ಆತೂರು: ಆಯಿಶಾ ವಿದ್ಯಾಸಂಸ್ಥೆಯ ದಶಮಾನೋತ್ಸವ

ಪುತ್ತೂರು, ಎ. 11: ಆತೂರಿನ ಆಯಿಶಾ ಹೆಣ್ಣಮಕ್ಕಳ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಗ್ರಾಮೀಣ ವಿದ್ಯಾಸಂಸ್ಥೆಯ ದಶಮಾನೋತ್ಸವದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಅವರು ಉದ್ಘಾಟಿಸಿ, ದಶಮಾನೋತ್ಸದ ಸುಗಂಧವು ಚಿರಕಾಲ ಪಸರಿಸಲಿ, ನಮ್ಮೆಲ್ಲರ ಒಡಲಾಳದ ಬಂಧವು ಹಚ್ಚ ಹಸಿರಾಗಿರಲಿ ಎಂದು ಶುಭ ಹಾರೈಸಿದರು.
ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ವೀಣಾ ಪ್ರಸಾದ್ ಕಡೆಯವರು ಲೋಗೊ ಅನಾವರಣಗೊಳಿಸಿ, ಹೆಣ್ಣು ಸಮಾಜದ ಕಣ್ಣು -ವಿದ್ಯಾಭ್ಯಾಸದೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯರಾದ ರೈಹಾನ ಕೆ., ಆಯಿಶತುಲ್ ಇಸ್ಮತ್, ತಶ್ರೀಫಾ ಜಹಾನ್ ಸಂಸ್ಥೆಯ ಕುರಿತು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಮಂಗಳೂರು ಶಾಖೆಯ ಪ್ರಧಾನ ಕಾರ್ಯದರ್ಶಿ ಸಿಎ ಮುಹಮ್ಮದ್ ಇಸ್ಹಾಕ್ ವಹಿಸಿ, ಮಾನವನ ಸರ್ವಾಂಗೀಣ ವಿಕಾಸಕ್ಕೆ ವಿದ್ಯೆ ಅಗತ್ಯ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಸಮಾಜಮುಖಿಯಾಗಿ ಅನಾವರಣಗೊಳ್ಳಲು ಶಿಕ್ಷಕರ ಪಾತ್ರ ಅತೀ ಅಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರಾದ ಅಮೀನ್ ಅಹ್ಸನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಆಯಿಶಾ ಫರ್ಝಾನ ಸ್ವಾಗತಿಸಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಲೀಲ್ ಮುಕ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿರು. ಉಪನ್ಯಾಸಕಿ ಜೋಯ್ಲಿನ್ ಲಸ್ರಾದೊ ವಂದಿಸಿ, ಶಿಕ್ಷಕಿಯರಾದ ಸ್ಮಿತಾ ಕೆ. ಎಸ್., ನೂತನ ಅಶ್ವಿನ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.