ಉಡುಪಿ: ಮತದಾರರ ಜಾಗೃತಿಗೆ ಸ್ವೀಪ್ನಿಂದ ಅತ್ಯಾಕರ್ಷಕ ಭಿತ್ತಿಪತ್ರಗಳ ಬಿಡುಗಡೆ

ಉಡುಪಿ, ಎ.9: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಮತದಾನದ ಶೇಕಡಾವಾರನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಲವು ವಿಧದಲ್ಲಿ ಜನರನ್ನು ಮತಗಟ್ಟೆಯತ್ತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಜನರಿಗೆ ಮತದಾನ ಹಕ್ಕನ್ನು ಚಲಾಯಿಸಲು ಪ್ರೇರೇಪಿಸಲು ಅತ್ಯಾಕರ್ಷಕ ಪೋಸ್ಟರ್ಗಳನ್ನು ಸೋಮವಾರ ಬಿಡುಗಡೆ ಗೊಳಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಸ್ಥಳೀಯರೇ ಆದ ಜನಸಾಮಾನ್ಯರು ಸಹಜತೆಯಿಂದ ರೂಪದರ್ಶಿಗಳಾಗಿ ಭಾಗವಹಿಸಿದ ಮತದಾನಕ್ಕೆ ಕರೆ ಕೊಡುವ ಸುಮಾರು 17 ಬಹುವರ್ಣದ ಈ ಪೋಸ್ಟರ್ಗಳನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಶಿವಾನಂದ ಕಾಪಸಿ ಬಿಡುಗಡೆಗೊಳಿಸಿದರು.
ಜನರನ್ನು ಮತಗಟ್ಟೆಯತ್ತ ಸೆಳೆಯಲು ಜಿಲ್ಲಾಡಳಿತ ಈ ಬಾರಿ ವಿವಿಧ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತಿದೆ. ಮೋಟಾರುಸೈಕಲ್ ರ್ಯಾಲಿ, ಬೈಸಿಕಲ್ ರ್ಯಾಲಿ, ಸಹಿ ಚಳವಳಿ, ಮಾನವ ಸರಪಳಿ ಇವುಗಳಲ್ಲಿ ಸೇರಿವೆ. ಇವುಗಳಿಗೆ ಜನರ ಪ್ರತಿಕ್ರಿಯೆಯೂ ಚೆನ್ನಾಗಿಯೇ ಇದೆ ಎಂದರು.
ನಾಗರಿಕರಿಗೆ ಮತದಾನದ ಜಾಗೃತಿ ಮೂಡಿಸಲು, ಸಾಮಾಜಿಕ ಮಾಧ್ಯಮ ಗಳಲ್ಲೂ ಜಾಗೃತಿಗಾಗಿ ಇವುಗಳನ್ನು ಬಳಸಲಾಗುವುದು. ಇಂದು ಬಿಡುಗಡೆ ಗೊಳಿಸಲಾದ ಪೋಸ್ಟರ್ಗಳನ್ನು ಸರಕಾರಿ ಬಸ್ಗಳಲ್ಲಿ ಪ್ರದರ್ಶಿಸಲಾಗುವುದು. ಉಡುಪಿ ಮತ್ತು ಕುಂದಾಪುರ ಡಿಪೋದ ಎಲ್ಲಾ ನಗರ ಸಾರಿಗೆ ಹಾಗೂ ದೂರ ಪ್ರಯಾಣದ ಕೆಎಸ್ಸಾರ್ಟಿಸಿ ಬಸ್ಗಳಲ್ಲೂ ಈ ಪೋಸ್ಟರ್ಗಳನ್ನು ಪ್ರದರ್ಶಿಸಲಾಗುವುದು ಎಂದರು.
ಅಲ್ಲದೇ ಸಾಮಾಜಿಕ ಜಾಲತಾಣಗಳಾದ- ಫೇಸ್ಬುಕ್, ವಾಟ್ಸಪ್, ಟ್ವಿಟರ್ಗಳಲ್ಲಿ, ಸಾರ್ವಜನಿಕ ಪ್ರದೇಶಗಳ ಹೋರ್ಡಿಂಗ್ಸ್ಗಳ ಮೂಲಕ, ಆಯ್ದ ಭಿತ್ತಿಪತ್ರಗಳ ಪ್ರದರ್ಶನಗಳ ಮೂಲಕ ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಪ್ರತಿ ಗ್ರಾಮಗಳಲ್ಲೂ ಇವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಗ್ರಾಪಂಗಳಿಗೆ ನೀಡಲಾಗುವುದು. ಜಾಥಾ, ರ್ಯಾಲಿಗಳಲ್ಲೂ, ಎಲ್ಲಾ ಬಸ್ ನಿಲ್ದಾಣಗಳಲ್ಲಿ ಇವುಗಳನ್ನು ಪ್ರದರ್ಶಿಸಲಾಗುವುದು.
5.87ಲಕ್ಷ ರೂ.ಜಫ್ತಿ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬಳಿಕ ಇಂದಿನವರೆಗೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ 10 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಬಕಾರಿಗೆ ಸಂಬಂಧಿಸಿದಂತೆ ಸಹ 10 ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ವಾಹನಗಳಲ್ಲಿ ಸಾಗಿಸಲಾಗುತಿದ್ದ ಒಟ್ಟು 5,87,700ರೂ. ನಗದನ್ನು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ನೇಜಾರಿಯಲ್ಲಿ 59,000ರೂ., ಸಾಸ್ತಾನದಲ್ಲಿ 70,000ರೂ., ಕುಂದಾಪುರದಲ್ಲಿ 3,65,000ರೂ. ಹಾಗೂ ಅಂಜಾರಿನಲ್ಲಿ 93,100ರೂ. ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ವೈಯಕ್ತಿಕ ಪ್ರಕರಣ ಗಳಾಗಿದ್ದು, ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂದು ಪ್ರಿಯಾಂಕ ತಿಳಿಸಿದರು.
ಸೂಕ್ತ ದಾಖಲೆಗಳನ್ನು ಹಾಜರು ಪಡಿಸಿದರೆ ಇವರಿಗೆ ಹಣವನ್ನು ಹಿಂದಿರುಗಿಸಲಾಗುವುದು. ಒಬ್ಬರು ಬ್ಯಾಂಕಿನಿಂದ ತರುತ್ತಿರುವುದಾಗಿ ತಿಳಿಸಿ ದರೂ, ಬ್ಯಾಂಕ್ ಹೇಳಿಕೆಗೂ, ಅವರ ಹೇಳಿಕೆಗೂ ತಾಳೆಯಾಗುತ್ತಿಲ್ಲ. ಅದೇ ರೀತಿ ಒಬ್ಬರು ಬಾರ್ ವ್ಯಾಪಾರ ಎಂದರೂ, ಅಕೌಂಟ್ನ ಯಾವುದೇ ದಾಖಲೆ ತೋರಿಸಿಲ್ಲ ಎಂದರು.