ಧಾರವಾಡ: ದಾಖಲೆಯಿಲ್ಲದ ಸಾಗಿಸುತ್ತಿದ್ದ 2.55 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ
ಧಾರವಾಡ, ಎ.9: ದಾಖಲೆ ರಹಿತ 2.55 ಕೋಟಿ ಮೌಲ್ಯದ 7.72 ಕೆಜಿ ತೂಕದ ಚಿನ್ನದ ಒಡವೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾಲೂಕಿನ ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಡಬಗಟ್ಟಿ ಕ್ರಾಸ್ ಬಳಿ ನಿರ್ಮಿಸಲಾಗಿದ್ದ ಚೆಕ್ ಪೋಸ್ಟ್ ಮೂಲಕ ಒಡವೆಗಳನ್ನು ಸಾಗಿಸುವಾಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಗೋವಾ ಮೂಲದ ಜ್ಯುವೆಲರಿ ಶಾಪ್ ಮ್ಯಾನೇಜರ್ ಪ್ರತೀಕ ನಾವೇಕರ್ (27) ಹಾಗೂ ರಾಜಸ್ತಾನ ಮೂಲದ ಜ್ಯುವೆಲರಿ ಶಾಪ್ ಮ್ಯಾನೇಜರ್ ವಿಕ್ರಂಸಿಂಗ್ ರಾಥೋಡ್ (32) ಎಂಬುವವರು ಸಿಕ್ಕಿಬಿದ್ದವರಾಗಿದ್ದಾರೆ.
ಇವರು ತಮ್ಮ ಕಾರಿನಲ್ಲಿನ ದಾಖಲೆಗಳಿಲ್ಲದೇ ಹುಬ್ಬಳ್ಳಿ ಕಡೆಗೆ ಈ ಒಡವೆಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಕಡಬಗಟ್ಟಿ ಚೆಕ್ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಒಡವೆಗಳಿದ್ದದ್ದು ಕಂಡು ಬಂದಿದೆ. ಕೂಡಲೇ ವಾಹನ ಸಮೇತ ಪೊಲೀಸರು ಆ ಒಡವೆಗಳನ್ನು ಜಪ್ತಿ ಮಾಡಿದ್ದಾರೆ. ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಪತ್ತೆಯಾಗಿದ್ದರಿಂದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಅಳ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ.