ಹಣಕ್ಕೆ ಬೇಡಿಕೆಯಿಟ್ಟ ಖಾಸಗಿ ವಾಹಿನಿ ವಿರುದ್ಧ ದೂರು : ಶಾಸಕ ಸಿ.ಬಿ.ಸುರೇಶ್ಬಾಬು
ತುಮಕೂರು,ಎ.08:ನನ್ನ ಪರವಾಗಿ ವರದಿ ಮಾಡಲು ಬೇಡಿಕೆಯಿಟ್ಟ ಬಿಟಿವಿ ಸುದ್ದಿವಾಹಿನಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದರ ಜೊತೆಗೆ ಸಂಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮೆ ದಾಖಲಿಸುವುದಾಗಿ ಚಿ.ನಾ.ಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದರ ವರದಿಗಾರ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ನಮ್ಮ ಕುಟುಂಬ ಚಿ.ನಾ.ಹಳ್ಳಿಯಲ್ಲಿ 1972ರಿಂದಲೂ ರಾಜಕಾರಣದಲ್ಲಿ ಸಕ್ರಿಯವಾಗಿದೆ. ನಮ್ಮ ತಂದೆ ನಿಧನರಾದ ನಂತರ ನಾನು 5 ಚುಣಾವಣೆಗಳಲ್ಲಿ ಸ್ವರ್ಧೆ ಮಾಡಿ 3 ಬಾರಿ ಗೆಲುವು ಸಾಧಿಸಿದ್ದೇನೆ. ನನ್ನ 47ನೇ ವಯಸ್ಸಿಗೆ ರಾಜಕಾರಣದಲ್ಲಿ ಈ ಹಂತಕ್ಕೆ ಬೆಳೆದು ಬಂದಿರುವ ನನ್ನಂತ ವ್ಯಕ್ತಿಯ ಬಗ್ಗೆ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ವಿರುದ್ಧವಾಗಿ ಸುದ್ಧಿ ಪ್ರಕಟಿಸುವುದರ ಜೊತೆಗೆ ಐಷಾರಾಮಿ ಶಾಸಕ, ಬೆಂಗಳೂರಿನಲ್ಲಿ ವಾಸವಿದ್ದಾರೆ, ಜನರ ಸಮಸ್ಯೆಗೆ ಸ್ವಂಧಿಸುವುದಿಲ್ಲ ಎಂದು ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ಮಾಧ್ಯಮಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡಿ ಬೇರೆ ಬೇರೆ ಕ್ಷೇತ್ರಗಳ ಅನೇಕ ಅಭ್ಯರ್ಥಿಗಳು, ಶಾಸಕರು ಹಣ ನೀಡಿದ್ದು, ಅವರ ಪರವಾಗಿ ಸುದ್ದಿ ಪ್ರಕಟಿಸಿದ್ದೇವೆ, ಚುಣಾವಣೆಯ ಈ ಸಂದರ್ಭದಲ್ಲಿ ಕರುಕ್ಷೇತ್ರ ಎನ್ನುವ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದು, ನಿಮ್ಮ ಪರವಾಗಿ ಈ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲು 3 ಲಕ್ಷ ನೀಡುವಂತೆ ಬೇಡಿಕೆ ಇಟ್ಟರು, ನಾವು ಯಾವುದೇ ರೀತಿಯ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸತ್ಯಕ್ಕೆ ದೂರವಾದ ಹಾಗೂ ನನ್ನ ಘನತೆಗೆ ಧಕ್ಕೆಯಾಗುವಂತಹ ಅಂಶಗಳನ್ನು ಪ್ರಸಾರ ಮಾಡಿದ್ದು, ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.