ಬೆಳ್ತಂಗಡಿ : ತಹಶೀಲ್ದಾರ್ -ವಕೀಲರುಗಳ ಮಧ್ಯೆ ವಾಗ್ವಾದ ಜಿಲ್ಲಾಧಿಕಾರಿ ಮಧ್ಯಸ್ಥಿಕೆ

ಬೆಳ್ತಂಗಡಿ, ಎ. 7: ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯದ ಕಾರ್ಯಕಲಾಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ವಕೀಲರುಗಳ ಮಧ್ಯೆ ಶನಿವಾರವೂ ವಾಗ್ವಾದ ನಡೆಯಿತು. ಕೊನೆಗೂ ಬೆಳ್ತಂಗಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಮಧ್ಯಸ್ಥಿಕೆಯಲ್ಲಿ ವಿವಾದ ಶಮನಗೊಂಡಿತು.
ಕಳೆದ ಬುಧವಾರ ಸಿಆರ್ಪಿಸಿ 107, 108 ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರುಗಳು ಎದುರುದಾರರ ಪರವಾಗಿ ವಾದಿಸಲು ತಹಶೀಲ್ದಾರ್ ನ್ಯಾಯಾಲಕ್ಕೆ ಆಗಮಿಸಿದ್ದರು. ಈ ಸಂದರ್ಭ ಸಿಬ್ಬಂದಿಗಳಿಗೆ ಚುನಾವಣೆ ಮುಗಿಯುವ ತನಕ ವಕೀಲರುಗಳಿಗೆ ಯಾವುದೇ ದಾಖಲೆ ನೀಡಬೇಡಿ, ಪ್ರವೇಶ ನೀಡಬೇಡಿ. ಎದುರುದಾರರೇ ಹಾಜರಾಗಬೇಕು ಎಂದು ಆದೇಶಿಸಿರುವುದನ್ನು ಖಂಡಿಸಿ ವಕೀಲರುಗಳು ತಹಶೀಲ್ದಾರ್ನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೆ ಪರಸ್ಪರ ತೀವ್ರ ಮಾತಿನ ಚಕಮಕಿ ನಡೆದಿತ್ತು.
ಶನಿವಾರ ಸಿಪಿಆರ್ಸಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಎದುರುದಾರರಿಗೆ ನೋಟಿಸ್ ನೀಡಲಾಗಿತ್ತು. ಸುಮಾರು 90ಕ್ಕೂ ಹೆಚ್ಚು ಮಂದಿ ಏಕ ಕಾಲದಲ್ಲಿ ಆಗಮಿಸಿದ್ದರು. ಇವರೊಂದಿಗೆ ಪ್ರಕರಣದ ಬಗ್ಗೆ ವಾದಿಸಲು ಬಂದಿದ್ದ ವಕೀಲರುಗಳಿಗೆ ಮತ್ತೆ ತಹಶೀಲ್ದಾರ್ ತಮ್ಮಣ್ಣ ಚೆನ್ನಪ್ಪ ಹಾದಿಮನಿ ಅವರು, ಸಿಆರ್ಪಿಸಿಯ ಶಾಂತಿಭಂಗ ಮುಂಜಾಗ್ರತಾ ಕ್ರಮಕ್ಕಾಗಿ ಎದುರುದಾರರಿಗೆ ನೀಡಲಾದ ನೋಟಿಸಿಗೆ ಉತ್ತರಿಸಲು ಬಾಂಡ್ ನೀಡಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಹೇಳಿದಾಗ ಇದರಿಂದ ವಕೀಲರು ಹಾಗೂ ತಹಶೀಲ್ದಾರರ ಮಧ್ಯೆ ಮತ್ತೆ ಚರ್ಚೆ ನಡೆಯಿತು.
ಈ ಸಂದರ್ಭ ಮಾಧ್ಯಮದವರು ತಹಶೀಲ್ದಾರ್ ಕೊಠಡಿಯೊಳಗೆ ಪ್ರವೇಶಿಸಿದಾಗ ಹೊರಗೆ ಹೋಗುವಂತೆ ತಹಶೀಲ್ದಾರ್ ಸೂಚಿಸಿದರು. ಇಲ್ಲಿ ಕೋರ್ಟ್ ನಡೆಯುತ್ತಿದೆ. ಪ್ರವೇಶ ಇಲ್ಲ ಎಂದಾಗ ವಕೀಲರುಗಳು ಕೋರ್ಟ್ ನಡೆಯುತ್ತಿಲ್ಲ. ಮಾತುಕತೆ ನಡೆಯುತ್ತಿದೆ ಎಂದರು. ಮಾಧ್ಯಮದವರನ್ನು ಪೊಲೀಸರ ಮೂಲಕ ಹೊರ ಕಳುಹಿಸಿದರು.
ಶನಿವಾರ ಬೆಳ್ತಂಗಡಿ ಮಿನಿ ವಿಧಾನ ಸೌಧಕ್ಕೆ ಚುನಾವಣಾ ವೀಕ್ಷಣೆಗಾಗಿ ಆಗಮಿಸಿದ್ದ ಜಿಲ್ಲಾಧಿಕಾರಿಯವರು ತಹಶೀಲ್ದಾರ್ ಮತ್ತು ವಕೀಲರ ನಡುವೆ ನಡೆಯುತ್ತಿದ್ದ ವಾಗ್ವಾದದ ಮಧ್ಯೆ ಪ್ರವೇಶಿಸಿ ವಕೀಲರುಗಳೊಂದಿಗೆ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿಯವರು ಮಾತುಕತೆ ನಡೆಸುವ ವೇಳೆಯೂ ಮಾಧ್ಯಮದವರಿಗೆ ಕೊಠಡಿಯೊಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಎ., ಉಪಾಧ್ಯಕ್ಷ ಶ್ರೀನಿವಾಸ ಗೌಡ, ಕೋಶಾಧಿಕಾರಿ ಗಣೇಶ ಗೌಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿ.ಕೆ ಧನಂಜಯ ರಾವ್, ಎಂ.ಬಿ. ಸಂಪಿಗೆತ್ತಾಯ, ವಕೀಲರುಗಳಾದ ಪ್ರತಾಪಸಿಂಹ ನಾಯಕ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಶಶಿಕಿರಣ್ ಜೈನ್, ಸಂತೋಷ್ ಕುಮಾರ್, ದಿನೇಶ್ ಶೆಟ್ಟಿ, ನವೀನ್ ಬಿ.ಕೆ., ಹರಿಪ್ರಸಾದ್, ಜಯರಾಮ ಮಣಿಯಾಣಿ, ದೀಪಿಕಾ ಗೌತಮ್ ಮೊದಲಾದವರು ಇದ್ದರು.
ಚುನಾವಣೆ ಸಂದರ್ಭ ಆರೋಪ ಮತ್ತು ಸಂಶಯ ಇದ್ದರವನ್ನು ಕರೆಸಿ ಸಮಾಜದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳುವ ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಂದ ಮುಚ್ಚಳಿಕೆ ಮತ್ತು 50 ಸಾವಿರದ ಬಾಂಡ್ ತೆಗೆದುಕೊಳ್ಳುತ್ತೇವೆ. ಮುಚ್ಚಳಿಕೆ ತೆಗೆದುಕೊಂಡವರು ಕಾನೂನು ಉಲ್ಲಂಘಿಸಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಾನೂನು ರೀತ್ಯಾ ವ್ಯವಹರಿಸುವುದು ನಮ್ಮ ಕರ್ತವ್ಯ. ಅಮಾಯಕರಿಗೆ ತೊಂದರೆಯಾಗದಂತೆ ಅವರನ್ನು ರಕ್ಷಿಸುವ ಕೆಲಸ ನಮ್ಮದು. ಸಮಾಜದ ಒಳ್ಳೆಯದ್ದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಆಡಳಿತಕ್ಕೆ ಸಹಕರಿಸಬೇಕು.
- ಸಸಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ.
ಮಿನಿ ವಿಧಾನ ಸೌಧದಲ್ಲಿ ಬಂದವರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳಿಲ್ಲ. ಕಟ್ಟಡದಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಇನ್ನು ಶಾಲೆಗಳು ಆರಂಭವಾದಗ ವಿವಿಧ ರೀತಿಯ ಪ್ರಮಾಣ ಪತ್ರಗಳಿಗೆ ನೂರಾರು ಜನರು ಬರುತ್ತಾರೆ. ಇಲ್ಲಿ ಕಂದಾಯಕ್ಕೆ ಸಂಬಂಧಪಟ್ಟ ಕೆಲಸಗಳೂ ಆಗುತ್ತಿಲ್ಲ ಎಂದು ಮಾಧ್ಯಮದವರು ಜಿಲ್ಲಾಧಿಕಾರಿಯವರ ಗಮನ ಸೆಳೆದರು. ಇದಕ್ಕುತ್ತರಿಸಿದ ಡಿಸಿಯವರು, ಹೊಸ ಕಟ್ಟಡದಲ್ಲಿ ಪಿಠೋಪಕರಣಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಸಮಯಕ್ಕೆ ಸರಿಯಾಗಿ ಬಂದಿಲ್ಲ. ವಾರದೊಳಗೆ ಎಲ್ಲವೂ ಸರಿಯಾಗಲಿದೆ. ಕಂದಾಯಕ್ಕೆ ಸಂಬಂಧಪಟ್ಟ ಯಾವುದೇ ಕೆಲಸಗಳಿಗೆ ಸಾರ್ವಜನಿಕರಿಗೆ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದರು.