ವಿವಿ ಪ್ಯಾಟ್ನಿಂದ ಮತದಾನ ಇನ್ನಷ್ಟು ವಿಶ್ವಾಸಾರ್ಹ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಎ.9: ಈ ಬಾರಿಯ ಚುನಾವಣೆಯಲ್ಲಿ ಮತಯಂತ್ರದ ಜೊತೆ ಯಲ್ಲಿ ಬಳಸಲಾಗುವ ವಿವಿ ಪ್ಯಾಟ್ ಯಂತ್ರ ನಮ್ಮ ಮತದಾನದ ಹಕ್ಕಿನ ಖಾತರಿಗೆ ಪೂರಕವಾಗಿದ್ದು, ವಿವಿಪ್ಯಾಟ್ ವಿರುದ್ದ ಸುಳ್ಳು ಆಪಾದನೆ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಸೋಮವಾರ ಉಡುಪಿ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಮತದಾರರು ತಾವು ಚಲಾಯಿಸಿದ ಮತ, ತಮ್ಮ ಆಯ್ಕೆಯ ಅ್ಯರ್ಥಿಗೆ ಚಲಾವಣೆ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವಿ ಪ್ಯಾಟ್ ಯಂತ್ರ ವನ್ನು ಅಳವಡಿಲಾಗಿದೆ ಎಂದವರು ತಿಳಿಸಿದರು.
ವಕೀಲರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ಜಿಲ್ಲೆಗೆ ಚುನಾವಣೆ ಪ್ರಯುಕ್ತ ಬಂದಿರುವ ಎಲ್ಲಾ 1400 ಮತಯಂತ್ರಗಳನ್ನು ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಗಿದೆ. ಮತಯಂತ್ರ ಗಳಲ್ಲಿ ಯಾವುದೇ ದೋಷ ಇಲ್ಲ. ಮತದಾನ ದಿನದಂದು, ಮತದಾನ ಅರಂಭಕ್ಕೆ ಮುನ್ನ ಸಹ ಮತಗಟ್ಟೆಯಲ್ಲಿರುವ ರಾಜಕೀಯ ಪಕ್ಷಗಳ ಏಜೆಂಟ್ಗಳ ಸಮ್ಮುಖದಲ್ಲಿ ಅಣಕು ಮತದಾನ ಮಾಡಿ ಪರಿಶೀಲನೆ ಮಾಡಲಾಗುವುದು. ಯಾವುದೇ ಮತಗಟ್ಟೆಯ ಮತಯಂತ್ರದಲ್ಲಿ ದೋಷ ಕಂಡುಬಂದರೆ ಕೂಡಲೇ ಬದಲಿ ಮತಯಂತ್ರ ವ್ಯವಸ್ಥೆ ಮಾಡಲಾಗುವುದು. ಮತಯಂತ್ರವನ್ನು ಇಂಟರ್ ನೆಟ್ ಸೇರಿದಂತೆ ಯಾವುದೇ ವಿಧದಲ್ಲಿ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇವು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮತಯಂತ್ರಗಳು ಶೇ.ನೂರು ಸರಿ ಇವೆ ಎಂದು ಪರೀಕ್ಷೆ ಮಾಡಿ ಖಾತ್ರಿಯಾದ ಬಳಿಕವಷ್ಟೇ ಅಳವಡಿಸಲಾಗುತ್ತದೆ. ಇದರ ಹೊರತಾಗಿಯೂ ಮತದಾನದ ನಂತರ ವಿವಿ ಪ್ಯಾಟ್ ಯಂತ್ರದಲ್ಲಿ ತಾನು ಚಲಾಯಿಸಿದ ಮತ ತಪ್ಪಾಗಿ ತೋರಿಸುತ್ತಿದೆ ಎಂದು ಯಾರಾದರೂ ಆಕ್ಷೇಪಿಸಿದರೆ ಅಂತಹ ವ್ಯಕ್ತಿ ಯಿಂದ ಡಿಕ್ಲೇರೇಷನ್ ಪಡೆದು ಮತ್ತೊಮ್ಮೆ ಮತದಾನ (ಟೆಸ್ಟ್ ವೋಟ್ ಎಲ್ಲರ ಸಮ್ಮುಖದಲ್ಲಿ) ಮಾಡಿಸಲಾಗುವುದು. ತಪ್ಪೆಂದು ಕಂಡು ಬಂದಲ್ಲಿ ದೂರುದಾರ ರನ್ನು ಡಿಕ್ಲರೇಷನ್ ಪ್ರಕಾರ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ನಾಯ್ಕಾ ಮಾತನಾಡಿ, ಉಡುಪಿ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಈ ಬಾರಿಯ ಚುನಾವಣೆ ಮತದಾನ ಪ್ರಮಾಣದಲ್ಲೂ ಸಹ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ, ಮೇ 12ರಂದು ನಡೆಯುವ ಚುನಾವಣೆಯಲ್ಲಿ ಪ್ರತಿ ಯೊಬ್ಬರೂ ತಪ್ಪದೇ ಮಾತದಾನ ಮಾಡಬೇಕು ಹಾಗೂ ತಮ್ಮ ಮನೆಯ ಅಕ್ಕಪಕ್ಕದವರನ್ನು ಸಹಾ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ದೊಂದಿಗೆ ಮತದಾನಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ, ಅಪರ ಜಿಲ್ಲಾಧಿಕಾರಿ ಅನುರಾಧ, ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್ ಟ್ರೈನರ್ ಪ್ರಕಾಶ್, ವಿವಿ ಪ್ಯಾಟ್ ಹಾಗೂ ಮತಯಂತ್ರಗಳ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.