ಆರೋಪಿ ಶಿರಸ್ತೇದಾರ್ ರಕ್ಷಣೆಗೆ ಪೊಲೀಸರಿಂದ ಹುನ್ನಾರ: ರೈತ ಸಂಘ ಆರೋಪ
ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಡತ ಕಳ್ಳತನ ಪ್ರಕರಣ

ಚಿಕ್ಕಮಗಳೂರು, ಏ.12: ತಮ್ಮ ಕಚೇರಿಯಲ್ಲಿ ಕಡತ ಕಳುವಾಗಿದೆ ಎಂದು ಮೂಡಿಗೆರೆ ತಹಶೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸದ ಮೂಡಿಗೆರೆ ಠಾಣೆಯ ಪಿಎಸ್ಸೈ ಗವಿರಾಜ್ ಎಂಬವರು ಆರೋಪಿಯನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ್ ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಕಚೇರಿಗಳಲ್ಲಿರುವ ಕಡತಗಳು ಸರಕಾರಿ ಆಸ್ತಿಯಾಗಿದ್ದು, ಅವುಗಳ ರಕ್ಷಣೆ ಹೊಣೆ ಅಧಿಕಾರಿಗಳದ್ದಾಗಿದೆ. ಅವು ನಾಪತ್ತೆಯಾದರೆ ಸಂಬಂಧಿಸಿದ ಅಧಿಕಾರಿ ತಕ್ಷಣ ಪೊಲೀಸರಿಗೆ ದೂರು ನೀಡಬೇಕೆಂಬ ನಿರ್ದೇಶನವಿದೆ ಎಂದ ಅವರು, ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಪ್ರಮುಖ ಕಡತವೊಂದು ಕಳುವಾಗಿದ್ದು, ಈ ಬಗ್ಗೆ ಕಳೆದ 2015ರ ನವೆಂಬರ್ 31 ರಂದು ತಹಶೀಲ್ದಾರ್ ಅವರು ಶಿರಸ್ತೆದಾರ್ ಗಿಡ್ಡೇಗೌಡ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿಸಿದರು.
ಆದರೆ ಠಾಣಾಧಿಕಾರಿಗಳು ಪ್ರಕರಣ ದಾಖಲಿಸದೆ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡಿದ್ದರು. ಹೀಗಾಗಿ ತಾವು ಹೆಚ್ಚುವರಿ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ಅವರು ಠಾಣಾಧಿಕಾರಿ ಗವಿರಾಜ್ ಅವರ ವಿಚಾರಣೆ ನಡೆಸಿದ್ದು, ಗವಿರಾಜ್ ಅವರು ಗಿಡ್ಡೇಗೌಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿರುವುದನ್ನು ಖಚಿತಪಡಿಸಿ ಎಸ್ಪಿಗೆ ವರದಿ ನೀಡಿದ್ದರು ಎಂದು ತಿಳಿಸಿದರು.
ಈ ವರದಿಯ ನಂತರ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಎಸ್ಪಿ ಸೂಚಿಸಿದ್ದರೂ ಗವಿರಾಜ್ ಅವರು ತಾವು ತನಿಖೆ ನಡೆಸಿದ್ದು, ಗಿಡ್ಡೇಗೌಡ ಅವರು ಕಡತ ಕಳ್ಳತನ ಮಾಡಿರುವ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ತಹ ಸೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಸದ್ಯ ಗಿಡ್ಡೇಗೌಡ ಅವರು ಚಿತ್ತುವಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು ಮಂಜೂರಾತಿ ಕುರಿತಂತೆ ಅಕ್ರಮ ಎಸಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿ ಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ ಮೂಡಿಗೆರೆಯಲ್ಲಿ ಗಿಡ್ಡೇಗೌಡ ಅವರನ್ನು ರಕ್ಷಣೆ ಮಾಡಿ ರುವ ಗವಿರಾಜ್ ಅವರು ಇಲ್ಲಿ ಠಾಣಾಧಿಕಾರಿಯಾಗಿದ್ದು, ಅವರು ಮತ್ತೆ ಆರೋಪಿಯನ್ನು ರಕ್ಷಣೆ ಮಾಡುತ್ತಾರೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ಗವಿರಾಜ್ ಅವರು ಬಣಕಲ್ ಠಾಣಾಧಿಕಾರಿಯಾಗಿರುವ ಸಂದರ್ಭದಲ್ಲೂ ಹಲವು ಪ್ರಕರಣದಲ್ಲಿ ಸಿಲುಕಿರುವುದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಗಮನದಲ್ಲಿರಬಹುದು ಎಂದ ಅವರು, ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮವಾಗವಬೇಕೆಂಬುದು ತಮ್ಮ ಒತ್ತಾಯವಾಗಿದೆ ಎಂದರು.
ಸರ್ಕಾರಿ ಆಸ್ತಿಯಾದ ಕಡತಗಳ ರಕ್ಷಣೆಗಾಗಿ ಎಫ್ಐಆರ್ ದಾಖಲಿಸಿ ಶಿರಸ್ತೇದಾರ್ ಗಿಡ್ಡೇಗೌಡರನ್ನು ಏಕೆ ವಿಚಾರಣೆ ನಡೆಸಿಲ್ಲ. ಬಣಕಲ್ ಠಾಣೆ ಯಲ್ಲಿ ಬಹಳ ಕಾಲದಿಂದ ಕೆಟ್ಟಿರುವ ಸಿಸಿ ಕ್ಯಾಮರ ಏಕೆ ದುರಸ್ಥಿಪಡಿಸುತ್ತಿಲ್ಲ. ಐಜಿಪಿ ಅವರ ಆದೇಶದಂತೆ ಅಡಿಕೆ ಕಳವು ಪ್ರಕರಣ ವರದಿ ಏಕೆ ತಯಾರಿಸಿಲ್ಲ ಎಂಬುದಕ್ಕೆ ತಮಗೆ ಉತ್ತರ ಬೇಕಾಗಿದೆ ಎಂದು ಹೇಳಿ ದರು.
ಗೋಷ್ಟಿಯಲ್ಲಿ ರೈತಮುಖಂಡರಾದ ಕೆ.ಕೆ.ಕೃಷ್ಣೇಗೌಡ, ಲಕ್ಷ್ಮಣಗೌಡ, ಪರ ಮೇಶ್ ಮತ್ತು ಕೆ.ಪಿ.ಚಂದ್ರೇಗೌಡ ಉಪಸ್ಥಿತರಿದ್ದರು.







