ನೀತಿ ಸಂಹಿತೆಗೆ ಮಣ್ಣು ಹಾಕಿ: ವಿವಾದಾತ್ಮಕ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್

ಕೊಣಾಜೆ, ಎ. 6: ಕೈರಂಗಳ, ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸಿದ ಕಲ್ಲಡ್ಕ ಪ್ರಭಾಕರ ಭಟ್ ಮೊಘಲರು, ಬ್ರಿಟೀಷರಿಗಿಂತ ಕೆಟ್ಟದಾಗಿ ಅಧಿಕಾರಶಾಹಿಗಳು ರಾಜ್ಯ ಆಳುತ್ತಿದ್ದಾರೆ. ಹಿಂದೂ ಧರ್ಮವನ್ನು, ಸಂಸ್ಕೃತಿಯನ್ನು ಅಳಿಸುವ ಎಲ್ಲಾ ಪ್ರಯತ್ನದಲ್ಲಿ ಸರಕಾರ ತೊಡಗಿಸಿಕೊಂಡಿದೆ ಎಂದಿದ್ದು, ಈ ಸಂದರ್ಭ ನೀತಿ ಸಂಹಿತೆಯ ಬಗ್ಗೆ ಸಭೆಯಲ್ಲಿದ್ದವರು ಹೇಳಿದಾಗ "ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು ನೀತಿ ಇಲ್ಲದ ಸಮಿತಿ" ಎಂದು ವಿವಾದಾತ್ಮಕ ಹೇಳಿಕೆ ನೀಡಿ, ನೀತಿ ಸಂಹಿತೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗೋವು ದರೋಡೆಕೋರರನ್ನು ನಿಗ್ರಹಿಸಿದ್ದರೆ ಪ್ರತಿಭಟಿಸುವ ಅವಕಾಶವೇ ಇರುತ್ತಿರಲಿಲ್ಲ. ಹೋರಾಟ ಅಪೂರ್ಣವಾಗಲು ಎಂದಿಗೂ ಬಿಡುವುದಿಲ್ಲ. ತಾನು ಕೂಡಾ ಕೈ ಜೋಡಿಸುವುದಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಈ ಸಂದರ್ಭ ಹೇಳಿದರು.
ಕೈರಂಗಳದ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಜಾನುವಾರು ಕಳವು ಘಟನೆಯ ನೈಜ ಅಪರಾಧಿಗಳ ಪತ್ತೆಗೆ ಒತ್ತಾಯಿಸಿ ಗೋ ಶಾಲೆ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಂ ಭಟ್ ಕೈಗೊಂಡಿರುವ ಆಮರಣಾಂತ ಉಪವಾಸದ 6ನೇ ದಿನವಾದ ಶುಕ್ರವಾರ ಗೋಶಾಲೆಗೆ ಭೇಟಿ ನೀಡಿ ಗೋ ಪೂಜೆ ನೆರವೇರಿಸಿ ಬಳಿಕ ನಡೆದ ಸಭೆಯಲ್ಲಿ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಮಾತನಾಡಿದರು.
ಸಮಾಜದಲ್ಲಿ ಒಳಿತಿಗೆ ಉಳಿಗಾಲವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅನ್ಯಾಯಗಳು ಮೇರೆಮೀರಿದೆ. ಅನ್ಯಾಯದ ವಿರುದ್ಧ ನಡೆಯುತ್ತಿರುವ ಆಮರಣಾಂತ ಉಪವಾಸ ಆರನೇ ದಿನ ಪೂರೈಸಿರುವುದು ಹೆಮ್ಮೆಯ ವಿಚಾರ. ಹೋರಾಟ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದೆ. ರಾಜಕಾರಣಿಗಳಂತೆ ಎಸಿಯೊಳಗೆ ಕುಳಿತು ಮಧ್ಯಾಹ್ನದವರೆಗಿನ ಉಪವಾಸದಲ್ಲಿ ಭಾಗಿಯಾಗಿ ರಾಜಾರಾಂ ಭಟ್ ಅವರು ನಾಟಕವಾಡಿಲ್ಲ. ಅವರಿಗೆ ಆಗಿರುವ ಮಾನಸಿಕ ಆಘಾತದಿಂದ ನೊಂದು ಉಪವಾಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಗೋವುಗಳ ಜೀವ ಎಷ್ಟು ಅಮೂಲ್ಯವೋ, ಉಪವಾಸ ನಿರತರ ಜೀವವೂ ಅಷ್ಟೇ ಅಮೂಲ್ಯವಾಗಿರುತ್ತದೆ. ರಾಜಾರಾಂ ಭಟ್ ಹಾಗೂ ಅವರ ಜತೆಗೆ ಆಮರಣಾಂತ ಉಪವಾಸ ಕೈಗೊಂಡಿರುವ 40 ಮಂದಿಯ ಆರೋಗ್ಯದಲ್ಲಿ ಏರುಪೇರಾದಲ್ಲಿ ಇಡೀ ಸಮಾಜವೇ ಕಾನೂನಿನ ವಿರುದ್ಧ ನಿಲ್ಲುತ್ತದೆ. ಆದರೆ ಇದುವರೆಗೆ ಹಿಂದೂ ಸಮಾಜ ದೇಶ, ಧರ್ಮದ ಮೇಲೆ ಬಹಳಷ್ಟು ಆಕ್ರಮಣಗಳಾದರೂ ಎಂದಿಗೂ ಕಾನೂನು ಕೈಗೆತ್ತಿಕೊಂಡಿಲ್ಲ. ಸಂವಿಧಾನ ಚೌಕಟ್ಟಿನೊಳಗೆ ಹೋರಾಟಗಳು ನಡೆದಿವೆ. ಅದಕ್ಕಾಗಿ ನ್ಯಾಯ ದೊರೆತಲ್ಲಿ ಅದೇ ವ್ಯವಸ್ಥೆ ಉಳಿಯಲು ಸಾಧ್ಯ. ಸಾತ್ವಿಕರು ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೆ ಸಮಾಜದಲ್ಲಿ ಯಾರೂ ಉಳಿಯಲು ಅಸಾಧ್ಯ, ಪ್ರಳಯವೂ ಆಗಬಹುದು ಎಂದು ಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಗೋ ಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಂ ಭಟ್, ಕನ್ಯಾನ ಬಾಳೆಕೋಡಿ ಕಾಶೀಕಾಳ ಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ವಿ.ಹಿಂ.ಪ. ಮುಖಂಡರುಗಳಾದ ಗೋಪಾಲ ಕುತ್ತಾರ್, ಶರಣ್ ಪಂಪ್ವೆಲ್, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಬಂಟ್ವಾಳದ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳೇಪಾಡಿಗುತ್ತು, ಶ್ರೀ ಕ್ಷೇತ್ರ ಕಣಂತೂರು ತೋಡಕುಕ್ಕಿನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ಮಂಜು ಭಂಡಾರಿ ಯಾನೆ ತಿಮ್ಮಪ್ಪ ಕೊಂಡೆ, ನಂದರಾಜ್ ಶೆಟ್ಟಿ ಪಿಜಿನಬೈಲ್, ಜಗದೀಶ ಆಳ್ವ ಕುವೆತ್ತಬೈಲ್, ರವಿರಾಜ ಹೆಗ್ಡೆ, ರಾಧಾಕೃಷ್ಣ ಅಡ್ಯಂತಾಯ, ರಹೀಂ ಉಚ್ಚಿಲ್ ಉಪಸ್ಥಿತರಿದ್ದರು.
ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.
'ನೀತಿ ಸಂಹಿತೆಗೆ ಮಣ್ಣು ಹಾಕಿ' ವಿವಾದಾತ್ಮಕ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್
ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕಲ್ಲಡ್ಕ ಪ್ರಭಾಕರ ಭಟ್, ಮೊಘಲರು, ಬ್ರಿಟೀಷರಿಗಿಂತ ಕೆಟ್ಟದಾಗಿ ಅಧಿಕಾರಶಾಹಿಗಳು ರಾಜ್ಯ ಆಳುತ್ತಿದ್ದಾರೆ. ಹಿಂದೂ ಧರ್ಮವನ್ನು, ಸಂಸ್ಕೃತಿಯನ್ನು ಅಳಿಸುವ ಎಲ್ಲಾ ಪ್ರಯತ್ನದಲ್ಲಿ ಸರಕಾರ ತೊಡಗಿಸಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ನೀತಿ ಸಂಹಿತೆಯ ಬಗ್ಗೆ ಸಭೆಯಲ್ಲಿದ್ದವರು ಹೇಳಿದಾಗ ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು ನೀತಿ ಇಲ್ಲದ ಸಮಿತಿ ಎಂದು ವಿವಾದಾತ್ಮಕ ಹೇಳಿಕೆ ನೀಡಿಕೆ ನೀಡಿ, ನೀತಿ ಸಂಹಿತೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಳಿಕ ಮಾತನಾಡಿದ ಅವರು, ಹಿಂದೆ ಗೋ ಕಳವು ನಡೆದಾಗ ಪ್ರತಿಭಟನೆ, ಸಭೆಗಳು ನಡೆದಿರಬಹುದು. ಆದರೆ ರಾಜಾರಾಂ ಭಟ್ ಅವರು ಕೈಗೊಂಡಿರುವ ಆಮರಣಾಂತ ಉಪವಾಸದ ಹೋರಾಟ ಕೊನೆಯವರೆಗೂ ನಡೆಯಬೇಕಿದೆ. ಇದು ಓಟಿನ ರಾಜಕಾರಣವಲ್ಲ. ನ್ಯಾಯಯುತ, ಸತ್ಯಕ್ಕಾಗಿ ಹಾಗೂ ಜೀವನದ ಮೌಲ್ಯಕ್ಕಾಗಿ ನಡೆಯುತ್ತಿರುವ ಹೋರಾಟ. ಕೆಟ್ಟ ರಾಜಕಾರಣ ಇರುವವರೆಗೆ ಸ್ವಾಮಿಗಳಿಗೆ, ಹೆಣ್ಮಕ್ಕಳಿಗೆ, ಹಸುಗಳಿಗೆ ಗೌರವ ಸಿಗುವುದಿಲ್ಲ. ಹಿಂದೂ ಧರ್ಮ ವಿರೋಧಿ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಖಾದರ್ ತೆರಳಿದ ದೇವಾಲಯಕ್ಕೆ ಮತ್ತೆ ಬ್ರಹ್ಮಕಲಶ ಆಗಬೇಕು ಎಂಬ ಹೇಳಿಕೆಯನ್ನು ಭಟ್ ಸಮರ್ಥಿಸಿಕೊಡರು. ಮಾಧ್ಯಮ ತನ್ನನ್ನು ಪ್ರಶ್ನಿಸಿದಲ್ಲಿ ಅದು ನೂರಕ್ಕೆ ನೂರು ಸತ್ಯ, ದನ ತಿನ್ನುವವರನ್ನು ದೇವಾಲಯದೊಳಕ್ಕೆ ಕರೆಸಿ ಗೌರವಿಸುವುದು ತಪ್ಪು ಎಂದರು.