆಯಲ್ಲೇ ತಮ್ಮನಿಂದ ಆತ್ಮಹತ್ಯೆಗೆ ಯತ್ನ
ನಾಗಮಂಗಲ, ಎ.4: ನಿವೇಶನ ವಿಚಾರದಲ್ಲಿ ತನ್ನ ಅಣ್ಣನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪೋಲಿಸರು ತಮ್ಮ ದೂರು ದಾಖಲಿಸಲು ನಿರಾಕರಸಿದರೆಂಬ ಕಾರಣಕ್ಕೆ ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣ ಠಾಣೆಯಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಕಸುವನಹಳ್ಳಿಯ ರಘುಕುಮಾರ್ (26) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಮಂಗಳವಾರ ರಘುಕುಮಾರ್ ಅಣ್ಣ ರವಿಕುಮಾರ್ ಮೇಲೆ ನಿವೇಶನ ವಿಚಾರದಲ್ಲಿ ರಾಮಕೃಷ್ಣ ಯಾನೆ ಕರೀಗೌಡ, ಪುಟ್ಟೆಗೌಡ, ಮರೀಗೌಡ ಇತರರು ಹಲ್ಲೆ ಮಾಡಿದ್ದರು ಎನ್ನಲಾಗಿದೆ.
ಹಲ್ಲೆ ಮಾಡಿದವರ ವಿರುದ್ಧ ಬುಧವಾರ ಪಟ್ಟಣ ಠಾಣೆಗೆ ದೂರು ನೀಡಲು ತೆರಳಿದ ರವಿಕುಮಾರ್ ತಂದೆ ಕೃಷ್ಣಪ್ಪ ಅವರಿಂದ ದೂರು ಸ್ವೀಕರಿಸದೆ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ. ಜತೆಗೆ ಮಂಗಳವಾರವೇ ಹಲ್ಲೆ ಮಾಡಿದವರಿಂದ ದೂರು ಪಡೆದು ರವಿಕುಮಾರ್ ವಿರುದ್ಧವೆ ಪೊಲೀಸರು ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
ವಿಷಯ ತಿಳಿದು ಬೆಂಗಳೂರಿನಿಂದ ಆಗಮಿಸಿದ್ದ ರವಿಕುಮಾರ್ ತಮ್ಮ ರಘುಕುಮಾರ್ ಪೋಲಿಸರು ತಮ್ಮ ತಂದೆ ನೀಡಿದ ದೂರು ಸ್ವೀಕರಿಸುತ್ತಿಲ್ಲ ಎಂದು ಡೆತ್ನೋಟ್ ಬರೆದು ಸಂಜೆ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದನೆಂದು ಹೇಳಲಾಗಿದ್ದು, ಆತನನ್ನು ಬೆಳ್ಳುರು ಕ್ರಾಸ್ನ ಆದಿಚುಂನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ.