ಉಡುಪಿ: ಪಾಲ್ಗೊಳ್ಳುವಿಕೆ ಖಾತ್ರಿಗೆ, ವಿಶೇಷಚೇತನರಿಗೆ ವಿಶೇಷ ತರಬೇತಿ

ಉಡುಪಿ, ಎ.8: ಚುನಾವಣಾ ಆಯೋಗದ ಧ್ಯೇಯವಾಕ್ಯವಾದ ‘ಸರ್ವರ ಪಾಲ್ಗೊಳ್ಳುವಿಕೆ, ಸುಗಮ ಹಾಗೂ ನೈತಿಕ ಮತದಾನ’ವನ್ನು ಖಾತರಿ ಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಸ್ವೀಪ್ ಸಮಿತಿ ಇಂದು ಅಜ್ಜರಕಾಡಿನ ರೆಡ್ಕ್ರಾಸ್ ಭವನದಲ್ಲಿ ವಿಶೇ ಕಾರ್ಯಕ್ರಮವನ್ನು ಆಯೋಜಿಸಿತ್ತು.
ದೃಷ್ಟಿ ಹಾಗೂ ಶ್ರವಣ ದೋಷವಿರುವವರಿಗೆ ಮಾಹಿತಿ ನೀಡುವ ಕಾರ್ಯ ಕ್ರಮ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆಯಲ್ಲಿ ನಡೆಯಿತು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ಹಕ್ಕನ್ನು ಚಲಾಯಿಸಲು ಪೂರಕವಾಗಿ ವಿಕಲಚೇತನರ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಿಕೊಳ್ಳಲು ಈಗಾಗಲೇ ಸ್ವೀಪ್ ಸಮಿತಿ ಅಧ್ಯಕ್ಷರು ಸಂಬಂಧ ಪಟ್ಟವರೊಂದಿಗೆ ವಿಶೇಷ ಸಭೆಯನ್ನೂ ಆಯೋಜಿಸಿದ್ದರು.
ವಿಶೇಷಚೇತನರ ಪಟ್ಟಿಯನ್ನು ಪ್ರತ್ಯೇಕವಾಗಿ ತಯಾರಿಸಿ, ಅವರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲು ಸಹಾಯವಾಣಿ ಸಂಖ್ಯೆ: 0820-2574811ನ್ನು ನೀಡಿ ಅರಿಂದ ಬೇಡಿಕೆಯನ್ನೂ ಆಲಿಸಲಾಗಿತ್ತು.
ಚುನಾವಣಾ ಪ್ರತಿಜ್ಞಾ ವಿಧಿಯನ್ನು ಸಂಜ್ಞೆಗಳಲ್ಲಿ ಶ್ರವಣದೋಷವಿರುವವರಿಗೆ ಬೋಧಿಸಲಾಯಿತು. ಅವರಿಗೆ ಇವಿಎಂ ಹಾಗೂ ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅಂಧ ಮತದಾರರಿಗೆ ಬ್ರೈಲ್ ಲಿಪಿಯಲ್ಲಿ ತಯಾರಿಸಿದ ಪ್ರತಿಜ್ಞಾವಿಧಿುನ್ನು ದೀಕ್ಷಿತ್ ಅವರು ಬೋಧಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದ್ದು ಇಂದೂ ಮಿಂಚಿನ ಮತದಾರರ ನೋಂದಣಿ ಜೊತೆಗೆ ಎ.14 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ಶಿವಾನಂದ ಕಾಪಶಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್, ಕಾಡೂರು ಪಿಡಿಒ ಮಹೇಶ್, ಪ್ರಮೀಳ ಯರ್ಲಂಪಾಡಿ ಪಾಲ್ಗೊಂಡರು.
ಮಾಸ್ಟರ್ ತರಬೇತುದಾರ ಅಶೋಕ್ ಕಾಮತ್ ಮತದಾನದ ಮಹತ್ವವನ್ನು ವಿವರಿಸಿದರು. ರೆಡ್ಕ್ರಾಸ್ನ ರಾಜೀವ್ ಶೆಟ್ಟಿ ಬಸ್ರೂರು ಪಾಲ್ಗೊಂಡಿದ್ದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಸ್ವಾಗತಿಸಿದರು.