ಅಸ್ಟ್ರಾಸಿಟಿ ಕಾಯ್ದೆ ವಿರುದ್ದ ತೀರ್ಪು : ಎ.13ಕ್ಕೆ ಪರಿಶಿಷ್ಟ ವರ್ಗದ ಪ್ರತಿಭಟನೆ
ತುಮಕೂರು,ಎ.8:ಸುಪ್ರಿಂಕೋರ್ಟ್ ಅಸ್ಟ್ರಾಸಿಟಿ ಕೇಸು ದುರುಪಯೋಗದ ಹೆಸರಿನಲ್ಲಿ ಕಾಯ್ದೆಯಲ್ಲಿದ್ದ ಕೆಲ ಅಂಶಗಳನ್ನು ಕೈಬಿಡುವಂತೆ ತೀರ್ಪು ನೀಡಿರುವುದನ್ನು ವಿರೋಧಿಸಿ ಪರಿಶಿಷವರ್ಗಗಳ ಒಕ್ಕೂಟ ಎ.09 ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯಲ್ಲಿ ಎ.13ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ತು.ಬಿ.ಮಲ್ಲೇಶ್ ತಿಳಿಸಿದ್ದಾರೆ.
ಭಾನುವಾರ ನಗರದ ವಾಲ್ಮೀಕಿ ಹಾಸ್ಟಲ್ನಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕಾಯ್ದೆಯ ದುರುಪಯೋಗದ ಹೆಸರಿನಲ್ಲಿ 1979ರಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವುದು ಸರಿಯಲ್ಲ. ದೌರ್ಜನ್ಯಕ್ಕೆ ಒಳಗಾಗುತ್ತಿರುವವರಿಗೆ ಮಾತ್ರ, ದೌರ್ಜನ್ಯ ಹೇಗಿರುತ್ತದೆ ಎಂಬುದರ ಅರಿವಾಗುತ್ತದೆ. ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಮುಂದಿಟ್ಟುಕೊಂಡು 35-40 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಸಮುದಾಯದ ಅಸ್ತಿತ್ವವನ್ನೇ ಪ್ರಶ್ನಿಸುವುದು ಸರಿಯಲ್ಲ. ಸುಪ್ರಿಂಕೋರ್ಟು ಕೂಡಲೇ ತೀರ್ಪನ್ನು ಮರು ಪರಿಶೀಲಿಸಬೇಕು ಹಾಗೂ ಎಸ್.ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ1979ನ್ನು ಮತ್ತಷ್ಟು ಬಲಪಡಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಎಪ್ರಿಲ್ 09ರಂದು ನಡೆಯುವ ಪ್ರತಿಭಟನೆಯನ್ನು ಎಪ್ರಿಲ್ 13ರ ಶುಕ್ರವಾರ ನಡೆಸಲು ಉದ್ದೇಶಿಸಿದ್ದು, ವಾಲ್ಮೀಕಿ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹೋರಾಟವನ್ನು ಯಶಸ್ವಿಗೊಳಿಸುವಂತೆ ಅವರ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಮುಖಂಡರಾದ ಮರಳೂರು ನಾಗರಾಜು,ಹಾಗಲವಾಡಿ ಶಂಕರ್,ಹೆಚ್.ಜಿ.ರಂಗನಾಥ್,ಶ್ರೀಧರ್ ನಾಯಕನ ಕೊಪ್ಪಲ್,ನರಸಿಂಹಮೂರ್ತಿ ಹೆಬ್ಬಾಕ,ಪ್ರಕಾಶ್ ವಕ್ಕೋಡಿ,ಧನುಷ್,ಚಂದ್ರು,ಶಿವರಾಜು ಆಟೋ ಮತ್ತಿತರರು ಉಪಸ್ಥಿತರಿದ್ದರು.