ಕಾಸರಗೋಡು: ಅಭಿವೃದ್ಧಿಗೆ ತೊಡಕಾದ ಗುಂಪು ಗ್ರಾಪಂಗಳ ಸಮಸ್ಯೆ
ಸಣ್ಣ ಪುಟ್ಟ ಕೆಲಸಕ್ಕೂ ಕಿ.ಮೀ. ಕ್ರಮಿಸುತ್ತಿರುವ ಗ್ರಾಮಸ್ಥರು!

► ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ವ್ಯಾಪಕ ಅಸಮಾಧಾನ
ಕಾಸರಗೋಡು, ಎ.11: ಅಭಿ ವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಹಿಂದುಳಿದಿರುವ ಕಾಸರಗೋಡು ಜಿಲ್ಲೆಯಲ್ಲಿ ಗುಂಪು ಗ್ರಾಮ ಪಂಚಾಯತ್ (ಹಲವು ಗ್ರಾಮಗಳು ಒಂದು ಗ್ರಾಮ ಪಂಚಾಯತನ್ನು ಹೊಂದಿರುವುದು)ಗಳ ಸಮಸ್ಯೆ ಜಿಲ್ಲೆಯನ್ನು ಇನ್ನಷ್ಟು ಹಿಂದುಳಿಯುವಂತೆ ಮಾಡಿದೆ. ಕಾಸರಗೋಡು ಜಿಲ್ಲೆಯಲ್ಲಿ ದಶಕ ಗಳಿಂದ
ಗ್ರಾಮಗಳು ಹಾಗೂ ಗ್ರಾಪಂಗಳ ವಿಂಗಡಣೆಯಾಗಿಲ್ಲ.ರಾಜ್ಯದಲ್ಲೇ ಅತೀ ಹೆಚ್ಚು ಗುಂಪು ಗ್ರಾಪಂ ಇರುವ ಜಿಲ್ಲೆಯಲ್ಲಿ ಕಾಸರಗೋಡು ಮೊದಲ ಸಾಲಿನಲ್ಲಿದೆ ಎನ್ನಲಾಗಿದೆ. ನಾಲ್ಕು ತಾಲೂಕುಗಳನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ 127 ಗ್ರಾಮಗಳಿವೆ. ಆದರೆ ಗ್ರಾಪಂಗಳು ಮಾತ್ರ 83 ಇರುವುದು. ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯ ಕನ್ನಡ ಭಾಷಾ ಅಲ್ಪಸಂಖ್ಯಾತರು ಇರುವ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಅತ್ಯಧಿಕ ಗುಂಪು ಗ್ರಾಮ ಪಂಚಾಯತ್ಗಳಿವೆ.
ಮಂಜೇಶ್ವರ ತಾಲೂಕಿನ ಇಚ್ಲಂಗೋಡು ಗ್ರಾಮ ಪಂಚಾಯತ್ಗೆ ಬೇಕೂರು, ಇಚ್ಲಂಗೋಡು, ಹೇರೂರು, ಶಿರಿಯ, ಕುಬಣೂರು ಸೇರಿದಂತೆ ಐದು ಗ್ರಾಮಗಳು ಸೇರಿವೆ. ಮಿಂಜ ಗ್ರಾಪಂಗೆ ಕಳಿಯೂರು, ಕೊಳ್ಯೂರು, ತಲೆಕ್ಕಳ, ಕಡಂ ಬಾರಿಗೆ ಕಡಂಬಾರ್, ಕೂಳೂರು, ಮೂಡಂಬೈಲ್, ಮಜಿಬೈಲ್, ಉಪ್ಪಳಕ್ಕೆ ಕೋಡಿಬೈಲು, ಮಂಗಲ್ಪಾಡಿ, ಹೊಸಬೆಟ್ಟುಗೆ ಬಂಗ್ರ ಮಂಜೇಶ್ವರ, ಬಡಾಜೆ, ಹೊಸಬೆಟ್ಟು ಮೊದಲಾದ ಗ್ರಾಮಗಳು ಸೇರುತ್ತಿವೆ. ಅಲ್ಲದೆ ಮಂಜೇಶ್ವರ ತಾಲೂಕಿನ ಕುಂಜತ್ತೂರು, ಹೊಸಬೆಟ್ಟು, ಕಡಂಬಾರ್, ಮಿಂಜ, ಕೊಡ್ಲ ಮೊಗರು, ವರ್ಕಾಡಿ, ಇಚ್ಲಂಗೋಡು, ಉಪ್ಪಳ, ಪೈವಳಿಕೆ ಕಯ್ಯಿರ್, ಬಂಬ್ರಾಣ, ಕೊಯಿಪಾಡಿ, ಎಡನಾಡು, ಬಾಡೂರು, ಪಡ್ರೆ, ಕಾಸರಗೋಡು ತಾಲೂಕಿನ ಕಾಸರಗೋಡು, ಚೆಂಗಳ, ಪಾಡಿ, ಕೂಡ್ಲು, ಆದೂರು, ಕುಂಬ್ಡಾಜೆ, ತೆಕ್ಕಿಲ್, ಕಳ್ನಾಡ್, ನೆಟ್ಟಣಿಗೆ, ಹೊಸದುರ್ಗ ತಾಲೂಕಿನ ಪಿಲಿಕ್ಕೋಡ್, ಪಳ್ಳಿಕೆರೆ, ಕ್ಲಾಯಿಕ್ಕೋಡ್, ವೆಳ್ಳರಿ ಕುಂಡು ತಾಲೂಕಿನ ಕರಿಂದಲ ಗುಂಪು ಗ್ರಾಪಂಗಳಾಗಿವೆ. ಜಿಲ್ಲೆ ಅಭಿವೃದ್ಧಿಯಲ್ಲಿ ಹಾಗೂ ಮೂಲ ಭೂತ ಸೌಕರ್ಯಗಳಲ್ಲಿ ಹಿಂದುಳಿಯಲು ಇದೂ ಒಂದು ಪ್ರಮುಖ ಕಾರಣವಾಗಿದೆ.ಅಲ್ಲದೆ ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ತಾಳಿರುವ ನಿರ್ಲಕ್ಷದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಅನುಷ್ಠಾನಕ್ಕೆ ಬಾರದ ಆಯೋಗ ವರದಿ
ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ವರದಿ ನೀಡಲು ನೇಮಿಸಿದ ಡಾ. ಪ್ರಭಾಕರನ್ ಆಯೋಗ ವರದಿಯಲ್ಲೂ ಗುಂಪು ಗ್ರಾಮ ಪಂಚಾಯತ್ಗಳ ವಿಭಜನೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅದರಲ್ಲೂ ಮಂಜೇಶ್ವರ, ಕಾಸರಗೋಡು ತಾಲೂಕಿನಲ್ಲಿರುವ 13 ಗ್ರಾಮ ಪಂಚಾಯತ್ಗಳನ್ನು ಅತೀ ಶೀಘ್ರದಲ್ಲೇ ವಿಭಜಿಸಬೇಕು ಎಂದು ಆಯೋಗ 2012ರಲ್ಲಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಆರು ವರ್ಷ ಕಳೆದರೂ ಇನ್ನೂ ಈ ಬಗ್ಗೆ ಕ್ರಮ ಸರಕಾರ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಗಳು ಕೂಡಾ ವೌನ ವಹಿಸಿದ್ದಾರೆ.
ಕೆಲಸ ಕಾರ್ಯಗಳಿಗೆ ತೊಂದರೆ
ಹಲವು ಗ್ರಾಮಗಳು ಒಂದೇ ಗ್ರಾಮ ಪಂಚಾಯತ್ ಹೊಂದಿರುವುದರಿಂದ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಗ್ರಾಮಸ್ಥರು ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯವನ್ನು ಅಥವಾ ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ಹತ್ತಾರು ಕಿಲೋ ಮೀಟರ್ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ಕೆಲವು ಗ್ರಾಪಂಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆಯೂ ಇದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.
ಕಂದಾಯ ಸಚಿವರ ಜಿಲ್ಲೆಯಲ್ಲೇ ಸಮಸ್ಯೆ
ಜಿಲ್ಲೆಯ ಗುಂಪು ಗ್ರಾಮ ಪಂಚಾಯತ್ಗಳನ್ನು ವಿಂಗಡಣೆ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ನಾಗರಿಕರು, ಹಲವು ಸಂಘಟನೆಗಳು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಆದರೆ ಸರಕಾರ ಮಾತ್ರ ಈ ಬಗ್ಗೆ ವೌನ ತಾಳಿದೆ. ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯವರೇ ಕಂದಾಯ ಸಚಿವರಾಗಿದ್ದಾರೆ. ಇನ್ನಾದರೂ ಗ್ರಾಮ ಪಂಚಾಯತ್ಗಳ ವಿಂಗಡಣೆಗೆ ಮುಹೂರ್ತ ಕೂಡಿ ಬರಲಿದೆಯೇ ಎಂಬ ಕಾತರದಲ್ಲಿ ಜಿಲ್ಲೆಯ ಜನರು ಇದ್ದಾರೆ.