ಗೋಹತ್ಯೆ ನಿಷೇಧ ಮಾಡಿದರೆ ಕಾಂಗ್ರೆಸ್ ನಿಂದ ಬೆಂಬಲ : ಯು ಟಿ ಖಾದರ್

ಮಂಗಳೂರು, ಎ. 11 : ಗೋಕಳ್ಳತನ ಪ್ರಕರಣಗಳ ಹೆಸರಲ್ಲಿ ಸಂಘ ಪರಿವಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು ಟಿ ಖಾದರ್ ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತಂದರೆ ಕಾಂಗ್ರೆಸ್ ಅದನ್ನು ಬೆಂಬಲಿಸಲಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ನಿಜವಾಗಿಯೂ ಗೋವುಗಳ ಬಗ್ಗೆ ಕಾಳಜಿಯಿದ್ದರೆ ಎನ್ ಡಿ ಎ ಸರಕಾರ ದೇಶಾದ್ಯಂತ ಗೋಹತ್ಯೆ ನಿಷೇಧಿಸಿ ಮಸೂದೆ ತರಲಿ ಮತ್ತು ಮಾಂಸ ರಫ್ತು ನಿಷೇಧಿಸಲಿ. ಅದನ್ನು ನಮ್ಮ ಪಕ್ಷವೂ ಬೆಂಬಲಿಸಲಿದೆ ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಗೋಕಳ್ಳತನ ಪ್ರಕರಣದಲ್ಲಿ ಟೀಕೆ ಎದುರಿಸುತ್ತಿರುವ ಖಾದರ್ ಈ ಬಗ್ಗೆ ಕೇಳಿದಾಗ ಗೋಹತ್ಯೆ ನಿಷೇಧ ಮಸೂದೆಯನ್ನು ಕಾಂಗ್ರೆಸ್ ಬೆಂಬಲಿಸಲಿದೆ ಎಂದು ಹೇಳಿದ್ದಾರೆ.
ಕೈರಂಗಳ ಗೋಶಾಲೆಯಲ್ಲಿ ಗೋಕಳ್ಳತನ ನಡೆದಿದೆ ಎಂದು ಹೇಳಲಾದ ಪ್ರಕರಣದ ವಿಚಾರಣೆಗೆ ವಿಶೇಷ ತಂಡ ರಚಿಸಬೇಕು ಎಂದು ಹೇಳಿರುವ ಖಾದರ್ ಬಿಜೆಪಿ ಮತ್ತು ಸಂಘ ಪರಿವಾರ ಈ ಬಗ್ಗೆ ರಾಜಕೀಯ ಮಾಡುವುದನ್ನು ಬಿಡಬೇಕು. ನಿಜವಾದ ಕಾಳಜಿಯಿದ್ದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶಾದ್ಯಂತ ಗೋಹತ್ಯೆ ನಿಷೇಧಿಸಲಿ, ಆಗ ಅದನ್ನು ಕಾಂಗ್ರೆಸ್ ಕೂಡ ಬೆಂಬಲಿಸಲಿದೆ ಎಂದು ಹೇಳಿದ್ದಾರೆ.