ಆರು ಸರಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ
![ಆರು ಸರಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ಆರು ಸರಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ](https://www.varthabharati.in/sites/default/files/images/articles/2018/04/10/ACB.jpg)
ಬೆಂಗಳೂರು, ಎ.10: ಅಕ್ರಮ ಆಸ್ತಿ-ಪಾಸ್ತಿ ಹೊಂದಿದ್ದಾರೆಂಬ ವಿಶ್ವಾಸಾರ್ಹ ಮಾಹಿತಿ ಆಧಾರದ ಮೇಲೆ ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ತಂಡ ಮಂಗಳವಾರ 22 ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಆರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹುಬ್ಬಳ್ಳಿಯ ಕೆಪಿಟಿಸಿಎಲ್ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಎನ್. ಸವಣೂರ ಅವರ ಶಿರೂರು ಪಾರ್ಕ್, ಹುಬ್ಬಳ್ಳಿಯಲ್ಲಿರುವ ವಾಸದ ಮನೆ ಸೇರಿ 3 ಮನೆ ಹಾಗೂ ಅಂಗಡಿ, ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ, ಅರಣ್ಯ ಇಲಾಖೆ, ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರೀಶ್ವರನಾಥ ವರೂರ, ಅವರ ಧಾರವಾಡದ ಶಾಸ್ತ್ರಿನಗರದ ವಾಸದ ಮನೆ ಸೇರಿ 3 ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಕುಂದಾಪುರ ತಾಲೂಕು ಪಂಚಾಯತಿಯ ಜೂನಿಯರ್ ಇಂಜಿನಿಯರ್ ರವಿ ಶಂಕರ್ ಇವರ ವಡೇರ ಹೋಬಳಿ, ಕುಂದಾಪುರದಲ್ಲಿರುವ ವಾಸದ ಮನೆ ಸೇರಿ 2 ಮನೆ ಹಾಗೂ ಕಚೇರಿ, ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರ ಬಿಬಿಎಂಪಿ ಕಚೇರಿ ವಾರ್ಡ್ ಸಂಖ್ಯೆ 198ರ ಕಂದಾಯ ನಿರೀಕ್ಷಕರಾದ ಶಿವಕುಮಾರ್ ಜಿಎಂ ಇವರ ದೊಡ್ಡ ಕಲ್ಲಸಂದ್ರ, ಬೆಂಗಳೂರಿನಲ್ಲಿರುವ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಮೇಲೆ ಎಸಿಬಿ ದಾಳಿ ನಡೆಸಿದೆ.
ಮೈಸೂರಿನ ಮೈಸೂರು ಸಿಟಿ ಕಾರ್ಪೋರೇಶನ್ನ ವಾಟರ್ ಇನ್ಸ್ಪೆಕ್ಟರ್ ಕೃಷ್ಣೇಗೌಡ ಟಿ.ಎಸ್. ಅವರ ಮೈಸೂರಿನ ಆನಂದನಗರದ ವಾಸದ ಮನೆ ಹಾಗೂ ಒಂಟಿಕೊಪ್ಪಲುನಲ್ಲಿರುವ ಕಚೇರಿ ಹಾಗೂ ದಾವಣಗೆರೆ,ಜಗಳೂರಿನ ಗುರುಸಿದ್ಧಪುರ ಗ್ರಾಮ ಪಂಚಾಯತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ರ ದಾವಣಗೆರೆ ವಾಸದ ಮನೆ ಸೇರಿ 4 ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಹಾಗೂ ಹೆಚ್ಚುವರಿ ಪ್ರಭಾರದ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ವಿವಿಧ ಎಸಿಬಿ ಪೊಲೀಸ್ ಠಾಣೆಯ ತಂಡಗಳಿಂದ ಆರೋಪಿತ ಆರು ಸರಕಾರಿ ಅಧಿಕಾರಿಗಳ ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನೂ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರಿದಿದೆ.