ಲಂಚ ಸ್ವೀಕಾರ: ಪುತ್ತಿಲ ಗ್ರಾಮದ ವಿಎ ಸೆರೆ

ಮಂಗಳೂರು, ಎ.5: 94 ಸಿ ಅಡಿ ಜಾಗ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮಹಿಳೆಯೊಬ್ಬರ ದೂರಿನ ಮೇರೆಗೆ, ಪುತ್ತಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್ ಮಹಿಳೆಯಿಂದ 5,000 ರೂ., ಲಂಚದ ಹಣವನ್ನು ಸ್ವೀಕರಿಸುವಾಗ ಗುರುವಾರ ಎಸಿಬಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.
ಮಹಿಳೆಯು 94-ಸಿ ಅಡಿಯಲ್ಲಿ ಜಾಗ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದು, ಸುಮಾರು ಒಂದೂವರೆ ವರ್ಷ ಆದರೂ ಅವರ ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿ ಬಾಕಿ ಇಟ್ಟುಕೊಂಡು ಪ್ರತಿ ಸಲ ಹೋಗಿ ಕೇಳಿದಾಗ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಕಾಲ ವಿಳಂಬ ಮಾಡಿದ್ದರು ಎಂದು ತಿಳಿದುಬಂದಿದ್ದು, ಅರ್ಜಿದಾರರಿಂದ ಈ ಹಿಂದೆ ರೂ 3,000 ರೂ. ಕೆಲಸದ ಪ್ರಯುಕ್ತ ಲಂಚ ಪಡೆದಿದ್ದರು ಎನ್ನಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕಿ ಶೃತಿ ಎನ್. ಎಸ್. ಅವರ ಮಾರ್ಗದರ್ಶನದಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಎಂ. ಹೆಗಡೆ ಇವರ ನೇತೃತ್ವದ ತಂಡದಲ್ಲಿ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ, ಸಿಬ್ಬಂದಿಯವರಾದ ಹರಿಪ್ರಸಾದ್ ಉಮೇಶ್, ರಾಧಾಕೃಷ್ಣ, ಪ್ರಶಾಂತ್, ರಾಧಾಕೃಷ ಡಿ.ಎ., ವೈಶಾಲಿ, ರಾಕೇಶ್, ಗಣೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.