ನಿವೇಶನ ರಹಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್: ಸಂತೋಷ್ ಶಕ್ತಿನಗರ
ಮಂಗಳೂರು, ಎ. 12: ನಿವೇಶನ ರಹಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಆಡಳಿತದಲ್ಲಿರುವ ಕಾಂಗ್ರೆಸ್ ಹೊರತು ನಿವೇಶನ ರಹಿತರ ಹೋರಾಟ ಸಮಿತಿಯಲ್ಲ ಎಂದು ಮಂಗಳೂರಿನ ನಿವೇಶನ ರಹಿತರ ಹೋರಾಟ ಸಮಿತಿಯ ಸಂಘಟನಾ ಸಂಚಾಲಕ ಸಂತೋಷ್ ಶಕ್ತಿನಗರ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಳೆದ 5ವರ್ಷದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬಡವರಿಗೆ ಮನೆ ನೀಡುವ ವಿಚಾರದಲ್ಲಿ ಸಮರ್ಪಕವಾಗಿ ಯೋಜನೆಯನ್ನು ಜಾರಿಗೊಳಿಸಿಲ್ಲ. ಪರಿಣಾಮವಾಗಿ ಸಿಪಿಎಂ ಬೆಂಬಲದೊಂದಿಗೆ ನಿವೇಶನ ರಹಿತರ ಸಮಿತಿ ರಚನೆಯಾಗಿ ನಿರಂತರ ಹೋರಾಟದ ಫಲವಾಗಿ ಶಕ್ತಿ ನಗರ, ಕನ್ನಗುಡ್ಡೆ, ಇಡ್ಯಾ, ವಾಮಂಜೂರು ಪ್ರದೇಶದಲ್ಲಿ ನಿವೇಶನ ನೀಡಲು ಮುಂದಾಗಿದ್ದಾರೆ, ಆದರೆ ಈ ಹಿಂದೆ ಹಲವಾರು ಬಾರಿ ಭರವಸೆ ನೀಡಿದಂತೆ ನಿವೇಶನ ರಹಿತರಿಗೆ ಮನೆ ನೀಡುವ ಯೋಜನೆ ಅನುಷ್ಠಾನಗೊಂಡಿಲ್ಲ. ಮಹಾನಗರ ಪಾಲಿಕೆಯ ಜೊತೆ ಕಾಂಗ್ರೆಸ್ ಶಾಸಕರು ಕೇವಲ ಆಯ್ಕೆ ಪಟ್ಟಿ ತಯಾರಿಸಿ ರಾಜಕೀಯ ಮಾಡುತ್ತಿದ್ದಾರೆ. ಇದೀಗ ಅವರೇ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ಆಯ್ಕೆ ಪಟ್ಟಿಯಲ್ಲಿ ಅನರ್ಹರನ್ನು ಸೇರಿಸಲಾಗಿದೆ. ನಿವೇಶನ ನೀಡುವ ಪ್ರಕ್ರೀಯೆ ಪೂರ್ಣಗೊಳ್ಳಬೇಕಾದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಮಹಾನಗರ ಪಾಲಿಕೆ ಅನುದಾನ ಮೀಸಲಿಡಬೇಕಿತ್ತು. ಆಯ್ಕೆಯಾದ ನಿವೇಶನ ರಹಿತರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಬೇಕಾಗಿತ್ತು. ಈ ರೀತಿಯ ಯಾವ ಪ್ರಕ್ರಿಯೆಯನ್ನು ನಡೆಸದೆ ಪುರಭವನದಲ್ಲಿ ಸಭೆ ನಡೆಸಿ ನಂಬರ್ ನೀಡುವುದು, ಕುಲಶೇಖರದಲ್ಲಿ ನಿವೇಶನ ರಹಿತರಿಗೆ ಝೆರಾಕ್ಸ್ ಪ್ರತಿಯನ್ನು ಹಂಚಿದ್ದರು. ಇಂದಿರಾ ಗಾಂಧಿ ಶತಮಾನೋತ್ಸವ, ರಾಹುಲ್ ಗಾಂಧಿ ಬರುವ ಕಾರ್ಯಕ್ರಮಕ್ಕೆ ನಿವೇಶನ ರಹಿತರನ್ನು ಆಹ್ವಾನಿಸುವ ಮೂಲಕ ಕಾಂಗ್ರೆಸ್ ರಾಜಕೀಯ ಮಾಡಿದೆ ಎಂದು ಸಂತೋಷ್ ಆರೋಪಿಸಿದರು.
ಎ. 15ರ ರಾಜಕೀಯ ಸಮಾವೇಶಕ್ಕೆ ಬೆಂಬಲ
ನಿವೇಶನ ರಹಿತರ ಸಮಸ್ಯೆಯನ್ನು ಮುಂದಿಟ್ಟು ನಿರಂತರವಾಗಿ ನಮ್ಮನ್ನು ಬೆಂಬಲಿಸುತ್ತಿರುವ ರಾಜಕೀಯ ಪಕ್ಷದ ಸಭೆ ಎ.15ರಂದು ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾವೇಶಕ್ಕೆ ನಿವೇಶನ ರಹಿತರ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ಘೋಷಿಸಿದೆ ಹಾಗೂ ನಿವೇಶನ ರಹಿತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಿವೇಶನ ರಹಿತರ ಸಮಸ್ಯೆಗಾಗಿ ಉಪವಾಸ ಸತ್ಯಾಗ್ರಹ ಮಾಡಿ, ಹಗಲು ರಾತ್ರಿ ಧರಣಿ ಮಾಡಿ, ಜೈಲ್ ಬರೋ ನಡೆಸಿದ ಪಕ್ಷದ ಸಭೆಯಲ್ಲಿ ನಾವು ಭಾಗವಹಿಸುತ್ತಿರುವುದಾಗಿ ನಿವೇಶನ ರಹಿತರ ಸಂಘಟನೆಯ ಅಧ್ಯಕ್ಷೆ ಪ್ರಭಾವತಿ ಬೋಳೂರು, ಕಾರ್ಯದರ್ಶಿ ಮಂಜುಳಾ ಶೆಟ್ಟಿ ಹಾಗೂ ಸಂಘಟನಾ ಸಂಚಾಲಕ ಸಂತೋಷ್ ಶಕ್ತಿನಗರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿವೇಶನ ರಹಿತರ ಹೋರಾಟ ಸಮಿತಿಯ ಸದಸ್ಯರಾದ ರೋಹಿಣಿ ಜಲ್ಲಿ ಗುಡ್ಡೆ, ಶೋಭ ಊರ್ವ ಸ್ಟೋರ್, ರೋಹಿಣಿ ಮಣ್ಣಗುಡ್ಡೆ, ಸಂಘಟನಾ ಸಮಿತಿಯ ಸದಸ್ಯರು ಮತ್ತು ಸಿಪಿಎಂ ಜಿಲ್ಲಾ ಸಮಿತಿಯ ಸದಸ್ಯರಾದ ಯೋಗೀಶ್ ಜಪ್ಪಿನ ಮೊಗರು, ಸಂತೋಷ್ ಕುಮಾರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.