ಉಡುಪಿ: ಮತದಾನ ಜಾಗೃತಿಗಾಗಿ ಸಿ.ಡಿ., ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ, ಎ.7: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಮತದಾರರನ್ನು ಜಾಗೃತಗೊಳಿಸಲು, ಜಿಲ್ಲಾ ಸ್ಪೀಪ್ ಸಮಿತಿ ಹಾಗೂ ಜಿಲ್ಲಾಡಳಿತ ಸಿದ್ಧಪಡಿಸಿದ ಚುನಾವಣೆಗೆ ಸಂಬಂಧಿಸಿದ ಸಿ.ಡಿ., ಮತದಾನದ ಮಮತೆಯ ಕರೆಯೋಲೆಗಳನ್ನು ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಒ ಶಿವಾನಂದ ಕಾಪಶಿ ಹಾಗೂ ಎಡಿಸಿ ಅನುರಾಧ ಬಿಡುಗಡೆಗೊಳಿಸಿದರು.
ಸಿ.ಡಿ.: ಯಕ್ಷಗಾನ ಹಾಡುಗಳ ಮೂಲಕ ಮತದಾನ ಜಾಗೃತಿ, ಕನ್ನಡ ಮತ್ತು ತುಳು ಹಾಡುಗಳ ಮೂಲಕ ಮತದಾನದ ಜಾಗೃತಿ ಹಾಗೂ ಜಿಲ್ಲೆಯ ಜನಪ್ರಿಯ ವ್ಯಕ್ತಿಗಳ ಮೂಲಕ (ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ಹಾಗೂ ಕರಾಟೆ ತರಬೇತುದಾರ ಕಾರ್ತಿಕ್ ಕಟೀಲ್) ಮತದಾನದ ಜಾಗೃತಿ ಸಂದೇಶ ಹಾಗೂ ಚುನಾವಣಾ ಆಯೋಗದ ವಿಡಿಯೋ ತುಣುಕುಗಳು ಇಂದು ಬಿಡುಗಡೆಗೊಂಡ ಸಿ.ಡಿ.ಯಲ್ಲಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಈ ಸಿ.ಡಿ.ಗಳನ್ನು ಪ್ರತಿಯೊಂದು ಗ್ರಾಪಂಗಳಿಗೆ ತಲುಪಿಸಿ ಅಲ್ಲಿ ಅವುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸಿಡಿ ಪ್ರಸಾರ, ಪ್ರಚಾರಕ್ಕೆ ವ್ಯವಸ್ಥೆ, ಗ್ರಾಮದ ಎಸ್ಎಲ್ಆರ್ಎಂ ಕೇಂದ್ರಗಳಲ್ಲಿ, ದಿನಾ ಬೆಳಗ್ಗೆ ಕಸ ಸಾಗಿಸುವ ವಾಹನಗಳಲ್ಲಿ ಅವುಗಳನ್ನು ಪ್ಲೇ ಮಾಡುವ ಮೂಲಕ ಜನರನ್ನು ತಲುಪಲು ಪ್ರಯತ್ನಿಸಲಾಗುವುದು ಎಂದರು.
ಅಲ್ಲದೇ ಸಾಮಾಜಿಕ ಮಾದ್ಯಮಗಳಲ್ಲೂ ಈ ಸಿ.ಡಿ. ಪ್ರದರ್ಶನ ಹಾಗೂ ಪ್ರಸಾರಕ್ಕೆ ಬೇಕಾದ ವ್ಯವಸ್ಥೆ ಮಾಡಿ, ಸಾಧ್ಯವಿದ್ದಷ್ಟು ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸಲಾಗುವುದು ಎಂದರು.
ಕರೆಯೋಲೆ: ಮತದಾನದ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸಿ ಮತದಾರರನ್ನು ಮತದಾನಕ್ಕೆ ಆಹ್ವಾನಿಸುವ ‘ಮತದಾನದ ಮಮತೆಯ ಕರೆಯೋಲೆ’ಯನ್ನು ಸಹ ಬಿಡುಗಡೆಗೊಳಿಸಲಾಯಿತು. 2013ರ ವಿಧಾನಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾದ ಸುಮಾರು 70 ಮತಗಟ್ಟೆಗಳನ್ನು ಆಯ್ಕೆ ಮಾಡಿ ಅಲ್ಲಿರುವ ಸುಮಾರು ಏಳು ಸಾವಿರ ಕುಟುಂಬಗಳಿಗೆ ಈ ಆಮಂತ್ರಣ ಪತ್ರಿಕೆಯನ್ನು ತಲುಪಿಸಿ ಆ ಮೂಲಕ ಅವರನ್ನು ಮತದಾನಕ್ಕೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ.
ಗ್ರಾಪಂಗಳ ಮೂಲಕ, ಪತ್ರಿಕಾ ಏಜೆಂಟ್ರ ಮೂಲಕ ಈ ಆಮಂತ್ರಣ ಪತ್ರಿಕೆ ಕರಪತ್ರಗಳನ್ನು ಮತದಾನದ ಸರಾಸರಿ ಕಡಿಮೆ ಇರುವ ಪ್ರದೇಶಗಳ ಪ್ರತಿಯೊಂದು ಮತದಾರರ ಮನೆಗಳಿಗೆ ತಲುಪಿಸಲಾಗುತ್ತದೆ. ಆಮಂತ್ರಣ ಪತ್ರ ದೊಳಗೆ ಮತದಾನ ಪ್ರಕ್ರಿಯೆ, ವಿವರ, ನೋಂದಣಿ ಕುರಿತು ಜಾಗೃತಿ ಸಂದೇಶಗಳನ್ನು ಕರಪತ್ರದ ಮೂಲಕ ನೀಡಲಾಗಿದೆ.
ಕರೆಯೋಲೆಯ ಮುಖಪುಟದಲ್ಲಿ ದಿನಾಂಕ: ಮೇ 12, 2018, ಸ್ಥಳ: ಮತಗಟ್ಟೆ, ಶುಭ ಮುಹೂರ್ತ: ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಎಂದು ನಮೂದಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡುವಂತೆ, ಮತದಾರರ ಸುಖಾಗಮನವನ್ನು ಬಯಸುವ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತದ ವತಿಯಿಂದ ವಿನಂತಿಸಲಾಗಿದೆ.
ಕರಪತ್ರದಲ್ಲಿ ಮತದಾನಕ್ಕೆ ಸಂಬಂಧಿಸಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.ಮತದಾರರ ಪ್ರತಿಜ್ಞಾ ವಿಧಿಯನ್ನು ಸಹ ಮುದ್ರಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ವಿಶೇಷ ಚೇತನರಿಂಗ ಮತದಾನ ಕೇಂದ್ರದಲ್ಲಿ ಸಿಗುವ ಸೌಲಭ್ಯ, ಮತಕೇಂದ್ರಕ್ಕೆ ಬರಲು ಇರುವ ವ್ಯವಸ್ಥೆಯ ಕುರಿತು ವಿವರಿಸಲಾಗಿದೆ.
2 ತಂತ್ರಾಂಶಗಳ ಅನಾವರಣ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಗಳಿಗಾಗಿ ಎರಡು ಹೊಸ ತಂತ್ರಾಂಶಗಳನ್ನು ವಿನ್ಯಾಸ ಗೊಳಿಸಲಾಗಿದೆ. ಸಮಾಧಾನ ಹಾಗೂ ಸುವಿಧಾ ಎಂಬ ಹೆಸರಿನ ಈ ತಂತ್ರಾಂಶಗಳನ್ನು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಲು, ರಾಜಕೀಯ ಪಕ್ಷಗಳವರು ತಮಗೆ ಅನುಮತಿಗಳನ್ನು ಪಡೆದುಕೊಳ್ಳಲು ಬಳಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಮಾಧಾನ ಆ್ಯಪ್: (url:http://164.100.128.76/samadhana live) ಸಮಾಧಾನ ಎಂಬ ಆ್ಯಪ್ ಬಳಸಿ ಸಾರ್ವಜನಿಕರು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ದೂರು ದಾಖಲಿಸಿ ಅದರ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆಯಬಹುದು. ಈ ಆ್ಯಪ್ ಬಳಸಿ ರಾಜಕೀಯ ಪಕ್ಷದವರು, ಚುನಾವಣಾ ಅಭ್ಯರ್ಥಿಗಳು ಮತ್ತು ನಾಗರಿಕರು ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗುವುದು.
ಸುವಿಧಾ ಆ್ಯಪ್: (url:http://164.100.128.75/suvidha kt) ಸುವಿಧಾ ಎಂಬ ಆ್ಯಪ್ ಬಳಸಿ ಚುನಾವಣೆ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷದವರು ಸಭೆಗಳಿಗೆ, ರ್ಯಾಲಿಗಳಿಗೆ, ವಾಹನಗಳಿಗೆ, ತಾತ್ಕಾಲಿಕ ಚುನಾವಣಾ ಕಚೇರಿಗಳಿಗೆ, ಧ್ವನಿವರ್ಧಕಗಳಿಗೆ ಹಾಗೂ ಹೆಲಿಕಾಫ್ಟರ್ ಮತ್ತು ಹೆಲಿಪ್ಯಾಡ್ಗಳಿಗೆ ಅನುಮತಿಗಳನ್ನು ನೊಂದಾಯಿಸಿಕೊಳ್ಳಬಹುದು.
ಕಾರ್ಯಕ್ರಮ ನಡೆಯುವ ಎರಡು ದಿನ ಮುಂಚಿತವಾಗಿ ಮಾಹಿತಿಯನ್ನು ಈ ಆ್ಯಪ್ನಲ್ಲಿ ನೊಂದಾಯಿಸಿ ಅನುಮತಿ ಪಡೆಯಬಹುದು. ಅನುಮತಿ ಪಡೆಯಲು ಬೇಕಾಗಿರುವ ದಾಖಲೆಗಳನ್ನು ಆ್ಯಪ್ನಲ್ಲಿ ನೀಡಲಾಗಿದೆ. ದಾಖಲೆಗಳನ್ನು ಭರ್ತಿ ಮಾಡಿ ಅಪ್ಲೋಡ್ ಮಾಡಲು ಅವಕಾಶವಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ತಿಳಿಯದವರು ಈಗಿನಂತೆ ಚುನಾವಣಾಧಿಕಾರಿಯವರ ಕಚೇರಿಗೆ ಬಂದು ಅಲ್ಲಿ ಅರ್ಜಿಗಳನ್ನು, ದಾಖಲೆಗಳನ್ನು ನೀಡಿ ಅನುಮತಿಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಈವರೆಗೂ ಮತಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳದವರು ನಾಳೆ ಜಿಲ್ಲೆಯ ಎಲ್ಲಾ 1073 ಮತಗಟ್ಟೆಗಳಲ್ಲಿ ನಡೆಯುವ ಮಿಂಚಿನ ನೊಂದಣಿ ವಿಶೇಷ ಅಭಿಯಾನದಲ್ಲಿ ಆಧಾರ್ ಸಹಿತ ಯಾವುದೇ ದಾಖಲೆ, ಎರಡು ಭಾವಚಿತ್ರ ಹಾಗೂ ವಿಳಾಸ ಪುರಾವೆಯ ಗುರುತು ಚೀಟಿಯೊಂದಿಗೆ ತೆರಳಿ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಪ್ರಿಯಾಂಕ ನುಡಿದರು. ಈ ಬಾರಿ ಚುನಾವಣೆಗೆ ಹೆಸರು ನೊಂದಾಯಿಸಿಕೊಳ್ಳಲು ಎ.14 ಕೊನೆಯ ದಿನವಾಗಿದೆ ಎಂದೂ ಅವರು ಹೇಳಿದರು.
3 ಕಡೆ ಬಹಿಷ್ಕಾರದ ಕೂಗು: ಜಿಲ್ಲೆಯಲ್ಲಿ ಇದುವರೆಗೆ ಮೂರು ಕಡೆಗಳಲ್ಲಿ ವಿವಿಧ ಕಾರಣಗಳಿಗಾಗಿ ಮತದಾರರ ಒಂದು ಗುಂಪು ಮತದಾನ ಬಹಿಷ್ಕಾರದ ಕರೆಯನ್ನು ನೀಡಿರುವ ಮಾಹಿತಿ ಬಂದಿದೆ ಎಂದು ಸಿಇಒ ಶಿವಾನಂದ ಕಾಪಶಿ ತಿಳಿಸಿದರು. ಶೀರೂರು, ಉಚ್ಚಿಲ ಬಡಾ ಹಾಗೂ ಹೆಂಗವಳ್ಳಿಗಳಲ್ಲಿ ಒಂದು ವರ್ಗದ ಜನ ಮತದಾನ ಬಹಿಷ್ಕಾರದ ಬೆದರಿಕೆ ಹಾಕಿರುವ ಸುದ್ದಿ ಇದ್ದು, ಅಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆಯಲಾಗುತ್ತಿದೆ ಎಂದರು.
ಇನ್ನು ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶಗಳ ಸಮಸ್ಯೆಗಳ ಕುರಿತು, ಅಲ್ಲಿನ ಜನರ ಬೇಡಿಕೆಗಳ ಕುರಿತು ಆದ್ಯತೆ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾಪಶಿ ಹೇಳಿದರು.