ಮಂಡ್ಯ: ಕುಮಾರಸ್ವಾಮಿ ವಿರುದ್ಧ ಶಾಸಕ ಚಲುವರಾಯಸ್ವಾಮಿ ವಾಗ್ದಾಳಿ
![ಮಂಡ್ಯ: ಕುಮಾರಸ್ವಾಮಿ ವಿರುದ್ಧ ಶಾಸಕ ಚಲುವರಾಯಸ್ವಾಮಿ ವಾಗ್ದಾಳಿ ಮಂಡ್ಯ: ಕುಮಾರಸ್ವಾಮಿ ವಿರುದ್ಧ ಶಾಸಕ ಚಲುವರಾಯಸ್ವಾಮಿ ವಾಗ್ದಾಳಿ](https://www.varthabharati.in/sites/default/files/images/articles/2018/04/6/6MDY-5.jpg)
ಮಂಡ್ಯ, ಎ.6: ಎಲ್ಲರ ಹಣೆಬರಹ ಕುಮಾರಸ್ವಾಮಿ ಬರೆಯುವುದಾಗಿದ್ದರೆ ನಾವ್ಯಾಕೆ ರಾಜಕಾರಣ ಮಾಡ್ತಾ ಇದ್ವಿ? ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಅದ್ಯಾಕೆ ಅವರು ಮೂರನೆ ಸ್ಥಾನಕ್ಕೆ ಹೋದರು? ಅವರು ಅವಾಗ ಏನು ತಿನ್ನುತ್ತಿದ್ದರು? ಎಂದು ಶಾಸಕ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ರೆಬೆಲ್ ಶಾಸಕರು ಗೆಲ್ಲೋವರೆಗೂ ತಾವು ಕಡುಬು ತಿನ್ನುತ್ತಾ ಕೂರುವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಒಕ್ಕಲಿಗರೆಲ್ಲರೂ ಜೆಡಿಎಸ್ಗೆ ಮತ ಹಾಕಿಬಿಟ್ಟಿದ್ದರೆ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಿರಲಿಲ್ಲ ಎಂದರು.
ನಾನೂ ಒಳಗೊಂಡಂತೆ ಎಲ್ಲರೂ ಠಿಕಾಣಿ ಹೂಡಿದರೂ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದೆ ಬಿಟ್ಟರು. ಈ ಬಾರಿಯೂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸೋಲುವುದಿಲ್ಲ. ಒಕ್ಕಲಿಗರು ಜೆಡಿಎಸ್ ನ ಸೊತ್ತಲ್ಲ ಎಂದು ಅವರು ಹೇಳಿದರು.
ಅಂಬರೀಶ್, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ನಾಯಕತ್ವದಲ್ಲಾದರೂ ಓಕೆ, ಅಂಬರೀಶ್ ನಾಯಕತ್ವದಲ್ಲಾದರೂ ಓಕೆ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸುತ್ತೇವೆ. ಅಂಬರಿಶ್ ಬಗ್ಗೆ ಯಾರಿಗೂ ಅಸಮಧಾನವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಒಗ್ಗಟ್ಟಿನಿಂದ ಕೆಲಸ ಮಾಡೋಣ: ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಚಲುವರಾಯಸ್ವಾಮಿ, ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪ್ರಬಲವಾಗಿವೆ. ಜೆಡಿಎಸ್ ಪ್ರಬಲವಾಗಿದ್ದರೂ ಕಾಂಗ್ರೆಸ್ ಸಮ ಹೋರಾಟ ಕೊಟ್ಟುಕೊಂಡೇ ಬಂದಿದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕನಿಷ್ಠ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಬಹುದು ಎಂದು ಅವರು ಹೇಳಿದರು.
ಹಿರಿಯರಾದ ಮಾದೇಗೌಡರು, ಆತ್ಮಾನಂದ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಮೇಲುಕೋಟೆ ಕ್ಷೇತ್ರದ ವಿಚಾರದಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗೋಣ ಎಂದೂ ಅವರು ತಿಳಿಸಿದರು.
ಎಲ್ಲಾ ವರ್ಗದ ಜನರಿಗೂ ಅನುಕೂಲವಾದ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಅವರ ಸರಕಾರ ಕೊಟ್ಟಿದೆ. ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಮುಂದಿದೆ. ಹಾಗಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಎಚ್.ಬಿ.ರಾಮು, ರಮೇಶ್ಬಾಬು ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಹಾಲಹಳ್ಳಿ ರಾಮಲಿಂಗಯ್ಯ, ಸಿ.ಎಂ.ದ್ಯಾವಪ್ಪ, ಎಂ.ಎಸ್.ಚಿದಂಬರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.