ಉಡುಪಿ ನಗರದಲ್ಲಿ ಕೇಂದ್ರ ಅರೆ ಸೇನಾ ಪಡೆಯಿಂದ ಪಥಸಂಚಲನ

ಉಡುಪಿ, ಎ.11: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಅರೆ ಸೇನಾ ಪಡೆಯ ಸಿಬ್ಬಂದಿಗಳು ಇಂದು ಉಡುಪಿ ನಗರದಲ್ಲಿ ಪಥಸಂಚಲನ ನಡೆಸಿದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ 100 ಮಂದಿ ಅರೆ ಸೇನಾ ಪಡೆಯ ಸಿಬ್ಬಂದಿಗಳು ನಗರದ ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಶ್ರೀಕೃಷ್ಣ ಮಠದವರೆಗೆ ಪಥ ಸಂಚಲನ ನಡೆಸಿದರು.
‘ಮುಂದಿನ ಚುನಾವಣೆಯು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಗೆ ಮೂರು ಅರೆ ಸೇನಾ ಪಡೆಯನ್ನು ತರಿಸಲಾಗಿದೆ. ಈಗಾಗಲೇ ಕುಂದಾಪುರ ತಾಲೂಕಿಗೆ 80 ಮತ್ತು ಕಾರ್ಕಳ ತಾಲೂಕಿಗೆ 95 ಸಿಬ್ಬಂದಿಗಳು ಆಗಮಿಸಿದ್ದಾರೆ’ ಎಂದು ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಉಡುಪಿ ತಾಲೂಕಿನ ಸೂಕ್ಷ್ಮ ಪ್ರದೇಶವಾಗಿರುವ ಮಲ್ಪೆ ಹಾಗೂ ಹೂಡೆ ಯಲ್ಲಿ ಎ.12ರಂದು ಪಥಸಂಚಲನ ನಡೆಯಲಿದೆ. ನಕ್ಸಲ್ ಪೀಡಿತ ಪ್ರದೇಶ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಮತಗಟ್ಟೆಗಳಲ್ಲಿ ಈ ಸಿಪಿಎಂಎಫ್ನ ಸಿಬ್ಬಂದಿ ಗಳನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಪಥಸಂಚಲನದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಉಪವಿಭಾಗದ ಡಿವೈಎಸ್ಪಿ ಜೈಶಂಕರ್, ಸಿಪಿ ಎಂಎಫ್ನ ಸಹಾಯಕ ಕಮಾಂಡೆಂಟ್ ದೇವೇಂದ್ರ ಉಪಾಧ್ಯಾಯ, ಉಡುಪಿ ನಗರದ ಪೊಲೀಸ್ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.