ಚಿಕ್ಕಮಗಳೂರು : ಅಸ್ವಸ್ಥ ಕಡವೆಗೆ ಚಿಕಿತ್ಸೆ ನೀಡಿ ರಕ್ಷಿಸಿದ ಅರಣ್ಯ ಸಿಬ್ಬಂದಿ
![ಚಿಕ್ಕಮಗಳೂರು : ಅಸ್ವಸ್ಥ ಕಡವೆಗೆ ಚಿಕಿತ್ಸೆ ನೀಡಿ ರಕ್ಷಿಸಿದ ಅರಣ್ಯ ಸಿಬ್ಬಂದಿ ಚಿಕ್ಕಮಗಳೂರು : ಅಸ್ವಸ್ಥ ಕಡವೆಗೆ ಚಿಕಿತ್ಸೆ ನೀಡಿ ರಕ್ಷಿಸಿದ ಅರಣ್ಯ ಸಿಬ್ಬಂದಿ](https://www.varthabharati.in/sites/default/files/images/articles/2018/04/8/620a9416-e9b5-4b7c-b6ee-50eea07e2186.jpg)
ಚಿಕ್ಕಮಗಳೂರು, ಮಾ.8: ಭದ್ರಾ ಅಭಯಾರಣ್ಯದಿಂದ ನೀರು ಅರಸಿ ಬಂದು ಅಸ್ವಸ್ಥಗೊಂಡು ಗ್ರಾಮವೊಂದರ ರೈತನ ತೋಟದಲ್ಲಿ ನಿತ್ರಾಣಗೊಂಡಿದ್ದ ಕಡವೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದಿಂದ ನೀರು ಅರಸಿಕೊಂಡು ತರೀಕೆರೆ ತಾಲೂಕಿನ ನಂದಿಬಟ್ಲು ಗ್ರಾಮಕ್ಕೆ ರವಿವಾರ ಬಂದಿದ್ದ ಕಡವೆ ಎಲ್ಲೂ ನೀರು ಸಿಗದೇ ಗ್ರಾಮದ ಸಚಿನ್ ಎಂಬವರ ತೋಟದಲ್ಲಿ ನಿತ್ರಾಣಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತ ಬಿದ್ದಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ರೈತ ಸಚಿನ್ ಕೂಡಲೇ ತಣಿಗೆಬೈಲು ಅರಣ್ಯಾಧಿಕಾರಿ ಉಲ್ಲಾಸ್ಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ ಉಲ್ಲಾಸ್ ಕಡವೆಗೆ ನೀರು ಕುಡಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿದ ಕಡವೆ ಕೆಲ ಹೊತ್ತಿನ ಬಳಿಕ ಎದ್ದು ನಿಂತು ಓಡಾಡಿತೆಂದು ತಿಳಿದು ಬಂದಿದೆ.
ಬಳಿಕ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ತಮ್ಮ ವಾಹನದಲ್ಲಿ ಕಡವೆಯನ್ನು ಅರಣ್ಯಕ್ಕೆ ಬಿಟ್ಟು ರಕ್ಷಣೆ ಮಾಡಿದ್ದಾರೆ.