ರಾಜ್ಯದ 22 ಕಡೆಗಳಲ್ಲಿ ಎಸಿಬಿ ದಿಢೀರ್ ದಾಳಿ

ಬೆಂಗಳೂರು, ಎ.10: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 6 ಅಧಿಕಾರಿಗಳ ವಿರುದ್ದ ರಾಜ್ಯದ ವಿವಿಧೆಡೆ 22 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ: ಕೆಪಿಟಿಸಿಎಲ್ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಎನ್.ಸವಣೂರ ಅವರ ಮೂರು ಮನೆ ಸೇರಿ ಕಚೇರಿ ಮೇಲೆ ದಾಳಿ ನಡೆಸಿ ಆಸ್ತಿ ದಾಖಲೆ ಪತ್ರಗಳನ್ನು ಪತ್ತೆಹಚ್ಚಲಾಗಿದೆ.
ಧಾರವಾಡ: ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರೀಶ್ವನಾಥ ವರೂರ ಅವರ ಸ್ವಗೃಹ ಸೇರಿದಂತೆ ಮೂರು ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ..
ಉಡುಪಿ: ಕುಂದಾಪುರ ತಾಲೂಕು ಪಂಚಾಯತ್ ನ ಸಹಾಯಕ ಇಂಜಿನಿಯರ್ ರವಿಶಂಕರ್ ಅವರ ವಡೇರಾ ಹೋಬಳಿಯಲ್ಲಿರುವ ವಾಸದ ಮನೆ ಸೇರಿ 2 ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಮೇಲೆ ದಾಳಿ ನಡೆಸಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಬೆಂಗಳೂರು: ಬಿಬಿಎಂಪಿಯ ಹೆಮ್ಮಗೆಪುರ ವಾರ್ಡ್ 198ರ ಕಂದಾಯ ನಿರೀಕ್ಷಕ ಜಿ.ಎಂ.ಶಿವಕುಮಾರ್ ಅವರ ದೊಡ್ಡಕಲ್ಲಸಂದ್ರದಲ್ಲಿರುವ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.
ಮೈಸೂರು: ಮೈಸೂರು ಸಿಟಿ ಕಾಪೋರೇಷನ್ ವಾಟರ್ ಇನ್ಸ್ಪೆಕ್ಟರ್ ಟಿ.ಎಸ್.ಕೃಷ್ಣೇಗೌಡ ಅವರ ಆನಂದನಗರ, ಮೈಸೂರಿನ ವಾಸದ ಮನೆ ಹಾಗೂ ಒಂಟಿಕೊಪ್ಪಲುನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಅದೇ ರೀತಿ, ದಾವಣಗೆರೆಯ ಜಗಳೂರು ಗುರುಸಿದ್ದಪುರ ಗ್ರಾಮ ಪಂಚಾಯತ್ ಪಿಡಿಓ ನಾಗರಾಜ್ ಅವರು ನಾಲ್ಕು ಮನೆಗಳು ಸೇರಿ ಕಚೇರಿಗಳ ಮೇಲೆ ದಾಳಿ ನಡೆಸಿ ತನಿಖೆ ಮುಂದುವರೆಸಲಾಗಿದೆ. ಪ್ರಕರಣ ಸಂಬಂಧ ಸರಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾತಿ ಸಂಗ್ರಹಣೆ ಮುಂದುವರೆದಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.







