ಎ. 8 : ಭಗತ್ಸೇನೆಯಿಂದ ಮೂಡುಬಿದಿರೆಯಲ್ಲಿ ಉಚಿತ ಸಾಮೂಹಿಕ ವಿವಾಹ
ಮೂಡುಬಿದಿರೆ, ಎ.5 : ಸಮಾಜಮುಖಿ ಕೆಲಸಗಳನ್ನು ಮಾಡುವ ಧ್ಯೇಯದೊಂದಿಗೆ ಕಳೆದ ಒಂದು ವರ್ಷದ ಹಿಂದೆ ಮೂಡುಬಿದಿರೆಯಲ್ಲಿ ಹುಟ್ಟಿಕೊಂಡಿರುವ ಸಂಘಟನೆ ಭಗತ್ ಸೇನೆ ವತಿಯಿಂದ ಮಿಜಾರಿನ ಸುರೇಶ್ ಶೆಟ್ಟಿ, ಹರಿಮೀನಾಕ್ಷಿ ದೋಟ ಇವರ ಸಹಕಾರದೊಂದಿಗೆ ಎ.8ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಉಚಿತ ಸಾಮೂಹಿಕ ವಿವಾಹ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಲಿದೆ ಎಂದು ಸಂಘಟನೆಯ ಉಪಾಧ್ಯಕ್ಷ ಯೋಗೀಶ್ ಬೆದ್ರ ತಿಳಿಸಿದರು.
ಅವರು ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ಕಾರ್ಕಳ ಮತ್ತು ಮೂಡುಬಿದಿರೆ ವ್ಯಾಪ್ತಿಯ ಒಟ್ಟು 5 ಜೋಡಿಗಳಿಗೆ ವಿವಾಹ ನಡೆಯಲಿದ್ದು, ವಧುವಿಗೆ ಒಂದೂವರೆ ಪವನಿನ ಕರಿಮಣಿಸರ ಮತ್ತು ಸೀರೆ, ವರನಿಗೆ ಧೋತಿ ಮತ್ತು ಶರ್ಟ್ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಸಂಘಟನೆಯು ಕಳೆದ ಒಂದು ವರ್ಷದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಮನೆ ದುರಸ್ಥಿಗಾಗಿ ರೂ 50,000 ಸಹಾಯಹಸ್ತ, ಅಪಘಾತಕ್ಕೊಳಗಾಗಿರುವ ಜಯಕರ ಆಚಾರ್ಯ ಎಂಬವರಿಗೆ ರೂ 35,000 ಸಹಾಯಧನ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನಿತಿನ್ ಸಾಲ್ಯಾನ್ ಅವರಿಗೆ ರೂ 10,000 ಸಹಾಯಧನ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೇತ್ರದಾನ, ಭಗತ್ಸಿಂಗ್ ಅವರ ಜನ್ಮದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಸಹಿತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಇದಲ್ಲದೆ ಭಗತ್ಸೇನೆಯ ವಿದ್ಯಾರ್ಥಿ ಘಟಕಗಳನ್ನು ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
ಭಗತ್ಸೇನೆಯ ಅಧ್ಯಕ್ಷ ಪ್ರಸಾದ್ ಆಳ್ವ, ಸ್ಥಾಪಕಾಧ್ಯಕ್ಷ ಸುಜಿತ್ ಶೆಟ್ಟಿ, ಉಪಾಧ್ಯಕ್ಷ ದಯಾನಂದ ಆಚಾರ್ಯ, ಜೊತೆ ಕಾರ್ಯದರ್ಶಿ ಸಂದೀಪ್ ಎಂ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.