ಚುನಾವಣಾ ಕರ್ತವ್ಯಕ್ಕೆ ಅಡ್ಡಿ, ದೂರು; ಇಬ್ಬರು ವಶಕ್ಕೆ
ಕುಂದಾಪುರ, ಎ.10: ಚುನಾವಣಾ ಕರ್ತವ್ಯದಲ್ಲಿ ಹೋಟೆಲೊಂದರ ಮೇಲೆ ದಾಳಿ ಮಾಡಲು ತೆರಳಿದ್ದ ಕುಂದಾಪುರ ಸಹಾಯಕ ಕಮೀಷನರ್ ಮತ್ತು ಪ್ರೊಬೆಶನರಿ ಐಎಎಸ್ ಅಧಿಕಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕುಂದಾಪುರ ಸಮೀಪದ ಕೋಟೇಶ್ವರದ ಹೋಟೇಲ್ ಮತ್ತು ಲಾಡ್ಜ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್, ಐಎಎಸ್ ಪ್ರೊಬೇಶನರಿ ಅಧಿಕಾರಿ ಪೂವಿತಾ ಹಾಗೂ ಅಬಕಾರಿ ಡಿಸಿ ನೀರು ನಂದನ್ ಅವರು ಸಾರ್ವಜನಿಕರ ದೂರಿನನ್ವಯ ಚುನಾವಣಾ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಸೋಮವಾರ ರಾತ್ರಿ ಕುಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರದ ಹೋಟೆಲಿಗೆ ದಾಳಿ ನಡೆಸಿದ್ದರು.
ಹೋಟೆಲಿನಲ್ಲಿ ಅಬಕಾರಿ ಇಲಾಖೆಯ ನಿಯಮಗಳನ್ನು ಮೀರಿ ಮದ್ಯ ಸರಬರಾಜು ಮಾಡುತ್ತಿರು ಬಗ್ಗೆ ಬಂದ ಮಾಹಿತಿಯಂತೆ ತಪಾಸಣೆಗೆ ತೆರಳಿ ಹೋಟೆಲಿನಲ್ಲಿ ವೀಡಿಯೊ ಚಿತ್ರಿಕರಣ ಮಾಡುತ್ತಿರುವ ವೇಳೆ ಗ್ರಾಹಕರು ಮತ್ತು ಹೋಟೆಲಿನವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂದರ್ಭ ಅಧಿಕಾರಿಗಳು ಮತ್ತು ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಗ್ರಾಹಕರ ಪೈಕಿ ಓರ್ವ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಸಿದ್ದಲ್ಲದೇ, ಕೈಯಿಂದ ದೂಡಿದ್ದಾನೆ.
ಅಪಾಯದ ಮುನ್ಸೂಚನೆಯನ್ನು ಅರಿತ ಅಧಿಕಾರಿಗಳು ಕೂಡಲೇ ಕುಂದಾಪುರ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊಟೇಲಿನ ಮಾಲಕರ ಮೇಲೆ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.







