ಬಂಟ್ವಾಳ: ರಸ್ತೆ ಅಪಘಾತ; ಗಾಯಾಳು ಮೃತ್ಯು
ಬಂಟ್ವಾಳ, ಎ. 11: ತಿಂಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.
ಮೃತರನ್ನು ವಿಟ್ಲ ಗ್ರಾಮದ ಅಳಿಕೆ ನಿವಾಸಿ, ಆಟೊ ಚಾಲಕ ಹಸೈನಾರ್ (31) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಅವರ ಮಗು ಹಾಗೂ ಪತ್ನಿ ಚೇತರಿಸಿಕೊಂಡಿದ್ದಾರೆ.
ಘಟನೆ ವಿವರ: ಮಾ. 26ರಂದು ಮಧ್ಯಾಹ್ನ ಪಿಕಪ್ ಹಾಗೂ ಆಟೊ ರಿಕ್ಷಾ ನಡುವೆ ಕಲ್ಲಡ್ಕದ ಗೋಳ್ತಮಜಲು ಎಂಬಲ್ಲಿ ಅಪಘಾತ ಸಂಭವಿಸಿತ್ತು. ಪರಿಣಾಮ ರಿಕ್ಷಾ ಚಾಲಕ ಹಸೈನಾರ್, ಪತ್ನಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಇವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಪತ್ನಿ ಹಾಗು ಮಗು ಚೇತರಿಸಿಕೊಂಡಿದ್ದು, ಹಸೈನಾರ್ ಅವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.