ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿ: ಮೇಯರ್ ಭಾಸ್ಕರ್ ಮೊಯ್ಲಿ
ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ವತಿಯಿಂದ ‘ಮಂಗಳೂರು ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2018’

ಮಂಗಳೂರು, ಎ. 8: ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡೆಯನ್ನು ಪೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೆ. ಭಾಸ್ಕರ್ ಮೊಯ್ಲಿ ಹೇಳಿದ್ದಾರೆ.
ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ನಗರದ ಲಾಲ್ಬಾಗ್ನ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಿದ ‘ಮಂಗಳೂರು ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2018’ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದ್ದು, ಇದು ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಾಗಿದೆ. ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿಸುವ ಮೂಲಕ ರಾಜ್ಯ, ದೇಶ ಹಾಗೂ ವಿದೇಶ ಮಟ್ಟದಲ್ಲೂ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಉಪಮೇಯರ್ ಕೆ. ಮುಹಮ್ಮದ್ ಮಾತನಾಡಿ, ಕ್ರೀಡೆಯು ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕ್ರೀಡೆಯನ್ನು ಪೋತ್ಸಾಹಿಸುವಂತಾಗಬೇಕು ಎಂದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ನ ಅಧ್ಯಕ್ಷ ಡಿ.ಎಂ.ಅಸ್ಲಂ, ದ.ಕ. ಕ್ರಿಕೆಟ್ ಅಸೋಸಿಯೇಶನ್ನ ಉಪಾಧ್ಯಕ್ಷ ಡಾ.ರೋಶನ್ ಶೆಟ್ಟಿ ಎ., ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ನ ಅಧ್ಯಕ್ಷ ಮುಹಮ್ಮದ್ ಹುಸೈನ್, ಶಾಲಿಮಾರ್ ಗ್ರೂಪ್ಸ್ನ ಬಶೀರ್ ಅಹ್ಮದ್, ಮಂಗಳ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧ್ಯಕ್ಷ ಎ.ಎಸ್. ವೆಂಕಟೇಶ್ ಉಪಸ್ಥಿತರಿದ್ದರು.
ಬೆಳಗ್ಗೆ ಯಿಂದ ನಡೆದ ಬ್ಯಾಡ್ಮಿಂಟನ್ ಕ್ರೀಡೆಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ರಾತ್ರಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ನಗರ ಪಾಲಿಕೆ ಆಯುಕ್ತರಾದ ನಝೀರ್, ಪಿಸಿ ಗ್ರೂಪ್ ನ ಎಂಡಿ ಪಿಸಿ ಹಾಸಿರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ಜಿಲ್ಲಾ ವೈಸ್ ಗವರ್ನರ್ ರೋನಾಲ್ಡ್ ಗೋಮ್ಸ್, ಬಾವಾ ಬಿಲ್ಡರ್ಸ್ ನ ಅಬ್ದುಲ್ ರವೂಫ್ ಪುತ್ತಿಗೆ, ಬ್ಯಾರಿ ಸ್ಪೋರ್ಟ್ಸ್ ಪ್ರಮೋಟರ್ಸ್ ಅಧ್ಯಕ್ಷ ಮುಹಮ್ಮದ್ ನೂರ್ ಉಪಸ್ಥಿತರಿದ್ದರು. ಸುಹಾನ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.