ಬಾಬಾಬುಡಾನ್ಗಿರಿ ತೀರ್ಪು ಸತ್ಯಕ್ಕೆ ಸಂದ ಜಯ: ಜಿಲ್ಲಾ ಸುನ್ನಿ ಸಂಘಟನೆಗಳ ಒಕ್ಕೂಟ ಸ್ವಾಗತ
![ಬಾಬಾಬುಡಾನ್ಗಿರಿ ತೀರ್ಪು ಸತ್ಯಕ್ಕೆ ಸಂದ ಜಯ: ಜಿಲ್ಲಾ ಸುನ್ನಿ ಸಂಘಟನೆಗಳ ಒಕ್ಕೂಟ ಸ್ವಾಗತ ಬಾಬಾಬುಡಾನ್ಗಿರಿ ತೀರ್ಪು ಸತ್ಯಕ್ಕೆ ಸಂದ ಜಯ: ಜಿಲ್ಲಾ ಸುನ್ನಿ ಸಂಘಟನೆಗಳ ಒಕ್ಕೂಟ ಸ್ವಾಗತ](https://www.varthabharati.in/sites/default/files/images/articles/2018/04/9/sunni.jpg)
ಚಿಕ್ಕಮಗಳೂರು, ಎ.9: ಮೂರು ದಶಕಗಳಿಂದ ಬಾಬಾಬುಡಾನ್ಗಿರಿ-ದತ್ತಪೀಠ ಸಂಬಂಧ ನಾಗಮೋಹನ್ ದಾಸ್ ಸಮಿತಿ ನೀಡಿದ ವರದಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದ್ದು, ಪ್ರಸಕ್ತ ಶಾಖಾದ್ರಿ ಅವರ ಉಸ್ತುವಾರಿಯಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಅನುವು ಮಾಡಿಕೊಟ್ಟಿದೆ. ಇದನ್ನು ಜಿಲ್ಲಾ ಸುನ್ನಿ ಸಂಘಟನೆಗಳ ಒಕ್ಕೂಟ ಸ್ವಾಗತಿಸುತ್ತದೆ ಎಂದು ಒಕ್ಕೂಟದ ಯೂಸುಫ್ ಹಾಜಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾಬುಡಾನ್ಗಿರಿ ವಿವಾದ ಸಂಬಂಧ ನ್ಯಾಯಾಲಯದಲ್ಲಿ ಸುದೀರ್ಘವಾಗಿ ಹೋರಾಟ ಪ್ರತಿ ಹೋರಾಟ ನಡೆದಿದೆ. ನ್ಯಾಯಾಲಯದ ಅಂಗಳದಲ್ಲಿದ್ದ ವಿವಾದವನ್ನು ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ರಾಜಕೀಯಕ್ಕೆ ಬಳಸಿಕೊಂಡಿದ್ದವು. ಉಚ್ಚನ್ಯಾಯಾಲಯದ ಆದೇಶದಂತೆ ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 1975ರಲ್ಲಿ ಗಿರಿಯಲ್ಲಿ ಯಾವ ಆಚರಣೆ ರೂಢಿಯಲ್ಲಿತ್ತು ಎಂಬ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಸಿ 1989ರಲ್ಲಿ ಆದೇಶ ಹೊರಡಿಸಿತ್ತು. ಅದರಂತೆ ಶಾಖಾದ್ರಿ ನೇತೃತ್ವದ ಉರೂಸ್ ಆಚರಣೆ ಹೊರತು ಪಡಿಸಿ ದತ್ತ ಜಯಂತಿಯಂತಹ ಯಾವುದೇ ಆಚರಣೆಗೆ ಅವಕಾಶವಿಲ್ಲ ಎಂದು ದೃಢಪಡಿಸಿತ್ತು. ಆದರೂ ಸಂಘಪರಿವಾರದ ಮುಖಂಡರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಳಸಿಕೊಳ್ಳಲು ಮುಂದಾಗಿದ್ದರು. ಈ ಮೂಲಕ ಜಿಲ್ಲೆಯ ಆಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿ ಕಾಲಕಳೆಯುವಂತೆ ಮಾಡಿತ್ತು. ಈ ವೇಳೆ ಅಲ್ಪಸಂಖ್ಯಾತರು ಸಂಯಮ ಕಾಯ್ದುಕೊಂಡಿದ್ದರು. ಈ ಅನ್ಯಾಯದ ವಿರುದ್ಧ ಜಿಲ್ಲೆಯ ಎಸ್ಎಸ್ಎಫ್, ಎಸ್ವೈಎಸ್, ಎಸ್ಜೆಎಂ, ಕೆಎಂಜೆಸಿ ಮತ್ತು ಎಸ್ಎಂಎ ಮತ್ತಿತರ ಸುನ್ನಿ ಸಂಘಟನೆಗಳು ಹಾಗೂ ರಾಜ್ಯದ ಸಮಾನ ಮನಸ್ಕ ಸಂಘಟನೆಗಳು ಕರ್ನಾಟಕ ಕೋಮು ಸೌಹಾರ್ಧ ವೇದಿಕೆಯೊಂದಿಗೆ ನ್ಯಾಯಾಲಯಲ್ಲಿ ಕಾನೂನು ಹೋರಾಟ ಮುಂದುವರಿಸಿತ್ತು. ಇದರ ಫಲವಾಗಿ ರಾಜ್ಯ ಸರಕಾರ ನೇಮಿಸಿದ್ದ ನ್ಯಾ. ನಾಗಮೋಹನ್ದಾಸ್ ಸಮಿತಿ ವರದಿಯನ್ನು ಉಚ್ಚ ನ್ಯಾಯಾಲುಯ ಮಾನ್ಯ ಮಾಡಿ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ ಬಾಬಾಬುಡಾನ್ಗಿರಿಯ ಸಂಪೂರ್ಣ ಆಡಳಿತದ ಜವಾಬ್ದಾರಿ ಶಾಖಾದ್ರಿ ಅವರಿಗೆ ಸೇರಿದ್ದು, 1947ರ ಆಗಸ್ಟ್ ತಿಂಗಳಿಗೂ ಮೊದಲಿದ್ದ ಆಚರಣೆಗಳನ್ನು ನಡೆಸಲು ನ್ಯಾಯಾಲಯ ಸಮ್ಮತಿಸಿದೆ. ಆದ್ದರಿಂದ ಜಿಲ್ಲಾಡಳಿತ ಈ ಜವಬ್ದಾರಿಯನ್ನು ಶೀಘ್ರ ಶಾಖಾದ್ರಿ ಅವರಿಗೆ ನೀಡಲು ಮುಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
ಒಕ್ಕೂಟದ ಸದಸ್ಯ ಹುಸೈನ್ ಸಅದಿ ಹೊಸ್ಮಾರ್ ಮಾತನಾಡಿ, ಧಾರ್ಮಿಕ ಕೇಂದ್ರಗಳು ಎಲ್ಲ ಧರ್ಮೀಯರ ಸ್ವತ್ತು. ಅವುಗಳ ಮೂಲಕ ಸೌಹಾರ್ದ ಹರಡಬೇಕೇ ಹೊರತು ಧಾರ್ಮಿಕ ಭಾವನೆಗಳನ್ನು ಕೆದಕಬಾದರು. ಬಾಬಾಬುಡಾನ್ಗಿರಯನ್ನು ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ವಿವಾದಿತ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಿರುವ ಬಗ್ಗೆ ಜಿಲ್ಲೆಯ ಸೌಹಾರ್ದ ಪ್ರಿಯರಲ್ಲಿ ಅಸಮಾಧಾನವಿದೆ. ಈ ಸಂಬಂಧ ಸುಪ್ರೀಂ ತೀರ್ಪು ಹೊರಬಿದ್ದಿದ್ದು, ಇದನ್ನು ಎಲ್ಲ ಧರ್ಮೀಯರು ಗೌರವಿಸಬೇಕು. ಈ ಧಾರ್ಮಿಕ ಕೇಂದ್ರ ಕೇವಲ ಮುಸ್ಲಿಮರಿಗೆ ಸೀಮಿತವಲ್ಲ. ಸೌಹಾರ್ದ ಬಯಸುವ ಎಲ್ಲ ಧರ್ಮದವರಿಗೂ ಸೇರಿದ್ದಾಗಿದೆ. ಇನ್ನಾದರೂ ಬಾಬಾಬುಡಾನ್ಗಿರಿ ಹಿಂದೂ ಮುಸ್ಲಿಮರ ಸೌಹಾರ್ದ ತಾಣವಾಗಿರುವಂತೆ ನೋಡಿಕೊಳ್ಳಬೇಕಾದ ಜವಬ್ದಾರಿ ಜನತೆ ಹಾಗೂ ಸರಕಾರದ ಮೇಲಿದೆ. ಗಿರಿಯಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶಾಖಾದ್ರಿಗೆ ಉಸ್ತುವಾರಿ ವಹಿಸಬೇಕೆಂದರು.
ಗೋಷ್ಠಿಯಲ್ಲಿ ಎವೈಸ್ನ ತಂಜಳ್ ಉಪ್ಪಳ್ಳಿ, ಎಸ್ಎಸ್ಎಫ್ ರಫೀಕ್, ಎಸ್ವೈಎಸ್, ಎಸ್ಜೆಎಂನ ಇಬ್ರಾಹೀಂ, ಕೆಎಂಜೆಸಿಯ ಯೂಸುಫ್ ಹಾಜಿ, ಎಸ್ಎಂಎಯ ಅಬ್ದುಲ್ ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.